Bengaluru News: PSI ಮೇಲೆ ಹಲ್ಲೆ ಆರೋಪ: ಏನಿದು ಡೆಂಟಲ್​ ಮೆಡಿಕಲ್​ ವಿದ್ಯಾರ್ಥಿ ಕಿರಿಕ್​? ಯುವಕನ ತಂದೆ ಹೇಳಿದ್ದೇನು

ಪೀಣ್ಯ ಪೊಲೀಸ್​​ ಠಾಣೆಯಲ್ಲಿ ವಿಚಾರಣೆ ವೇಳೆ ಪಿಎಸ್​ಐ ಮೇಲೆ ಹಲ್ಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಮೌನೇಶ್​​ ಡೆಂಟಲ್​ ಮೆಡಿಕಲ್​ ವಿದ್ಯಾರ್ಥಿಯಾಗಿದ್ದಾನೆ.

Bengaluru News: PSI ಮೇಲೆ ಹಲ್ಲೆ ಆರೋಪ: ಏನಿದು ಡೆಂಟಲ್​ ಮೆಡಿಕಲ್​ ವಿದ್ಯಾರ್ಥಿ ಕಿರಿಕ್​? ಯುವಕನ ತಂದೆ ಹೇಳಿದ್ದೇನು
ಪಿಎಸ್​ಐ ಸಿದ್ದು ಹೂಗಾರ (ಎಡಚಿತ್ರ), ಪೀಣ್ಯ ಪೊಲೀಸ್​ ಠಾಣೆ (ಬಲಚಿತ್ರ)
ವಿವೇಕ ಬಿರಾದಾರ Edited By:

Updated on: Jun 14, 2023 | 3:44 PM

ಬೆಂಗಳೂರು: ಪೀಣ್ಯ ಪೊಲೀಸ್​​ ಠಾಣೆಯಲ್ಲಿ (Peenya Police Station) ವಿಚಾರಣೆ ವೇಳೆ ಪಿಎಸ್​ಐ (PSI) ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಹಲ್ಲೆ ಮಾಡಿದ ಮೌನೇಶ್​​ ಡೆಂಟಲ್​ ಮೆಡಿಕಲ್​ ವಿದ್ಯಾರ್ಥಿಯಾಗಿದ್ದು, ಪಿಎಸ್​ಐ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಅಲ್ಲದೇ ವಿಚಾರಿಸಲು ಬಂದ ಮೌನೇಶ್​ ಅಣ್ಣ ಸಹಿತ ಪೊಲೀಸ್​ ಠಾಣೆ ಎದುರು ಗಲಾಟೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ ಇದನ್ನು ಮೌನೇಶ್​ ತಂದೆ ಅಲ್ಲಗೆಳೆದಿದ್ದಾರೆ.

ಮೌನೇಶ್ ಬೆಂಗಳೂರಿನ ಕುವೆಂಪುನಗರ ನಿವಾಸಿಯಾಗಿದ್ದು, ಗೊರಗುಂಟೆಪಾಳ್ಯದಲ್ಲಿರುವ ಕಾಲೇಜಿಗೆ ತೆರಳುತಿದ್ದನು. ಈ ಸಂಬಂಧ ಮೌನೇಶ್ ಬಿಎಂಟಿಸಿ ಬಸ್ ಹತ್ತಿದ್ದನು. ಈ ವೇಳೆ ನಿರ್ವಾಹಕ ಪಾಸ್​ ತೋರಿಸಿ ಎಂದಿದ್ದಾರೆ. ಅದಕ್ಕೆ ಮೌನೇಶ್ ನಿರ್ವಾಹಕರಿಗೆ ಬಸ್ ಪಾಸ್ ಜೆರಾಕ್ಸ್ ತೋರಿಸಿದ್ದನು.

ಆಗ ನಿರ್ವಾಹಕ ಜೆರಾಕ್ಸ್ ಅಲ್ಲ ಒರಿಜಿನಲ್ ತೋರಿಸು ಎಂದಿದ್ದಾರೆ. ಆಗ ಮೌನೇಶ್​ ಮಹಿಳೆಯರು ಆಧಾರ್ ಕಾರ್ಡ್ ಜೆರಾಕ್ಸ್​ ತೋರಿಸಿದರೇ ಸುಮ್ಮನಿರುತ್ತೀಯಾ, ನಾನು ಪಾಸ್ ಜೆರಾಕ್ಸ್​ ​ ತೋರಿಸಿದರೇ, ಯಾಕೆ ಗಲಾಟೆ ಮಾಡುತ್ತೀಯಾ ಅಂತ ನಿರ್ವಾಹಕನಿಗೆ ಹೊಡೆದಿದ್ದಾನೆ.

