ಹುಡುಗಿ ಕೈಕೊಟ್ಟಿದ್ದಕ್ಕೆ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಯುವಕನ ಹೈಡ್ರಾಮಾ: ಪ್ರೇಮಿಯ ಹುಚ್ಚಾಟಕ್ಕೆ ಜನರು ಕಂಗಾಲು

ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಸೋಮಶೇಖರ್ ಎಂಬ ಯುವಕ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಆತನನ್ನು ಕೆಳಗಿಳಿಸಲು ಕಸರತ್ತು ನಡೆಸುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಹುಡುಗಿ ಕೈಕೊಟ್ಟಿದ್ದಕ್ಕೆ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಯುವಕನ ಹೈಡ್ರಾಮಾ: ಪ್ರೇಮಿಯ ಹುಚ್ಚಾಟಕ್ಕೆ ಜನರು ಕಂಗಾಲು
ಹೈಟೆನ್ಷನ್ ಕಂಬ ಹತ್ತಿದ ಭಗ್ನ ಪ್ರೇಮಿ
Image Credit source: tv9
Edited By:

Updated on: May 20, 2026 | 12:02 PM

ಆನೇಕಲ್, ಮೇ 20: ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಿಸಿ ಕೈಕೊಟ್ಟಿದ್ದಾಳೆಂಬ ಕಾರಣಕ್ಕೆ ಬೇಸತ್ತ ಯುವಕನೊಬ್ಬ ಅಪಾಯಕಾರಿ ಸಾಹಸ ಮಾಡಿದ್ದಾನೆ. ಆತ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಆನೇಕಲ್ (Anekal) ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ. ಚಿನ್ನಯ್ಯನಪಾಳ್ಯದ ನಿವಾಸಿಯಾದ ಸೋಮಶೇಖರ್ ಎಂಬಾತನೇ ವಿದ್ಯುತ್ ಕಂಬದ ಮೇಲೇರಿ ಹೈಡ್ರಾಮಾ ಸೃಷ್ಟಿಸಿರುವ ಪ್ರೇಮಿ. ಈತನ ಹುಚ್ಚಾಟದಿಂದಾಗಿ ಇಡೀ ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಗಂಟೆಗಟ್ಟಲೆ ಆತಂಕದಲ್ಲಿ ಕಳೆಯುವಂತಾಯಿತು.

ಮುಖ್ಯಾಂಶಗಳು

  • ಕಳೆದ 3 ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ ಸೋಮಶೇಖರ್.
  • ಆಕೆ ಮದುವೆ ನಿರಾಕರಿಸಿ ಲವ್ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಮನನೊಂದು ಈ ಕೃತ್ಯ .
  • ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ.

ಸ್ಥಳೀಯ ಮೂಲಗಳ ಪ್ರಕಾರ, ಸೋಮಶೇಖರ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಇತ್ತೀಚೆಗೆ ಯುವತಿಯು ಮದುವೆಗೆ ನಿರಾಕರಿಸಿ, ಪ್ರೇಮ ಸಂಬಂಧವನ್ನು ಮುರಿದುಕೊಳ್ಳಲು (ಲವ್ ಬ್ರೇಕಪ್) ಮುಂದಾಗಿದ್ದಾಳೆ. ಇದರಿಂದ ತೀವ್ರ ಆಕ್ರೋಶಗೊಂಡ ಸೋಮಶೇಖರ್, ಮೊದಲು ತನ್ನ ಮನೆಯ ಮೇಲ್ಛಾವಣಿಯ ಶೀಟ್‌ಗಳನ್ನು ಒಡೆದು ದಾಂಧಲೆ ನಡೆಸಿದ್ದಾನೆ. ಅದಾದ ಬಳಿಕವೂ ಆಕ್ರೋಶ ತಣಿಯದೇ, ಮನೆ ಸಮೀಪದಲ್ಲೇ ಇದ್ದ ಭಾರಿ ಗಾತ್ರದ ಹೈಟೆನ್ಷನ್ ವಿದ್ಯುತ್ ಕಂಬದ ಮೇಲೇರಿದ್ದಾನೆ. ‘ತಾನು ಪ್ರೀತಿಸಿದ ಹುಡುಗಿ ಸ್ಥಳಕ್ಕೆ ಬರುವವರೆಗೂ ತಾನು ಯಾವುದೇ ಕಾರಣಕ್ಕೂ ಕೆಳಗೆ ಇಳಿಯುವುದಿಲ್ಲ’ ಎಂದು ಕಂಬದ ಮೇಲಿಂದಲೇ ಪಟ್ಟು ಹಿಡಿದು ಕಿರುಚಾಡಿದ್ದಾನೆ.

ಹೈಟೆನ್ಷನ್ ಕಂಬದಲ್ಲಿ ಯುವಕ: ವಿಡಿಯೋ ಇಲ್ಲಿ ನೋಡಿ

ವಿಷಯ ತಿಳಿಯುತ್ತಿದ್ದಂತೆಯೇ ಆನೇಕಲ್ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಕಂಬದ ಸುತ್ತಲೂ ನೂರಾರು ಗ್ರಾಮಸ್ಥರು ಜಮಾಯಿಸಿದ್ದು, ಯುವಕನಿಗೆ ತಿಳಿಹೇಳಿ ಕೆಳಗಿಳಿಸಲು ಶತಪ್ರಯತ್ನ ನಡೆಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಯುವಕ ಮಾತ್ರ ಕೆಳಗಿಳಿಯಲು ಒಪ್ಪದೆ ಹಠ ಹಿಡಿದಿದ್ದಾನೆ. ಕಂಬದಲ್ಲಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಆಪಾಯವಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಲು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us