AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ವಿರೋಧ

ಬೆಂಗಳೂರಿನಲ್ಲಿ ನಾಳೆಯಿಂದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಲಿದ್ದು, ಫುಟ್​ಪಾತ್​ನಲ್ಲಿರುವ ಮಳಿಗೆಗಳನ್ನು ನೀವಾಗಿಯೇ ಸ್ವಯಂ ಪ್ರೇರಿತರಾಗಿ ತೆರವು ಮಾಡಿ. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಸಚಿವ ಕೃಷ್ಣಭೈರೇಗೌಡ ಖಡಕ್ ವಾರ್ನಿಂಗ್ ನೀಡಿದ್ದಾರೆ. ಆದರೆ ಪರ್ಯಾಯ ಜಾಗ ನೀಡದೆ ಒಕ್ಕಲೆಬ್ಬಿಸುವ ಈ ನಿರ್ಧಾರಕ್ಕೆ, ಬೀದಿ ಬದಿ ವ್ಯಾಪಾರಿಗಳ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ವಿರೋಧ
ಸಾಂದರ್ಭಿಕ ಚಿತ್ರImage Credit source: The Hindu
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Jun 30, 2026 | 6:27 PM

Share

ಮುಖ್ಯಾಂಶಗಳು

  • ಬೆಂಗಳೂರಲ್ಲಿ ನಾಳೆಯಿಂದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
  • ಮಳಿಗೆಗಳನ್ನು ಸ್ವಯಂ ಪ್ರೇರಿತರಾಗಿ ತೆರವು ಮಾಡುವಂತೆ ಸಚಿವರ ಸೂಚನೆ
  • ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ತೀವ್ರ ವಿರೋಧ

ಬೆಂಗಳೂರು, ಜೂನ್​​ 30: ನಾಳೆಯಿಂದ ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದ್ದು, ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಸಮಗ್ರ ಯೋಜನೆ ರೂಪಿಸಿ ಒತ್ತುವರಿ ತೆರವಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿದ್ದು, ಮೊದಲು ಜಾಗೃತಿ, ಬಳಿಕ ನೋಟಿಸ್, ಆನಂತರ ತೆರವು ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಹಾಗೂ ಬೀದಿ ವ್ಯಾಪಾರಿಗಳ ಕಾಯ್ದೆ ಪಾಲನೆ ಕಡ್ಡಾಯ ಹಿನ್ನೆಲೆ ಒತ್ತುವರಿ ತೆರವಿನ ಜೊತೆಗೆ ಫುಟ್‌ಪಾತ್ ದುರಸ್ತಿಗೂ ಆದ್ಯತೆ ನೀಡಲು ತೀಮಾರ್ನಿಸಲಾಗಿದೆ. ಪೊಲೀಸ್–ಪಾಲಿಕೆ ಇಲಾಖೆ ಸಮನ್ವಯದಲ್ಲಿ ಕಾರ್ಯಾಚರಣೆ ನಡೆಯಲಿದೆ.

ಸಚಿವರಿಂದ ಖಡಕ್​​ ವಾರ್ನಿಂಗ್​​

ಬೆಂಗಳೂರಿನಲ್ಲಿ ಫುಟ್​ಪಾತ್​ನಲ್ಲಿರುವ ಮಳಿಗೆಗಳನ್ನು ನೀವಾಗಿಯೇ ಸ್ವಯಂ ಪ್ರೇರಿತರಾಗಿ ತೆರವು ಮಾಡುವ ಮೂಲಕ ಜಾಗ ಬಿಟ್ಟುಕೊಡಿ. ಇಲ್ಲದಿದ್ದಲ್ಲಿ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬೇಕಾಗುತ್ತೆ ಎಂದು ಸಚಿವ ಕೃಷ್ಣಭೈರೇಗೌಡ ಎಚ್ಚರಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನ ತುಂಬಾ ಸ್ಪಷ್ಟವಾಗಿದ್ದು, ನಾವು ಕಠಿಣ ಕ್ರಮಕ್ಕೆ ಮುಂದಾಗಲು ಅವಕಾಶ ಕೊಡಬೇಡಿ. ಸದ್ಯ ಶೇ. 20ರಷ್ಟು ಫುಟ್ ಪಾತ್ ಮಾತ್ರ ಕಾರ್ಯಾಚರಣೆ ಮಾಡ್ತಿರೋದು. ನೀವು ಎಲ್ಲರೂ ಸಹಕಾರ ಕೊಡಬೇಕು ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ?; ಜಿಬಿಎ ಸಭೆಯಲ್ಲಿ ಅಧಿಕಾರಿಗಳ ಮೇಲೆ ಸಚಿವ ಕೃಷ್ಣಭೈರೇಗೌಡ ಗರಂ

ಕಾರ್ಯಾಚರಣೆ ತೀವ್ರ ವಿರೋಧ

ಫುಟ್‌ಪಾತ್ ಅತಿಕ್ರಮಣ ತಾವಾಗಿಯೇ ತೆರವು ಮಾಡಲು ನಾಳೆಯೇ ಡೆಡ್ ಲೈನ್ ನಡುವೆಯೂ ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪರ್ಯಾಯ ಜಾಗ ತೋರಿಸದೆ ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ. GBA ವತಿಯಿಂದಲೇ ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ನೀಡಲಾಗಿದೆ. ಈ ಸಂಬಂಧ ಟೌನ್ ವೆಂಡಿಂಗ್ ಕಮಿಟಿಯಲ್ಲಿ ಚರ್ಚೆ ಮಾಡಿ ಕಾರ್ಯಾಚರಣೆ ಮಾಡಬೇಕು ಎಂದು ಆಗ್ರಯಿಸಿರುವ ಅವರು, ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಅಡ್ಡಿ ಮಾಡದಂತೆ ಕಾನೂನು ಇದೆ ಎಂದೂ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us