‘ಮೋದಿ ಜೀ ಬೆಂಗಳೂರಿನ ರಸ್ತೆಗಳು ತುಂಬಾ ಕೆಟ್ಟದಾಗಿವೆ’! ಪ್ರಧಾನಿ ಮೋದಿಗೆ ಕೈಬರಹದಲ್ಲೇ ಪತ್ರ ಬರೆದ ಐದರ ಪುಟಾಣಿ

ಬೆಂಗಳೂರಿನ ಐದು ವರ್ಷದ ಬಾಲಕಿ ಆರ್ಯ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರಿನ ಹದಗೆಟ್ಟ ರಸ್ತೆಗಳು ಮತ್ತು ಭಾರಿ ಸಂಚಾರ ದಟ್ಟಣೆಯ ಕುರಿತು ಪತ್ರ ಬರೆದಿದ್ದಾಳೆ. ಶಾಲೆ ಮತ್ತು ಕಚೇರಿಗೆ ತಲುಪಲು ತಡವಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾಳೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರ ಸಹಾನುಭೂತಿಗೆ ಕಾರಣವಾಗಿದೆ.

‘ಮೋದಿ ಜೀ ಬೆಂಗಳೂರಿನ ರಸ್ತೆಗಳು ತುಂಬಾ ಕೆಟ್ಟದಾಗಿವೆ’! ಪ್ರಧಾನಿ ಮೋದಿಗೆ ಕೈಬರಹದಲ್ಲೇ ಪತ್ರ ಬರೆದ ಐದರ ಪುಟಾಣಿ
ಪ್ರಧಾನಿ ಮೋದಿ ಹಾಗೂ ಬಾಲಕಿ ಬರೆದಿರುವ ಪತ್ರದ ಪ್ರತಿ

Updated on: Aug 11, 2025 | 10:13 AM

ಬೆಂಗಳೂರು, ಆಗಸ್ಟ್ 11: ಬೆಂಗಳೂರಿಗೆ ಭಾನುವಾರ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi), ನಮ್ಮ ಮೆಟ್ರೋ ಯೆಲ್ಲೋ ಲೈನ್ ಲೋಕಾರ್ಪಣೆ ಮಾಡಿದ್ದರು. ಮತ್ತೊಂದೆಡೆ ಅದೇ ಸಮಯದಲ್ಲಿ, ಐದು ವರ್ಷ ವಯಸ್ಸಿನ ಪುಟ್ಟ ಬಾಲಕಿಯೊಬ್ಬಳು ಬೆಂಗಳೂರಿನ ಹದಗೆಟ್ಟ ರಸ್ತೆಗಳ ಬಗ್ಗೆ ಹಾಗೂ ಸಂಚಾರದಟ್ಟಣೆ (Bengaluru Traffic) ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ನಿವಾಸಿ ಅಭಿರೂಪ್ ಎಂಬವರ ಪುತ್ರಿ ಆರ್ಯ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು, ನಗರದ ದೀರ್ಘಕಾಲದ ಸಂಚಾರ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾಳೆ. ಈ ಕುರಿತು ಅಭಿರೂಪ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿ ಮಾಹಿತಿ ಹಂಚಿಕೊಂಡಿದ್ದಾರೆ.

ಪುಟಾಣಿಯ ಕೈಬರಹದ ಪತ್ರವು ಸಾರ್ವಜನಿಕರ ಗಮನ ಸೆಳೆದಿದ್ದು, ಆನ್‌ಲೈನ್‌ನಲ್ಲಿ ಸಹಾನುಭೂತಿಯ ಅಲೆ ಹೊಮ್ಮಿದೆ.

ಬೆಂಗಳೂರಿನ ಬಾಲಕಿ ಮೋದಿಗೆ ಬರೆದ ಪತ್ರದಲ್ಲೇನಿದೆ?

