
ಆನೆಕಲ್, ಜುಲೈ 12: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta Biological Park)ದ ಪ್ರವೇಶ ಶುಲ್ಕ (Tiket Price Hike) ಏರಿಕೆಗೆ ಸರ್ಕಾರ (Karnataka Government) ಅಸ್ತು ಎಂದಿದೆ. ಶೇ 20 ರಷ್ಟು ಪ್ರವೇಶ ಶುಲ್ಕ ಹೆಚ್ಚಳಕ್ಕೆ ಅರಣ್ಯ ಇಲಾಖೆ (Forest Department) ಒಪ್ಪಿಗೆ ಸೂಚಿಸಿದ್ದು, ಅಂತಿಮ ಆದೇಶ ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದೆ. ಆಗಸ್ಟ್ 1 ರಿಂದ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತೆ ಇದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಜೂ ವೀಕ್ಷಣೆಗೆ ವಯಸ್ಕರಿಗೆ ಹಾಲಿ ಟಿಕೆಟ್ ದರ 100 ರೂ. ಇದ್ದು 120 ಆಗಲಿದೆ.
ಮಕ್ಕಳಿಗೆ ಹಾಲಿ ಟಿಕೆಟ್ ದರ 50 ರೂ. ಇದ್ದು 60 ರೂ. ಆಗಲಿದೆ. ಹಿರಿಯ ನಾಗರಿಕರಿಗೆ ಹಾಲಿ ಟಿಕೆಟ್ ದರ 60 ರೂ. ಇದ್ದು 70 ರೂ. ಆಗಲಿದೆ. ಅಲ್ಲದೆ ಸಫಾರಿ ಕೊಂಬೋ ಪ್ಯಾಕ್ ದರ ಕೂಡ ಹೆಚ್ಚಳವಾಗಲಿದೆ. ವಾರದ ದಿನಗಳಲ್ಲಿ 350 ರೂ. ಇದ್ದಿದ್ದು, 370 ರೂ. ಆಗಲಿದೆ. ವಾರದ ಕೊನೆ ದಿನಗಳಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ 400 ರೂ. ಇದ್ದಿದ್ದು, 420 ರೂ. ಆಗಲಿದೆ.
ಪ್ರಾಣಿಗಳ ಆಹಾರ, ನಿರ್ವಹಣೆ, ಸಿಬ್ಬಂದಿ ವೇತನ ಹೆಚ್ಚಳವಾಗಿದೆ. ಆದರೆ, ಕಳೆದ ಐದು ವರ್ಷದಿಂದ ಮೃಗಾಲಯದ ಟಿಕೆಟ್ ದರ ಏರಿಕೆ ಆಗಿಲ್ಲ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಸ್ವಾಯತ್ತ ಸಂಸ್ಥೆಯಾಗಿದ್ದು, ಪ್ರವಾಸಿಗರ ಟಿಕೆಟ್ ಹಣವೇ ಆದಾಯದ ಮೂಲವಾಗಿದೆ. ಹೀಗಾಗಿ, ಶೇ 50 ರಷ್ಟು ಪ್ರವೇಶ ಶುಲ್ಕ ಹೆಚ್ಚಳಿಸುವಂತೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಾಧಿಕಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಸರ್ಕಾರ ಶೇ 20 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದೆ. ಪರಿಷ್ಕೃತ ದರ ಆಗಸ್ಟ್ 1 ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ತಿಳಿಸಿದ್ದಾರೆ.
ಈಗಾಗಲೇ ಬೆಲೆ ಏರಿಕೆ ಜನರನ್ನು ಕಂಗೆಡಿಸಿದೆ. ಇದರ ನಡುವೆ ದಿನನಿತ್ಯದ ಜಂಜಾಟದಿಂದ ರೋಸಿ ಹೋಗಿ ಮನರಂಜನೆಗಾಗಿ ಮಕ್ಕಳಿಗೆ ಅಪರೂಪದ ವನ್ಯಜೀವಿಗಳನ್ನು ಪರಿಚಯಿಸಲು ದೂರದ ಊರುಗಳಿಂದ ಕುಟುಂಬದೊಂದಿಗೆ ಪ್ರವಾಸಿಗರು ಬರುತ್ತಾರೆ. ದೇಶ-ವಿದೇಶಗಳಿಂದಲೂ ಸಾಕಷ್ಟು ಪ್ರವಾಸಿಗರು ಬರುತ್ತಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಕಷ್ಟು ಹಣ ಕೂಡ ಸಂಗ್ರಹ ಆಗುತ್ತಿದೆ. ಆದರೂ ಟಿಕೆಟ್ ದರ ಏರಿಕೆ ಮಾಡುತ್ತಿರುವುದರ ಬಿಸಿ ಪ್ರವಾಸಿಗರಿಗೆ ತಟ್ಟಲಿದೆ.
ಇದನ್ನೂ ಓದಿ: ಬನ್ನೇರುಘಟ್ಟ ಅರಣ್ಯ ವಲಯದಲ್ಲಿ ಜಿಂಕೆ ಮಾಂಸ ಕಟ್ ಮಾಡುತ್ತಿದ್ದವ ಅರೆಸ್ಟ್
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಟಿಕೆಟ್ ದರ ಶೇ 20 ರಷ್ಟು ಏರಿಕೆಗೆ ಕೆಲ ಪ್ರವಾಸಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನ ಅಭಿವೃದ್ಧಿ ಹೊಂದಿದೆ. ಪ್ರಾಣಿಗಳ ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕೆ ಸರ್ಕಾರದಿಂದ ಅನುದಾನ ಪಡೆಯಲಿ ಎನ್ನುತಾರೆ. ಕೆಲ ಪ್ರವಾಸಿಗರು ವನ್ಯಜೀವಿಗಳ ನಿರ್ವಹಣೆಗಾಗಿ ಟಿಕೆಟ್ ದರ ಹೆಚ್ಚಿಸಲಿ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಟಿಕೆಟ್ ದರ ಹೆಚ್ಚಳದ ಬಗ್ಗೆ ಪ್ರವಾಸಿಗರಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ಆದರೂ, ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಮತ್ತು ಮತ್ತಷ್ಟು ಅಪರೂಪದ ಪ್ರಾಣಿಗಳನ್ನು ಕಾಣುವಂತಾಗಬೇಕು ಎಂದು ಆಗ್ರಹ ಕೂಡ ಕೇಳಿ ಬರುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 pm, Sat, 12 July 25