ಬೆಂಗಳೂರು ಕಾಲ್ತುಳಿತ: ರಾಜ್ಯ ಸರ್ಕಾರ ಯುಟರ್ನ್​, ಪೊಲೀಸ್ ಅಧಿಕಾರಿಗಳ ಅಮಾನತು ರದ್ದು

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಚಾಂಪಿಯನ್​ ಆದ ಕಾರಣ ಬೆಂಗಳುರಿನಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ವೇಳೆ ಕಾಲ್ತುಳಿತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 11 ಜನರು ಮೃತಪಟ್ಟಿದ್ದರು. ಈ ಸಂಬಂಧ ರಾಜ್ಯ ಸರ್ಕಾರ, ಬೆಂಗಳೂರು ಪೊಲಿಸ್ ಆಯುಕ್ತ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕೈತೊಳಿದುಕೊಂಡಿತ್ತು. ಆದ್ರೆ, ಇದೀಗ ರಾಜ್ಯ ಸರ್ಕಾರ ಯುಟರ್ನ್ ಹೊಡೆದಿದೆ.

ಬೆಂಗಳೂರು ಕಾಲ್ತುಳಿತ: ರಾಜ್ಯ ಸರ್ಕಾರ ಯುಟರ್ನ್​, ಪೊಲೀಸ್ ಅಧಿಕಾರಿಗಳ ಅಮಾನತು ರದ್ದು
ಬೆಂಗಳೂರು ಕಾಲ್ತುಳಿತ

Updated on: Jul 28, 2025 | 6:58 PM

ಬೆಂಗಳೂರು, (ಜುಲೈ 18): ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ (bengaluru stampede) ರಾಜ್ಯ ಸರ್ಕಾರ, ಐವರು  ಪೊಲೀಸ್ ಅಧಿಕಾರಿಗಳನ್ನು (Police Officers) ಹೊಣೆ ಮಾಡಿ ಅವರನ್ನು ಅಮಾನತು ಮಾಡಿತ್ತು. ಇದಕ್ಕೆ ಭಾರೀ ಟೀಕೆಗಳು, ಖಂಡನೆಗಳು ವ್ಯಕ್ತವಾಗಿದ್ದವು. ಆದ್ರೆ, ಇದೀಗ ಅದೇನಾಯ್ತೋ ಏನೋ ರಾಜ್ಯ ಸರ್ಕಾರವೇ ಯುಟರ್ನ್​ ಹೊಡೆದಿದ್ದು, ತಾನೇ ಪೊಲೀಸ್ ಅಧಿಕಾರಿಗಳ ಅಮಾನತು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕಾಲ್ತುಳಿತ ದುರಂತಕ್ಕೆ ಪೊಲಿಸರೇ ನಿರ್ಲಕ್ಷ್ಯ ಕಾರಣ ಎಂದಿದ್ದ ರಾಜ್ಯ ಸರ್ಕಾರ ಇದೀಗ ದಿಢೀರ್ ಅಮಾನತು ಆದೇಶ ಹಿಂಪಡೆದುಕೊಂಡಿರುವುದು ಅಚ್ಚರಿ ಹಾಗೂ ಚರ್ಚೆಗೆ ಗ್ರಾಸವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Stampede) ಕಾಲ್ತುಳಿತ ದುರಂತಕ್ಕೆ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿತ್ತು. ಇದರಿಂದ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್‌, ಡಿಸಿಪಿ ಶೇಖರ್ ಹೆಚ್.ಟಿ., ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ASI ಬಾಲಕೃಷ್ಣ ಹಾಗೂ ಇನ್ಸ್​ಪೆಕ್ಟರ್​ ಗಿರೀಶ್​ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದ್ರೆ, ಇದೀಗ ಏಕಾಏಕಿ ರಾಜ್ಯ ಸರ್ಕಾರ ಯುಟರ್ನ್ ಹೊಡೆದಿದ್ದು, ಪೊಲಿಸ್ ಅಧಿಕಾರಿಗಳ ಅಮಾನತು ಆದೇಶವನ್ನು ವಾಪಸ್ ಪಡೆದುಕೊಂಡಿದೆ.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಆರ್​ಸಿಬಿ ವಿರುದ್ಧ ಕ್ರಿಮಿನಲ್ ಕೇಸ್, ಪೊಲೀಸರ ವಿರುದ್ಧ ಇಲಾಖಾ ತನಿಖೆಗೆ ಸಂಪುಟ ನಿರ್ಧಾರ

