ಕಿಟಕಿ ಸರಳು ಮುರಿದು ಉಗಾಂಡದ ನಾಲ್ವರು ಮಹಿಳೆಯರು ಎಸ್ಕೇಪ್; ಮತ್ತೆ ಡ್ರಗ್ಸ್ ದಂಧೆಗೆ ಇಳಿಯುವ ಆತಂಕ!
ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ ಉಗಾಂಡ ಮೂಲದ ನಾಲ್ವರು ಮಹಿಳೆಯರು ಕೊತ್ತನೂರಿನ ನಿರಾಶ್ರಿತರ ಕೇಂದ್ರದ ಕಿಟಕಿ ಸರಳು ಮುರಿದು ಪರಾರಿಯಾಗಿದ್ದಾರೆ. ಈಗಾಗಲೇ ಮಾದಕ ದ್ರವ್ಯ ಜಾಲದಲ್ಲಿ ಗುರುತಿಸಿಕೊಂಡಿರುವ ಇವರು, ಮತ್ತೆ ಡ್ರಗ್ಸ್ ಹಾಗೂ ಗಾಂಜಾ ಸ್ಮಗ್ಲಿಂಗ್ ದಂಧೆಯಲ್ಲಿ ಸಕ್ರಿಯರಾಗುವ ದಟ್ಟ ಆತಂಕ ಎದುರಾಗಿದೆ. ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಬೆಂಗಳೂರು, ಮೇ 18: ಸ್ಟೂಡೆಂಟ್ ಹಾಗೂ ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದು, ವೀಸಾ ಅವಧಿ ಮುಗಿದಿದ್ದರೂ ಸ್ವದೇಶಕ್ಕೆ ಮರಳದೆ ಅಕ್ರಮವಾಗಿ ನೆಲೆಸುವ ವಿದೇಶಿಗರ ಜಾಲ ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ‘ಹೋಮ್ ಆಫ್ ಹೋಪ್’ ನಿರಾಶ್ರಿತರ ಕೇಂದ್ರದಿಂದ ನಾಲ್ವರು ಉಗಾಂಡ ಮೂಲದ ಮಹಿಳೆಯರು (Uganda women) ಕಿಟಕಿ ಸರಳು ಮುರಿದು ಪರಾರಿಯಾಗಿದ್ದು, ಇವರು ಮತ್ತೆ ಮಾದಕ ವಸ್ತುಗಳ ಸ್ಮಗ್ಲಿಂಗ್ ಜಾಲದಲ್ಲಿ ಸಕ್ರಿಯರಾಗುವ ದಟ್ಟ ಸಾಧ್ಯತೆಗಳು ಎದುರಾಗಿವೆ.
ಮುಖ್ಯಾಂಶಗಳು
- ವೀಸಾ ಅವಧಿ ಮುಗಿದರೂ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿಗರ ಉಪಟಳ.
- ನಿರಾಶ್ರಿತರ ಕೇಂದ್ರದ ಕಿಟಕಿ ಸರಳು ಮುರಿದು ನಾಲ್ವರು ಮಹಿಳೆಯರು ಪರಾರಿಯಾಗಿದ್ದಾರೆ.
- ಎಸ್ಕೇಪ್ ಆದ ವಿದೇಶಿ ಮಹಿಳೆಯರು ಮತ್ತೆ ಡ್ರಗ್ಸ್ ದಂಧೆಗೆ ಇಳಿಯುವ ಆತಂಕ.
ಪೊಲೀಸರ ಕಣ್ಣು ತಪ್ಪಿಸಿ ಮಧ್ಯರಾತ್ರಿ ಎಸ್ಕೇಪ್!
ಕೊತ್ತನೂರು ಬಳಿಯ ಚಿಕ್ಕಗುಬ್ಬಿಯಲ್ಲಿರುವ ‘ಆಟೋ ರಾಜ’ ಅವರ ಉಸ್ತುವಾರಿಯ ನಿರಾಶ್ರಿತ ಕೇಂದ್ರದಲ್ಲಿ ನೈಜೀರಿಯಾ, ಉಗಾಂಡ, ಕೀನ್ಯಾ ಸೇರಿದಂತೆ 30ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ತಾತ್ಕಾಲಿಕವಾಗಿ ಇರಿಸಲಾಗಿತ್ತು. ಮೇ 11 ರಂದು ಮುಂಜಾನೆ 3 ಗಂಟೆಯ ಸುಮಾರಿಗೆ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿದ ಉಗಾಂಡದ ತೋಪಿಷ್ಟ, ನಗವ, ಸಫಿನಾ ಮತ್ತು ಪಿತೀನ ಎಂಬ ನಾಲ್ವರು ಮಹಿಳೆಯರು, ಎರಡನೇ ಅಂತಸ್ತಿನ ಕಿಟಕಿಯ ಕಬ್ಬಿಣದ ಗ್ರಿಲ್ ಮುರಿದು ಎಸ್ಕೇಪ್ ಆಗಿದ್ದಾರೆ.
