ಹುಟ್ಟಿದ ಮಗುವನ್ನು ಬೆಂಗಳೂರಿನ ರಸ್ತೆ ಬದಿ ಎಸೆದ ತಾಯಿ; ಶಿಶುವನ್ನು ಕಾಪಾಡಿ ಮಾನವೀಯತೆ ಮೆರೆದ ಮಹಿಳೆ

ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ವೀವರ್ಸ್ ಕಾಲೋನಿಯ 5ನೇ ಅಡ್ಡ ರಸ್ತೆ ಬಳಿ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ. ಸ್ಥಳೀಯರಾದ ರತ್ನ ಎಂಬ ಮಹಿಳೆ ಮಗುವನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹುಟ್ಟಿದ ಮಗುವನ್ನು ಬೆಂಗಳೂರಿನ ರಸ್ತೆ ಬದಿ ಎಸೆದ ತಾಯಿ; ಶಿಶುವನ್ನು ಕಾಪಾಡಿ ಮಾನವೀಯತೆ ಮೆರೆದ ಮಹಿಳೆ
ಮಗು
Image Credit source: shutter stock
Edited By:

Updated on: May 16, 2022 | 6:40 PM

ಬೆಂಗಳೂರು: ಅದೆಷ್ಟೋ ಜನರಿಗೆ ಮಕ್ಕಳು ಬೇಕು ಎಂದು ಹಾಸ್ಪಿಟಲ್​ಗೆ, ದೇವಸ್ಥಾನಗಳಿಗೆ ಹೋಗಿ ಮಕ್ಕಳಿಗಾಗಿ ಪ್ರಾರ್ಥನೆ ಮಾಡುವ ಜನರು ಒಂದು ಕಡೆಯಾದರೆ ಮತ್ತೊಂದು ಕಡೆ ಹುಟ್ಟಿದ ಮಗುವನ್ನು ರಸ್ತೆ ಬದಿಯಲ್ಲಿ ಇಟ್ಟು ನಮಗೆ ಸಂಬಂಧವಿಲ್ಲ ಎನ್ನುವ ಜನರು ಕೂಡ ಇದ್ದಾರೆ. ಅಷ್ಟಕ್ಕೂ ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ರಸ್ತೆ ಬದಿಯಲ್ಲಿ ನವಜಾತ ಶಿಶು (Newborn Baby) ಪತ್ತೆಯಾಗಿದ್ದು, ಆ ನವಜಾತ ಶಿಶುವನ್ನು ಓರ್ವ ಮಹಿಳೆ ರಕ್ಷಿಸಿ ಪೊಲೀಸರಿಗೆ ಒಪ್ಪಿಸುವ ಮೂಲಕ ಮಾನವೀಯತೆ ತೋರಿಸಿದ್ದಾರೆ.

ಇಂದು ಮುಂಜಾನೆ ಸುಮಾರು 5 ಗಂಟೆಗೆ ಆಕೆ ನಿದ್ರೆಯಿಂದ ಎಚ್ಚರಗೊಂಡಿದ್ದರು. ಇದ್ದಕ್ಕಿದ್ದಂತೆ ಮನೆಯ ಹೊರಗಡೆಯಿಂದ ಮಗು ಅಳುವಿನ ಸದ್ದು ಕೇಳಿಸಿತು. ಆಗ ಮನೆಯಿಂದ ಹೊರಬಂದ ಆಕೆ ನವಜಾತ ಶಿಶುವನ್ನು ಕಂಡು ಆತಂಕಕ್ಕೆ ಒಳಗಾದರು. ರಸ್ತೆ ಬದಿಯಲ್ಲಿ ನವಜಾತು ಶಿಶುವನ್ನು ಕಂಡ ಮಹಿಳೆ ಕೂಡಲೇ ನವಜಾತ ಶಿಶುವನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸುವ ಮೂಲಕ ನವಜಾತ ಶಿಶುವಿಗೆ ಮರುಜೀವ ನೀಡಿದ್ದಾರೆ. ಅಷ್ಟಕ್ಕೂ ಇಂತಹ ಮನಕಲಕುವ ಘಟನೆ ನಡೆದಿದ್ದಾರೂ ಎಲ್ಲಿ? ಎಂದು ನೋಡುವುದಾದರೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ವೀವರ್ಸ್ ಕಾಲೋನಿಯ 5ನೇ ಅಡ್ಡ ರಸ್ತೆ ಬಳಿ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ. ಸ್ಥಳೀಯರಾದ ರತ್ನ ಎಂಬ ಮಹಿಳೆ ಮಗುವನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇಂದು ಮುಂಜಾನೆ 5 ಗಂಟೆ ಸಮಯದಲ್ಲಿ ಇದ್ದಕ್ಕಿದ್ದಂತೆ ಎಲ್ಲಿಂದಲೋ ಮಗು ಅಳುವ ಶಬ್ದ ಕೇಳಿತ್ತು. ಆಗ ರತ್ನಮ್ಮ ಕೂಡಲೇ ಹೊರಗಡೆ ಬಂದು ರಸ್ತೆ ಬದಿಯಲ್ಲಿ ಆಗ ತಾನೇ ಜನಿಸಿದ ನವಜಾತ ಶಿಶು ಕಾಣಿಸಿದೆ. ಮೈಗಂಟಿದ್ದ ರಕ್ತ ಕೂಡ ಒರೆಸದೆ ಯಾರೋ ಗೊತ್ತಿಲ್ಲದ ವ್ಯಕ್ತಿಗಳು ಮಗುವನ್ನು ಬಿಟ್ಟು ಹೋಗಿದ್ದಾರೆ. ಶಿಶುವನ್ನು ಕಂಡು ತಾಯಿ ಹೃದಯದ ಮಹಿಳೆ ರತ್ನ ಶಿಶುವಿಗೆ ಕೂಡಲೇ ಬಿಸಿ ನೀರಿನ ಸ್ನಾನ ಮಾಡಿಸಿ, ಹಾಲು ಕುಡಿಸಿ, ಮಾನವೀಯತೆಯನ್ನು ಮೆರೆದಿದ್ದಾರೆ.

