ಕೋಟ್ಯಂತರ ಮೌಲ್ಯದ ಜಮೀನು ಕಬಳಿಕೆಗೆ ಯತ್ನ: ಬದುಕಿರುವಾಗಲೇ ನಿವೃತ್ತ ಉದ್ಯೋಗಿಯ ಚಟ್ಟ ಕಟ್ಟಿದ ಭೂಗಳ್ಳರು

ದೊಡ್ಡಬಳ್ಳಾಪುರದ ನಿವೃತ್ತ HAL ಉದ್ಯೋಗಿಯೊಬ್ಬರ 40 ಎಕರೆ ಜಮೀನಿಗೆ ಭೂಗಳ್ಳರು ನಕಲಿ ಮರಣ ಪತ್ರ ಸೃಷ್ಟಿಸಿ ಕಬಳಿಸಲು ಯತ್ನಿಸಿದ್ದಾರೆ. ಜೀವಂತವಿದ್ದವರನ್ನು ಸತ್ತಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇನ್ನು ಈ ಅಕ್ರಮ ಪ್ರಶ್ನಿಸಲು ಹೋದಾಗ ಅಧಿಕಾರಿಗಳು ಲಕ್ಷಾಂತರ ರೂ ಲಂಚಕ್ಕೆ ಬೇಡಿಕೆಯಿಟ್ಟಿರು ಗಭೀರ ಆರೋಪಗಳು ಕೇಳಿಬಂದಿವೆ.

ಕೋಟ್ಯಂತರ ಮೌಲ್ಯದ ಜಮೀನು ಕಬಳಿಕೆಗೆ ಯತ್ನ: ಬದುಕಿರುವಾಗಲೇ ನಿವೃತ್ತ ಉದ್ಯೋಗಿಯ ಚಟ್ಟ ಕಟ್ಟಿದ ಭೂಗಳ್ಳರು
ರಘು ರಾಮಯ್ಯ
Image Credit source: tv9 kannada
Edited By:

Updated on: Apr 27, 2026 | 6:42 PM

ದೇವನಹಳ್ಳಿ, ಏಪ್ರಿಲ್​ 27: ಬೆಂಗಳೂರು ಸುತ್ತಮುತ್ತ ಜಮೀನಿನ (Land Scam) ಬೆಲೆ ಕೋಟಿ ಕೋಟಿ ದಾಟುತ್ತಿದ್ದಂತೆ ಭೂಗಳ್ಳರ ಅಟ್ಟಹಾಸ ಮಿತಿಮೀರಿದೆ. ಕಷ್ಟಪಟ್ಟು ದುಡಿದ ಹಣದಲ್ಲಿ ನಿವೃತ್ತ ಜೀವನಕ್ಕೆ ಆಸರೆಯಾಗಲೆಂದು ಖರೀದಿಸಿದ್ದ ಜಮೀನಿನ ಮೇಲೆ ಕಣ್ಣಾಕಿದ ಕಿಡಿಗೇಡಿಗಳು, ಮಾಲೀಕ ಬದುಕಿರುವಾಗಲೇ ಆತ ಸತ್ತು ಹೋಗಿದ್ದಾನೆ ಎಂದು ನಕಲಿ ಮರಣ ಪತ್ರ (fake death certificate) ಸೃಷ್ಟಿಸಿದ್ದಾರೆ. ಇಷ್ಟೇ ಅಲ್ಲದೆ, ಈ ಅಕ್ರಮಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದು, ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಯರ್ರಮುದ್ದನಹಳ್ಳಿಯಲ್ಲಿರುವ ಈ 40 ಎಕರೆ ಕೆಂಪು ಮಣ್ಣಿನ ಭೂಮಿ ನೋಡಲು ಅತ್ಯಂತ ಫಲವತ್ತಾಗಿದೆ. ಇದೇ ಈ ಎಲ್ಲ ಅವಾಂತರಗಳಿಗೆ ಮೂಲ. ಈ ಜಮೀನಿನ ಮಾಲೀಕ ರಘುರಾಮಯ್ಯ ಅವರು ಹೆಚ್‌ಎಎಲ್ ನಿವೃತ್ತ ಉದ್ಯೋಗಿ. ಮುಂದಿನ ಜೀವನದ ಭದ್ರತೆಗಾಗಿ ಅವರು ಈ ಭೂಮಿಯನ್ನು ಖರೀದಿಸಿದ್ದರು. ಆದರೆ ಇಂದು ಇದೇ ಭೂಮಿ ಅವರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಮಹಿಳಾ ಶೌಚಾಲಯದಲ್ಲಿ ಭ್ರೂಣ ಪತ್ತೆ; ಬೆಚ್ಚಿಬಿದ್ದ ಸಿಬ್ಬಂದಿ!

