ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ: ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಚಾಲಕ
ಬೆಂಗಳೂರಿನ ಕೆ.ಆರ್. ಸರ್ಕಲ್ನಲ್ಲಿ ಸಿಗ್ನಲ್ನಲ್ಲಿ ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಕೃಷ್ಣಮೂರ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ನಿನ್ನೆ ಮಧ್ಯಾಹ್ನ ಸುಮಾರು 3:15 ಗಂಟೆಗೆ, ಮೆಜೆಸ್ಟಿಕ್ನಿಂದ ಚಂದಾಪುರದತ್ತ ತೆರಳುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಕೆ.ಆರ್. ಸರ್ಕಲ್ ಇಳಿಜಾರು ರಸ್ತೆಯಲ್ಲಿ ಆಟೋ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪ್ರಕರಣ ಸಂಬಂಧ ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಮುಖ್ಯಾಂಶಗಳು
- ಸಿಗ್ನಲ್ನಲ್ಲಿ ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ
- ಗಂಭೀರ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಸಾವು
- ಬೆಂಗಳೂರಿನ ಕೆ.ಆರ್.ಸರ್ಕಲ್ನಲ್ಲಿ ನಡೆದಿದ್ದ ಭೀಕರ ಅಪಘಾತ
ಬೆಂಗಳೂರು, ಜುಲೈ 19: ಸಿಗ್ನಲ್ನಲ್ಲಿ ನಿಂತಿದ್ದ ಆಟೋಗೆ ಅತಿ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಸಿಂಗಯ್ಯನಪಾಳ್ಯ ನಿವಾಸಿ ಕೃಷ್ಣಮೂರ್ತಿ(60) ಮೃತ ದುರ್ದೈವಿಯಾಗಿದ್ದು, ಕೆ.ಆರ್.ಸರ್ಕಲ್ನಲ್ಲಿ ಬಸ್ ಆಟೋಗೆ ಗುದ್ದಿತ್ತು. ಕೂಡಲೇ ಗಾಯಾಳು ಆಟೋ ಚಾಲಕನನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ.
ಬ್ರೇಕ್ ಫೇಲ್ ಎಂದು ಬಸ್ ಚಾಲಕನ ನಾಟಕ
ಇನ್ನು ಅಪಘಾತದ ಬೆನ್ನಲ್ಲೇ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕ ಬ್ರೇಕ್ ಫೇಲ್ ಆಗಿದೆ ಎಂದು ನಾಟಕವಾಡಿದ್ದು, ಬಸ್ನ ಟೋಯಿಂಗ್ ಮಾಡದೆ ಡ್ರೈವ್ ಮಾಡಿಕೊಂಡೇ ಬಿಎಂಟಿಸಿ ಸಿಬ್ಬಂದಿ ಕೊಂಡೊಯ್ದಿದ್ದಾರೆ. ಘಟನೆ ಸಂಬಂಧ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಆಟೋ ಚಾಲಕ ಕೃಷ್ಣಮೂರ್ತಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ: ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ; ಇದ್ದ ಏಕೈಕ ಮಗನನ್ನ ಕಳೆದುಕೊಂಡ ಕುಟುಂಬದ ಕಣ್ಣೀರ ಕಥೆ
ಪೊಲೀಸರ ಮಾಹಿತಿ ಪ್ರಕಾರ, ಮಧ್ಯಾಹ್ನ ಸುಮಾರು 3:15 ಗಂಟೆಗೆ, ಮೆಜೆಸ್ಟಿಕ್ನಿಂದ ಚಂದಾಪುರದತ್ತ ತೆರಳುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಕೆ.ಆರ್. ಸರ್ಕಲ್ ಇಳಿಜಾರು ರಸ್ತೆಯಲ್ಲಿ ಆಟೋ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಪಕ್ಕದಲ್ಲೇ ಸಾಗುತ್ತಿದ್ದ ಕಾರಿಗೆ ಅಪ್ಪಳಿಸಿದೆ. ಘಟನೆಯ ಬಳಿಕ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಸ್ಥಳೀಯರು ಹಾಗೂ ಪ್ರಯಾಣಿಕರ ಪ್ರಕಾರ, ಫ್ರೀಡಂ ಪಾರ್ಕ್ನಿಂದ ಕೆ.ಆರ್. ಸರ್ಕಲ್ವರೆಗೆ ಇರುವ ಇಳಿಜಾರು ರಸ್ತೆ ಮತ್ತು ಹಲವು ಮಾರ್ಗಗಳು ಒಂದೇ ಜಂಕ್ಷನ್ನಲ್ಲಿ ಸೇರುವುದರಿಂದ ಇಲ್ಲಿ ಪದೇಪದೇ ಅಪಘಾತದ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ. ಟ್ರಾಫಿಕ್ ಸಿಗ್ನಲ್ ತಪ್ಪಿಸಿಕೊಳ್ಳಲು ಕೆಲ ವಾಹನ ಚಾಲಕರು ವೇಗವಾಗಿ ಸಂಚರಿಸುವುದರಿಂದ ಅಪಾಯ ಹೆಚ್ಚುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:16 am, Sun, 19 July 26