ಇನ್ನು, ರತ್ನಮ್ಮನಿಗೆ ಇತ್ತೀಚೆಗೆ ತಾನೇ ಗಂಡ ಕಳೆದುಕೊಂಡಿದ್ದ ಮಹಿಳೆ ರತ್ನ ಇರುವ ಒಬ್ಬ ಮಗನ ಜೊತೆ ದೇವರು ಕೊಟ್ಟ ಮಗಳು ಎಂದು ತಾವೇ ಸ್ವತಃ ಮಗುವನ್ನು ಪೋಷಣೆ ಮಾಡಲು ಮುಂದಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನು ಕಾನೂನು ರೀತಿಯಲ್ಲಿ ತನಗೆ ದತ್ತು ನೀಡುವಂತೆ ಕೇಳಿದ್ದಾರೆ. ಆದರೆ, ಪೋಲಿಸರು ಮೊದಲು ಶಿಶುವಿನ ಆರೋಗ್ಯ ಮುಖ್ಯ ಎಂದು ಕೂಡಲೇ ನಗರದ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಅಲ್ಲಿನ ವೈದ್ಯರು ಮೂರು ದಿನಗಳ ಕಾಲ ಮಗುವಿನ ಆರೈಕೆ ಜೊತೆಗೆ ನಿಗಾ ವಹಿಸಬೇಕು ಎಂದಿದ್ದಾರೆ ಎನ್ನಲಾಗಿದೆ.

ಹಾಗಾಗಿ, ಹುಟ್ಟಿದ ಕೆಲವೇ ಕ್ಷಣಗಳಲ್ಲಿ ತಾಯಿಯಿಂದ ದೂರಾದ ಶಿಶುವಿನ ಹಾರೈಕೆ ಜವಾಬ್ದಾರಿ ಇಂದಿರಾ ಗಾಂಧಿ ಆಸ್ಪತ್ರೆ ವೈದ್ಯರ ಮೇಲಿದೆ. ವೈದ್ಯರು ಸೂಚಿಸಿದ ಬಳಿಕ ವಷ್ಟೇ ತನಗೆ ಮಗು ದತ್ತು ನೀಡಿದರೆ ಪೋಷಣೆ ಮಾಡುವುದು ಮಗುವನ್ನು ರಕ್ಷಣೆ ಮಾಡಿದ ಮಹಿಳೆ ರತ್ನಮ್ಮ ಹೇಳಿದ್ದಾರೆ.

ಒಟ್ಟಿನಲ್ಲಿ, ಅದೆಷ್ಟೋ ದಂಪತಿಗಳು ಮಕ್ಕಳಿಗಾಗಿ ಕಂಡ-ಕಂಡ ದೇವರ ಮೊರೆ ಹೋಗುವುದನ್ನು ನಾವು ಕಂಡಿದ್ದೆವೆ. ಆದರೆ, ಅದು ಯಾವ ಮಹಾ ತಾಯಿಯೋ ಆಗ ತಾನೇ ಹುಟ್ಟಿದ ನವಜಾತ ಹೆಣ್ಣು ಶಿಶುವನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದನ್ನು ಕಂಡು ಸ್ಥಳೀಯ ಮಹಿಳೆಯರೇ ಆಶ್ಚರ್ಯಕ್ಕೆ ಒಳಗಾಗಿ ಹೀಗೆ ಮಾಡಿದವರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

(ವರದಿ: ಬಾಲಾಜಿ)

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us