ಜೈಲಿಗೆ ಹೋಗಿ ಬಂದ್ರೂ ಕಳ್ಳತನ ಬಿಡದ ಅಸಾಮಿ; 18 ಲಕ್ಷ ರೂ. ಮೌಲ್ಯದ ವಾಹನಗಳನ್ನ ಕದ್ದು ಸಿಕ್ಕಿಬಿದ್ದ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಂತೆ ಇದೀಗ ಜೈಲಿಗೆ ಹೋಗಿ ಬಂದಿದ್ದ ಅಸಾಮಿಯೊಬ್ಬ, ಮತ್ತೆ 18 ಲಕ್ಷ ರೂ. ಮೌಲ್ಯದ 1 ಟೆಂಪೋ, 3 ಆಟೋ, 3 ಬೈಕ್ಗಳನ್ನ ಕದ್ದು ಬೆಂಗಳೂರಿನ ವಿವಿಪುರಂ ಪೊಲೀಸರ(VV Puram Police) ಕೈಗೆ ಸಿಕ್ಕಿಬಿದ್ದಿದ್ದಾನೆ.
![ಜೈಲಿಗೆ ಹೋಗಿ ಬಂದ್ರೂ ಕಳ್ಳತನ ಬಿಡದ ಅಸಾಮಿ; 18 ಲಕ್ಷ ರೂ. ಮೌಲ್ಯದ ವಾಹನಗಳನ್ನ ಕದ್ದು ಸಿಕ್ಕಿಬಿದ್ದ](https://images.tv9kannada.com/wp-content/uploads/2024/06/after-going-to-jail-stealing-again-18-lakhs-of-rupees-caught-stealing-valuable-vehicles.jpg?w=1280)
ಬೆಂಗಳೂರು, ಜೂ.28: ಜೈಲಿಗೆ ಹೋಗಿ ಬಂದರೂ ಕಳ್ಳತನ ಬಿಡದ ಅಸಾಮಿಯೊಬ್ಬ ಮತ್ತೆ ಕದ್ದು ಬೆಂಗಳೂರಿನ ವಿವಿಪುರಂ ಪೊಲೀಸರ(VV Puram Police) ಕೈಗೆ ಸಿಕ್ಕಿಬಿದ್ದಿದ್ದಾನೆ. ಅಭಿಷೇಕ್ ಅಲಿಯಾಸ್ ಮಿಲ್ಕಿ ಬಂಧಿತ ವ್ಯಕ್ತಿ. ಇತ ಈ ಹಿಂದೆ ಬೈಕ್ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಆದರೂ ಬುದ್ದಿ ಕಲಿಯದ ಖದೀಮ, ಮತ್ತೆ ತನ್ನ ಕಳ್ಳತನ ವೃತ್ತಿಯನ್ನ ಬಿಡದ ಅಭಿಷೇಕ್, ವಾರದ ಹಿಂದೆ ವಿವಿಪುರಂ ಠಾಣಾ ವ್ಯಾಪ್ತಿಯಲ್ಲಿ ಟೆಂಪೋ ಕದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.
ಜಯನಗರ, ವಿಜಯನಗರ, ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಕಳುವು
ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದ ವೇಳೆ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದ ಆರೋಪಿ ಅಭಿಷೇಕ್, ತಾನೂ ಜಯನಗರ, ವಿಜಯನಗರ, ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಕಳುವು ಮಾಡಿದ್ದಾಗಿ ಹೇಳಿದ್ದ. 18 ಲಕ್ಷ ರೂ. ಮೌಲ್ಯದ 1 ಟೆಂಪೋ, 3 ಆಟೋ, 3 ಬೈಕ್ಗಳನ್ನ ಕದ್ದಿದ್ದ. ಆ ವಾಹನಗಳನ್ನು ಮಾರಲು ನ್ಯಾಷನಲ್ ಕಾಲೇಜಿನ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ನಿಲ್ಲಿಸಿದ್ದ. ಬಳಿಕ ಪೊಲೀಸರ ವಿಚಾರಣೆ ವೇಳೆ ಕಳ್ಳತನದ ಬಗ್ಗೆ ಆರೋಪಿ ಮಿಲ್ಕಿ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ:ಬೆಂಗಳೂರು: ಹಂದಿಗಳನ್ನೂ ಬಿಡದ ಕಳ್ಳರು; ಎರಡೇ ತಿಂಗಳಲ್ಲಿ 300 ಕ್ಕೂ ಹೆಚ್ಚು ಸಾಕು ಹಂದಿ ಕಳ್ಳತನ
ನೆಲಮಂಗಲದಲ್ಲಿ ಹಣದ ಜೊತೆ ಬೈಕ್ ಎಗರಿಸಿದ ಖದೀಮ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲದಲ್ಲಿ ಹಣದ ಜೊತೆ ಇದ್ದ ಬೈಕ್ನ್ನೂ ಕಳ್ಳತನ ಮಾಡಿದ ಘಟನೆ ನಡೆದಿದೆ. ನೆಲಮಂಗಲದ ಅಡೆಪೇಟೆ ಉಮೇಶ್ ಎಂಬುವವರಿಗೆ ಸೇರಿದ ದ್ವಿಚಕ್ರ ವಾಹನ ಇದಾಗಿದ್ದು, ಡಿಕ್ಕಿಯಲ್ಲಿದ್ದ 20 ಸಾವಿರ ಹಣವನ್ನು ಕದ್ದು ದುಷ್ಕರ್ಮಿ ಪರಾರಿಯಾಗಿದ್ದಾನೆ. ಕಳ್ಳನ ಕೈಚಳಕ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Fri, 28 June 24