ಕಾಲ್ತುಳಿತ ಘಟನೆ ಸಂಬಂಧ ನ್ಯಾಯಮೂರ್ತಿ ಡಿ. ಮೈಕಲ್ ಕುನ್ಹಾ ಏಕ ಸದಸ್ಯ ಆಯೋಗ ಸಲ್ಲಿಸಿದ್ದ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ನಂತರ ಆರ್​ಸಿಬಿ, ಡಿಎನ್​ಎ ಹಾಗೂ ಕೆಎಸ್​​​ಸಿಎ ವಿರುದ್ಧ ಕ್ರಮಕ್ಕೆ ತೀರ್ಮಾನಿಸಲಾಯಿತು. ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೂಡ ಕುನ್ಹಾ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

ಇದನ್ನೂ ಓದಿ
ವಿರಾಟ್ ಕೊಹ್ಲಿ ಮೇಲೂ ಕೇಸ್ ಆಗುತ್ತಾ? ಪರಮೇಶ್ವರ್ ಕೊಟ್ಟರು ಮಾಹಿತಿ
ಕಾಲ್ತುಳಿತಕ್ಕೆ RCB ನೇರ ಹೊಣೆ ಎಂದ ಸರ್ಕಾರ: ಕೊಹ್ಲಿ ವಿಡಿಯೋ ಬಗ್ಗೆಯೂ ವರದಿ
ಕಾಲ್ತುಳಿತ: ವಿಕಾಸ್ ಅಮಾನತು ರದ್ದು ಪ್ರಶ್ನಿಸಿ ಹೈಕೋರ್ಟ್ ಮೊರೆಹೋದ ಸರ್ಕಾರ
ಬೆಂಗಳೂರು ಕಾಲ್ತುಳಿತ: ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ರದ್ದು

ಬೆಂಗಳೂರು ನಗರ ಮಾಜಿ ಪೊಲೀಸ್ ಕಮಿಷನರ್​ ಬಿ.ದಯಾನಂದ್​, ಐಪಿಎಸ್​ ಅಧಿಕಾರಿಗಳಾದ ವಿಕಾಸ್​ ಕುಮಾರ್​​, ಶೇಖರ್​, ಕಬ್ಬನ್ ಪಾರ್ಕ್ ಸಬ್​ ಡಿವಿಷನ್​ ಎಸಿಪಿ ಬಾಲಕೃಷ್ಣ, ಕಬ್ಬನ್ ಪಾರ್ಕ್‌ ಠಾಣೆಯ ಪಿಐ​ ಗಿರೀಶ್ ವಿರುದ್ಧವೂ ಪ್ರಕರಣ ದಾಖಲಾಗಲಿದೆ.

ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಕಾರಣ ನೀಡಿ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾಗಿದ್ದ ಬಿ. ದಯಾನಂದ್ ಸೇರಿಂದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿರುವ ಆದೇಶ ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಭಾರತೀಯ ಪೊಲೀಸ್​ ಒಕ್ಕೂಟ ಆಗ್ರಹಿಸಿತ್ತು.

ವಿಕಾಶ್ ಕುಮಾರ್ ತಮ್ಮ ಅಮಾನತು ಪ್ರಶ್ನಿಸಿ ರಾಜ್ಯ ಸರ್ಕಾರದ ವಿರುದ್ಧ ಸಿಎಟಿ ಮೊರೆ ಹೋಗಿದ್ದರು. ಇದನ್ನ ವಿಚಾರಣೆ ನಡೆಸಿದ್ದ ಸಿಎಟಿ, ವಿಕಾಶ್ ಕುಮಾರ್ ಅಮಾನತು ಆದೇಶವನ್ನು ರದ್ದುಗೊಳಿಸಿತ್ತು.ಬಳಿಕ ಸಿಎಟಿ ಆದೇಶ ಪ್ರಶ್ನಿಸಿ ಮೇಲ್ಮವಿ ಸಲ್ಲಿಸುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಆದ್ರೆ, ಇದೀಗ ಸರ್ಕಾರವೇ ಅಮಾನತು ಆದೇಶ ಹಿಂಪಡೆದುಕೊಂಡಿದೆ.

ಏನಿದು ಘಟನೆ?

ಜೂನ್ 4 ರಂದು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಘಟನೆಗೆ ಭದ್ರತಾ ಲೋಪದ ಆರೋಪ ಮೇರೆಗೆ ಅಂದಿನ ಬೆಂಗಳೂರು ಆಯುಕ್ತ ಬಿ.ದಯಾನಂದ್‌, ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್‌, ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್‌ ಎ.ಕೆ.ಗಿರೀಶ್ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ಇನ್ನು ಈ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ನ್ಯಾ.ಮೈಕಲ್ ಡಿ.ಕುನ್ಹಾ ನೇತೃತ್ವದ ನ್ಯಾಯಾಂಗ ಆಯೋಗ ಶಿಫಾರಸು ಮಾಡಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Mon, 28 July 25