ಗೌರಿ ಹತ್ಯೆ ಕೇಸ್: ಹೆಂಡ್ತಿ ಕೊಂದು ಸೂಟ್ಕೇಸ್ಗೆ ತುಂಬಿದ್ದೇಕೆ ಪತಿ? ಆ ರಾತ್ರಿ ನಡೆದಿದ್ದೇನು? ಕೊಲೆಗೆ ಕಾರಣ ಬಹಿರಂಗ
ಬೆಂಗಳೂರಿನ ಹುಳಿಮಾವು ಸಮೀಪದಲ್ಲಿ ನಡೆದ ಗೌರಿ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ನಡೆಸುತ್ತಿದ್ದಾರೆ. ತನಿಖೆ ವೇಳೆ ಪೊಲೀಸರಿಗೆ ಹಲವು ವಿಚಾರಗಳು ತಿಳಿದಿವೆ.ಗೌರಿ ಮತ್ತು ರಾಕೇಶ್ ಪ್ರೀತಿಸಿ ಮದುವೆಯಾಗಿದ್ದಾರೆ.ಕುಟುಂಬದ ವಿರೋಧದ ನಡುವೆಯೋ ಗೌರಿ ಮತ್ತು ರಾಕೇಶ್ ಮದುವೆಯಾದರೂ, ಅವರ ಮಧ್ಯೆ ಗಲಾಟೆಯಾಗಿದ್ದು ಏಕೆ? ಇಲ್ಲಿದೆ ವಿವರ

ಬೆಂಗಳೂರು, ಮಾರ್ಚ್ 28: ಬೆಂಗಳೂರಿನ (Bengaluru) ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯ ಗೌರಿ (Gowri) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ (Police) ತನಿಖೆ ವೇಳೆ ಹಲವು ವಿಚಾರಗಳು ಬಹಿರಂಗಗೊಂಡಿವೆ. ಮೃತ ಗೌರಿ ಮೂಲತಃ ಬೆಳಗಾವಿದವರು (Belagavi). ಗೌರಿ ಪತಿ, ಆರೋಪಿ ರಾಕೇಶ್ ಮುಂಬೈ ಮೂಲದವನು. ಗೌರಿ ಐದು ವರ್ಷದ ಮಗುವಿದ್ದಾಗ ತಂದೆ ಮೃತಪಟ್ಟಿದ್ದಾರೆ. ಗೌರಿ ತಾಯಿಯ ಆಶ್ರಯದಲ್ಲಿ ಬೆಳದಿದ್ದರು. ಆರೋಪಿ ರಾಕೇಶ್ ಮೃತ ಗೌರಿಯ ತಾಯಿಯ ಅಣ್ಣನ ಮಗನಾಗಿದ್ದಾನೆ. ಅಂದ್ರೆ, ವರಸೆಯಲ್ಲಿ ಗೌರಿಗೆ ರಾಕೇಶ್ ಸೋದರಮಾವನ ಮಗನಾಗುತ್ತಾನೆ. ಗೌರಿ ಮತ್ತು ರಾಕೇಶ್ ಪ್ರೀತಿಸಿ ಮದುವೆಯಾಗಿದ್ದಾರೆ. ಇವರ ಮದುವೆಗೆ ಗೌರಿ ತಾಯಿ ಮತ್ತು ಸಹೋದರ ಗಣೇಶ ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಗೌರಿ ಮತ್ತು ಗಣೇಶ ವಿವಾಹವಾಗಿದ್ದರು.
ಮದುವೆಯ ನಂತರ ಗಂಡನ ಮನೆಯವರಿಗೂ ಗೌರಿಗೂ ಹೊಂದಾಣಿಕೆಯಾಗಿರಲಿಲ್ಲ. ಆಗ, ನಾವಿಬ್ಬರೂ ಬೇರೆ ಹೋಗಿ ಜೀವನ ಮಾಡುತ್ತೇವೆ ಎಂದು ಗೌರಿ ಹಾಗೂ ರಾಕೇಶ್ ಹೇಳಿದ್ದಾರೆ. ಮೃತ ಗೌರಿ ಮಾಸ್ ಕಮ್ಯೂನಿಕೇಷನ್ ಪದವಿಧರೆಯಾಗಿದ್ದರು. ಆರೋಪಿ ರಾಕೇಶ್ ಬಿಕಾಂ ಪದವಿಧರನಾಗಿದ್ದಾನೆ.