ಮತ್ತೆ ಮಾದಕ ವಸ್ತುಗಳ ಸ್ಮಗ್ಲಿಂಗ್ ಜಾಲ ಸೇರುವ ಹೈ ಚಾನ್ಸ್!
ಪರಾರಿಯಾಗಿರುವ ಈ ನಾಲ್ವರು ಮಹಿಳೆಯರು ಈಗಾಗಲೇ ಡ್ರಗ್ಸ್ ಮತ್ತು ಗಾಂಜಾ ಸರಬರಾಜಿನಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ಹಿನ್ನೆಲೆ ಹೊಂದಿದ್ದಾರೆ. ನಿರಾಶ್ರಿತರ ಕೇಂದ್ರದಲ್ಲಿದ್ದ ಸಂದರ್ಭದಲ್ಲೂ ಇವರ ಬಳಿ ಗಾಂಜಾ ಮತ್ತು ಡ್ರಗ್ಸ್ ಪತ್ತೆಯಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡ ಇವರು, ತಮಗೆ ಪರಿಚಯವಿರುವ ಹಳೆಯ ಡ್ರಗ್ ನೆಟ್ವರ್ಕ್ ಮತ್ತು ಸ್ಮಗ್ಲಿಂಗ್ ಜಾಲವನ್ನು ತಕ್ಷಣವೇ ಮರುಸಂಪರ್ಕಿಸುವ ಹೈ ಚಾನ್ಸಸ್ ಇದೆ ಎಂದು ಶಂಕಿಸಲಾಗಿದೆ. ವೀಸಾ ಅವಧಿ ಮುಗಿದರೂ ಇಲ್ಲೇ ಉಳಿದುಕೊಂಡಿರುವುದರ ಮುಖ್ಯ ಉದ್ದೇಶವೇ ಈ ಡ್ರಗ್ಸ್ ದಂಧೆಯಾಗಿರುವುದರಿಂದ, ಇವರು ಸಮಾಜಕ್ಕೆ ಮತ್ತಷ್ಟು ಮಾರಕವಾಗುವ ಆತಂಕ ಮೂಡಿದೆ.
ಇದನ್ನೂ ಓದಿ ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ!
FRRO ಅಧಿಕಾರಿಗಳಿಗೆ ತಲೆನೋವಾದ ವಲಸಿಗರು
ಅಕ್ರಮ ವಲಸಿಗರನ್ನು ಇರಿಸಬೇಕಾದ FRRO ಜೈಲಿನಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಇವರನ್ನು ಆಶ್ರಮದಲ್ಲಿ ಇರಿಸಲಾಗಿತ್ತು. ಆದರೆ ಮಾದಕ ದ್ರವ್ಯಗಳ ವ್ಯಸನಿಗಳಾಗಿರುವ ಇವರು ಆಶ್ರಮದ ಸಿಬ್ಬಂದಿಯೊಂದಿಗೆ ನಿರಂತರವಾಗಿ ಮಾತಿನ ಚಕಮಕಿ ಹಾಗೂ ಗಲಾಟೆ ನಡೆಸುತ್ತಾ, ತಮಗೆ ಬೇಕಾದ ಮಾದಕ ವಸ್ತುಗಳ ಡೀಲಿಂಗ್ಗಾಗಿ ಈ ಸಂಚು ರೂಪಿಸಿ ಪರಾರಿಯಾಗಿದ್ದಾರೆ.
ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮತ್ತೆ ಸ್ಮಗ್ಲಿಂಗ್ ಜಾಲಕ್ಕೆ ಜೀವ ತುಂಬಲು ಹೊಂಚು ಹಾಕುತ್ತಿರುವ ಈ ನಾಲ್ವರು ವಿದೇಶಿ ಮಹಿಳಾ ಆರೋಪಿಗಳ ಪತ್ತೆಗಾಗಿ ಪೊಲೀಸರು ಹಗಲಿರುಳು ತೀವ್ರ ಶೋಧ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
