ಬೆಂಗಳೂರಿನ ಏರ್ಪೋರ್ಟ್ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್ ನೋಡಿ ಸಿಬ್ಬಂದಿ ಶಾಕ್
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಮಾಚಾರದ ಪಾರ್ಸೆಲ್ ಪತ್ತೆಯಾಗಿರುವುದು ಸಿಬ್ಬಂದಿಯಲ್ಲಿ ಆತಂಕ ಸೃಷ್ಟಿಸಿದೆ. ಮಹಿಳೆ-ಪುರುಷರ ಬೆತ್ತಲೆ ಫೋಟೋ, ಕೊಳೆತ ಟೊಮ್ಯಾಟೋ, ಹೂವಿನ ಹಾರ, ಕಬ್ಬಿಣದ ತುಂಡುಗಳು ಪಾರ್ಸೆಲ್ನಲ್ಲಿದ್ದವು ಎಂದು ಈ ವಿಚಿತ್ರ ಘಟನೆಯಿಂದಾಗಿ ಕೆಲ ಸಿಬ್ಬಂದಿ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ವಿಮಾನ ನಿಲ್ದಾಣದ ಭದ್ರತೆ ದೃಷ್ಟಿಯಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೇವನಹಳ್ಳಿ, ಮಾರ್ಚ್ 10: ಇತರರ ಮೇಲಿನ ದ್ವೇಷಕ್ಕೆ ಮನೆಯಲ್ಲಿ ಅಷ್ಟೇ ಅಲ್ಲದೆ ರಸ್ತೆಗಳಲ್ಲಿ, ಹೋಟೆಲ್ಗಳಲ್ಲಿ ಸಹ ವಾಮಾಚಾರ ಮಾಡಿದ ಸಾಕ್ಷಿಗಳು ಸಿಗುತ್ತಿದ್ದವು. ಆದರೆ ಲಕ್ಷಾಂತರ ಜನರು ಓಡಾಡುವ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ (Airport) ಇಂತಹ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ. ವಿಮಾನ ನಿಲ್ದಾಣದ ಅಂಚೆ ಕಚೇರಿಗೆ ವಾಮಾಚಾರದ ಪಾರ್ಸೆಲ್ ಒಂದು ಬಂದಿದ್ದು, ಅದರಲ್ಲಿದ್ದ ವಸ್ತುಗಳು ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿವೆ.
ಬಾಕ್ಸ್ನಲ್ಲಿ ಸಿಕ್ಕಿದ್ದೇನೇನು ಗೊತ್ತಾ?
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಪಾರ್ಸೆಲ್ ಒಂದು ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಯು ಜನವರಿ 6ರಿಂದ 22ರ ನಡುವೆ ವಿಮಾನ ನಿಲ್ದಾಣದ ವಿವಿಧೆಡೆ ಓಡಾಡಿ, ಆಡಳಿತ ಮಂಡಳಿ ಕಚೇರಿ ವಿಳಾಸಕ್ಕೆ ಅಂಚೆ ಮೂಲಕ ಬಂದ ಪಾರ್ಸೆಲ್ ಕಳುಹಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಚೇರಿಗೆ ಬಂದ ಬಾಕ್ಸ್ ತೆರೆಯುತ್ತಿದ್ದಂತೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಪಾರ್ಸೆಲ್ ಒಳಗೆ ಮಹಿಳೆ ಮತ್ತು ಪುರುಷನ ಬೆತ್ತಲೆ ಫೋಟೋಗಳನ್ನು ಇಟ್ಟು, ಅದರ ಸುತ್ತಲೂ ಕೊಳೆತ ಟೊಮ್ಯಾಟೋ ಹಾಗೂ ಹೂವಿನ ಹಾರವನ್ನು ಹಾಕಲಾಗಿತ್ತು. ಅಲ್ಲದೆ ಹಾರದ ಮೇಲೆ ಕಬ್ಬಿಣದ ತುಂಡು ಹಾಗೂ ಟೂತ್ಪೇಸ್ಟ್ ಇಟ್ಟು ಪೂಜೆ ಮಾಡಿದ ರೀತಿಯಲ್ಲಿ ವಸ್ತುಗಳನ್ನು ಜೋಡಿಸಿ ಪಾರ್ಸೆಲ್ ಮಾಡಿರುವುದು ಕಂಡುಬಂದಿದೆ.
ಇದನ್ನೂ ಓದಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ: ರನ್ವೇಗೆ ನುಗ್ಗಿದ ಬೀದಿ ನಾಯಿಗಳು, ತಪ್ಪಿದ ಭಾರೀ ಅನಾಹುತ
ಕೆಲಸಕ್ಕೆ ಬರಲೂ ಹೆದರುತ್ತಿರುವ ಸಿಬ್ಬಂದಿ
ಇದನ್ನು ನೋಡಿ ವಿಮಾನ ನಿಲ್ದಾಣದ ಸಿಬ್ಬಂದಿ ಆತಂಕಕ್ಕೊಳಗಾಗಿದ್ದು, ಕೆಲವರ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಈ ವಿಚಿತ್ರ ಪಾರ್ಸೆಲ್ ಘಟನೆ ಹಿನ್ನೆಲೆ ಕೆಲ ಸಿಬ್ಬಂದಿ ಕೆಲಸಕ್ಕೆ ಬರಲೂ ಹಿಂಜರಿಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಐಎಬಿ ಸಿಬ್ಬಂದಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಆಧಾರಿಸಿ ಕೆಂಪೇಗಡ ಏರ್ಪೋರ್ಟ್ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪಾರ್ಸೆಲ್ ಕಳುಹಿಸಿದವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಿಮಾನ ನಿಲ್ದಾಣದ ಭದ್ರತೆ ದೃಷ್ಟಿಯಿಂದಲೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.