ಈ ಹಿಂದೆ ಜಮೀನು ಮಾರಾಟ ಮಾಡಲು ಕೆಲ ಬ್ರೋಕರ್ಗಳಿಗೆ ಜಮೀನು ದಾಖಲೆ ನೀಡಿದ್ದು, ನಂತರ ಮಾರಾಟ ಮಾಡುವುದು ಬೇಡ ಅಂತ ಕೈಬಿಟ್ಟಿದ್ದರು. ಇದೀಗ ಮಾಲೀಕ ಮಾರಾಟ ಮಾಡಲ್ಲ ಅಂದರೂ ಬೆಂಬಿಡದ ಕೆಲ ಭೂಗಳ್ಳರು ಬದುಕಿರುವ ರಘುರಾಮಯ್ಯರನ್ನ 1995ರಲ್ಲೇ ಸಾವನ್ನಪಿರುವುದಾಗಿ ನಕಲಿ ಡೆತ್ ಸರ್ಟಿಫಿಕೇಟ್ ತಯಾರಿಸಿ ಜಮೀನಿಗೆ ನಕಲಿ ದಾಖಲೆ ಮಾಡಿ ಕಿರಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.

ಅಧಿಕಾರಿಗಳಿಂದ 40 ಲಕ್ಷ ರೂ ಲಂಚಕ್ಕೆ ಬೇಡಿಕೆ: ರಘುರಾಮಯ್ಯ ಗಂಭೀರ ಆರೋಪ

ಇನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಎಸಿ (AC) ಕಚೇರಿಯಲ್ಲಿ ಮುಟೇಷನ್ ರದ್ದುಪಡಿಸಲಾಗಿದೆ.  ಇದನ್ನು ಪ್ರಶ್ನಿಸಲು ಹೋದರೆ ಅಧಿಕಾರಿಗಳು 40 ಲಕ್ಷ ರೂ ಲಂಚ ಕೇಳುತ್ತಿದ್ದಾರೆ ಎಂದು ರಘುರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಒಮ್ಮೆ ಮುಟೇಷನ್ ಆದ ಮೇಲೆ ರದ್ದು ಮಾಡಲು ಹೇಗೆ ಸಾಧ್ಯ ಎಂದು ಕೇಳಿದರೆ ಸಮರ್ಪಕ ಉತ್ತರ ನೀಡದೆ ಅಲೆದಾಡಿಸುತ್ತಿದ್ದಾರೆ. ರಾತ್ರಿ ವೇಳೆ ಭೂಗಳ್ಳರು ಜಮೀನಿನ ಬಳಿ ಬಂದು ಬೆದರಿಕೆ ಹಾಕುತ್ತಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂತ್ರಸ್ತ ಕುಟುಂಬ ಅಸಮಾಧಾನ ಹೊರಹಾಕಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರು ಸೋಲ್’ ಅನಾವರಣ: ಕಲಾಪ್ರೇಮಿಗಳ ಮನಗೆದ್ದ ಜೌಮ್ ಪ್ಲೆನ್ಸಾ ಶಿಲ್ಪಕಲೆ

ಬೆಂಗಳೂರು ಗ್ರಾಮಾಂತರದಲ್ಲಿ ಭೂ ಅಕ್ರಮಗಳು ಮಿತಿಮೀರುತ್ತಿವೆ. ನ್ಯಾಯ ಕೊಡಿಸಬೇಕಾದ ಅಧಿಕಾರಿಗಳೇ ಲಂಚಕ್ಕೆ ಕೈಯೊಡ್ಡುತ್ತಿರುವ ಆರೋಪಗಳು ಕೇಳಿಬಂದಿದ್ದು, ಈ ಕುರಿತು ಜಿಲ್ಲಾಡಳಿತ ಹಾಗೂ ಕಂದಾಯ ಸಚಿವರು ಪರಿಶೀಲಿಸಿ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us