ಇದನ್ನೂ ಓದಿ: ಪೊಲೀಸ್​​ ಠಾಣೆಯಲ್ಲಿ ವಿಚಾರಣೆ ವೇಳೆ PSI ಮೇಲೆ ಹಲ್ಲೆ

ನಂತರ ಬಸ್​​ನಲ್ಲಿದ್ದ ಎಲ್ಲರೂ ಸೇರಿ ಮೌನೇಶ್​​ನನ್ನು ಪೀಣ್ಯ ಪೊಲೀಸ್​ ಠಾಣೆಗೆ ಕರೆತದ್ದಿದ್ದರು. ಮೌನೇಶ್​ನನ್ನು  ಠಾಣೆ ಒಳಗೆ ಕೂರಿಸಿದ್ದ ವೇಳೆ,  ಮೌನೇಶ್ ಅಣ್ಣ ಠಾಣೆ ಬಳಿ ಬಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಠಾಣೆಯಲ್ಲಿ ಕುಳಿತಿದ್ದ ಮೌನೇಶ್ ಬಂದು ಏಕಾ ಏಕಿ ಪಿಎಸ್​ಐ ಮೇಲೆ ಹಲ್ಲೆ ಮಾಡಿದ್ದಾನೆ. ಪಿಎಸ್​ಐ ದವಡೆಗೆ ಪಂಚ್ ಮಾಡಿ ಬಳಿಕ ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿದ್ದಾನೆ. ಸದ್ಯ ಪೊಲೀಸರು ಮೌನೇಶ್​ನನ್ನು ವಶಕ್ಕೆ ಪಡೆದಿದ್ದು, ಮೌನೇಶ್ ಅಣ್ಣ ಠಾಣೆಯಿಂದ ಪರಾರಿಯಾಗಿದ್ದಾನೆ.

ಮೌನೇಶ್​ ತಂದೆ ಹೇಳಿಕೆ

ರಾತ್ರಿ ನೀಟ್ ಎಕ್ಸಾಮ್ ರಿಸಲ್ಟ್ ಬಂದಿತ್ತು. ಹೀಗಾಗಿ ಮಗ ಸ್ವಲ್ಪ ಬೇಸರದಿಂದ ಇದ್ದನು. ಈವತ್ತು ಬೆಳಗ್ಗೆ ಅಪ್ಪ ನನ್ನ ಕಾಲೇಜಿಗೆ ಡ್ರಾಪ್ ಮಾಡು ಅಂದ. ಆದರೆ ನಾನು ಗಂಗಮ್ಮ ಸರ್ಕಲ್ ತನಕ ಡ್ರಾಪ್ ಮಾಡಿ ಬಿಎಂಟಿಸಿ ಬಸ್ ಹತ್ತಿಸಿದ್ದೆ. ನಂತರ ನನಗೆ ಪೀಣ್ಯ ಪೊಲೀಸ್ ಠಾಣೆಯಿಂದ ಮಗ ಕರೆ ಮಾಡಿದ. ಅಳುತ್ತಾ, ನನ್ನನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ ಅಂತ ಕಾಲ್ ಮಾಡಿದ. ಕೂಡಲೇ ನಾನು ಠಾಣೆಗೆ ಬಂದಾಗ ಪಿಎಸ್​ಐ ಅವರು ನನ್ನ ಮೊದಲ ಮಗನ ಮೇಲೆ ಹಲ್ಲೆ ಮಾಡುತ್ತಿದ್ದರು. ನಾನು ಆ ಸಂದರ್ಭದಲ್ಲಿ ಇಲ್ಲೇ ಇದ್ದೆ. ನನ್ನ ಮಗನನ್ನು ತಡೆದು ನಾನು ಹೊರಗಡೆ ಕಳುಹಿಸಿದೆ. ಈ ವೇಳೆ ಮೌನೇಶ್ ತಮ್ಮ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಪಿಎಸ್​ಐ ಹೇಳುತ್ತಿದ್ದಾರೆ.

ಇಷ್ಟೊತ್ತಿಗೆ ಪೊಲೀಸರೆಲ್ಲರೂ ಸೇರಿ ಮೌನೇಶ್ ಮೇಲೆ ಹಲ್ಲೆ ಮಾಡಿದರು. ನಾನು ಮಗನ ಮೇಲೆ ಮಲಗಿ ಅಂಗಲಾಚಿದರೂ ಪೊಲೀಸರು ಬಿಟ್ಟಿಲ್ಲ. ಈಗ ಪೊಲೀಸರ ಮೇಲೆಯೇ ಹಲ್ಲೆಯಾಗಿದೆ ಅಂತಿದ್ದಾರೆ. ಏನು ಮಾಡೋದು ಗೊತ್ತಿಲ್ಲ ಎಂದು ಮೌನೇಶ್​ ತಂದೆ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Wed, 14 June 23

Loading...
Unable to load recommendations.
Follow Us