‘ನರೇಂದ್ರ ಮೋದಿ ಜೀ, ಬೆಂಗಳೂರಿನಲ್ಲಿ ವಿಪರೀತ ಟ್ರಾಫಿಕ್ ಇದ್ದು ನಾವು ಶಾಲೆ ಹಾಗೂ ಕಚೇರಿಗಳಿಗೆ ತಡವಾಗಿ ತಲುಪುತ್ತಿದ್ದೇವೆ. ರಸ್ತೆ ತುಂಬಾ ಕೆಟ್ಟದಾಗಿದೆ. ದಯಮಾಡಿ ಸಹಾಯ ಮಾಡಿ’ ಎಂದು ಮೋದಿಗೆ ಬರೆದ ಪತ್ರದಲ್ಲಿ ಬಾಲಕಿ ಆರ್ಯ ಉಲ್ಲೇಖಿಸಿದ್ದಾಳೆ.

ಇದನ್ನೂ ಓದಿ
ಮೈಸೂರು ದಸರಾ 2025 ರ ಉದ್ಘಾಟಕರು ಯಾರು? ಸಚಿವ ಮಹದೇವಪ್ಪ ಕೊಟ್ಟರು ಸುಳಿವು
ಸಿಎಂ ಉದ್ಘಾಟಿಸಿದ್ದರೂ ಮಾದಪ್ಪನ ಭಕ್ತರ ಬಳಕೆಗೆ ಸಿಗದ ವಜ್ರಮಲೆ ಭವನ
ಇಂದಿನಿಂದ ವಿಧಾನಸಭೆ ಅಧಿವೇಶನ: ಸರ್ಕಾರದ ವಿರುದ್ಧ ಸಮರಕ್ಕೆ ವಿಪಕ್ಷಗಳ ತಂತ್ರ
ಮೆಟ್ರೋ ಕ್ರೆಡಿಟ್ ವಾರ್: ಮೋದಿ ಮುಂದೆಯೇ ಲೆಕ್ಕ ಬಿಚ್ಚಿಟ್ಟ ಸಿದ್ದರಾಮಯ್ಯ

‘ಪ್ರಧಾನಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ನನ್ನ 5 ವರ್ಷದ ಮಗಳು ಇದನ್ನು ಟ್ರಾಫಿಕ್ ಸಮಸ್ಯೆ ಪರಿಹರಿಸುವ ಅವಕಾಶವೆಂದು ಭಾವಿಸಿದ್ದಾಳೆ’ ಎಂದು ಅಭಿರೂಪ್ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಪುಟಾಣಿ ಬಾಲಕಿ ಮೋದಿಗೆ ಬರೆದ ಪತ್ರ

ಪುಟಾಣಿ ಬಾಲಕಿ ಪ್ರಧಾನಿಗೆ ಬರೆದ ಪತ್ರದ ಬಗ್ಗೆ ಅನೇಕರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ‘‘ಅವರು ನಿಮ್ಮ ಮಗಳನ್ನು ಭೇಟಿಯಾಗುತ್ತಾರೆ ಮತ್ತು ಅವರ ಆಸೆ ಈಡೇರುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂಬುದಾಗಿ @MayyankK3246 ಹ್ಯಾಂಡಲ್​​ನ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರ @scmitra ಪ್ರತಿಕ್ರಿಯಿಸಿ, 15 ವರ್ಷಗಳ ಹಿಂದೆ ತಮ್ಮ ಮಗಳು ಮುಂಬೈನಲ್ಲಿ ಶಬ್ದ ಮಾಲಿನ್ಯದ ಬಗ್ಗೆ ರಾಷ್ಟ್ರಪತಿಗಳಿಗೆ ಬರೆದಿದ್ದನ್ನು ಹಾಗೂ ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್ ನಾಯಕರ ಮೆಟ್ರೋ ಕ್ರೆಡಿಟ್ ವಾರ್: ಮೋದಿ ಮುಂದೆಯೇ ಲೆಕ್ಕ ಬಿಚ್ಚಿಟ್ಟ ಸಿದ್ದರಾಮಯ್ಯ

ಶಾಲಾ ಆಟದ ಮೈದಾನದ ಕಾಂಪೌಂಡ್​ಗಾಗಿ ತುಮಕೂರು ತಾಲೂಕಿನ ಬೆಳೆದರ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಸಿಮ್ರಾ ಸನೋಬರ್ ಎಂಬಾಕೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರವುದನ್ನು ಇಲ್ಲಿ ಸ್ಮರಿಸಬಹುದು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 am, Mon, 11 August 25

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us