ಕೆಲಸದ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ
ರಾಕೇಶ್ ಹಾಗೂ ಗೌರಿ ದಂಪತಿ ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ವಾಸವಾಗಿದ್ದರು. ರಾಕೇಶ್ಗೆ ಇತ್ತೀಚೆಗೆ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಸಿಕ್ಕಿತ್ತು. ರಾಕೇಶ್ ವರ್ಕ್ಫ್ರಮ್ ಹೋಮ್ ಮಾಡುತ್ತಿದ್ದನು. ಮೃತ ಗೌರಿ ಸಹ ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಗೌರಿ ಕೆಲಸ ಬಿಟ್ಟಿದ್ದರು. ಗೌರಿ ಹೊಸದಾಗಿ ಕೆಲಸ ಹುಡುಕುತಿದ್ದರು.
ಪತ್ನಿ ಎಸೆದ ಚಾಕುವಿನಿಂದ ಕೊಲೆ
ಇದೇ, ಕೆಲಸ ಹುಡುಕುವ ವಿಚಾರಕ್ಕೆ ಇಬ್ಬರ ನಡುವೆ ಮಾರ್ಚ್ 26 ರಂದು ಕೆಲಸ ನಡೆದಿತ್ತು. ಕೋಪದಲ್ಲಿ ಗೌರಿ ಅಡುಗೆ ಮನೆಯಲ್ಲಿನ ಚಾಕುವನ್ನು ರಾಕೇಶ್ ಮೇಲೆ ಎಸೆದಿದ್ದಾರೆ. ಚಾಕು ರಾಕೇಶ್ ಕೈಗೆ ತಗುಲಿ ಗಾಯವಾಗಿತ್ತು. ಆಗ ರೊಚ್ಚಿಗೆದ್ದ ಪತಿ ರಾಕೇಶ್, ಪತ್ನಿ ಎಸೆದ ಚಾಕುವಿನಿಂದಲೇ ಗೌರಿಯ ಕುತ್ತಿಗೆಗೆ ಚಾಕು ಇರಿದು ಹತ್ಯೆಗೈದಿದ್ದಾನೆ. ಹತ್ಯೆ ಮಾಡಿದ ಬಳಿಕ ರಾಕೇಶ್, ಪತ್ನಿ ಗೌರಿಯ ದೇಹವನ್ನು ಟ್ಯ್ರಾಲಿ ಬ್ಯಾಗ್ ರೀತಿಯ ಸೂಟ್ ಕೇಸ್ಗೆ ತುಂಬಿದ್ದಾನೆ. ಸೂಟ್ಕೇಸ್ಗೆ ತುಂಬುವ ವೇಳೆ ಪತ್ನಿಯ ಮೃತದೇಹದ ಕಾಲುಗಳನ್ನು ಮುರಿದಿದ್ದಾನೆ. ಮೃತದೇಹದವನ್ನು ಸೂಟ್ಕೇಸ್ ಕೊಂಡೊಯ್ಯುವ ವೇಳೆ ಸೂಟ್ಕೇಸ್ ಹ್ಯಾಂಡಲ್ ಕಟ್ ಆಗಿದೆ. ಆಗ, ಸೂಟ್ಕೇಸ್ ಅನ್ನು ಮನೆಯಲ್ಲಿ ಬಿಟ್ಟು, ಕಾರಿನಲ್ಲಿ ಪರಾರಿಯಾಗಿದ್ದಾನೆ.
ಹತ್ಯೆ ಮಾಡಿದ ಮರುದಿನ ಮಾರ್ಚ್ 27 ರ ಮಧ್ಯಾಹ್ನ ರಾಕೇಶ್, ಗೌರಿ ಅಣ್ಣನಿಗೆ ಕರೆ ಮಾಡಿ, “ನಿನ್ನ ತಂಗಿಯನ್ನು ಹತ್ಯೆ ಮಾಡಿದ್ದೇನೆ. ನಂತರ ಮನೆಯ ನೆಲಮಡಿಯಲ್ಲಿ ವಾಸವಿರುವವರಿಗೆ ಕರೆ ಮಾಡಿ, “ ನನ್ನ ಪತ್ನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಮನೆ ಮಾಲೀಕರಿಗೆ ತಿಳಿಸಿ” ಎಂದಿದ್ದಾನೆ. ನಂತರ ರಾಕೇಶ್, ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಬಳಿಕ, ಮನೆ ಮಾಲೀಕರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಇದನ್ನೂ ಓದಿ: ಕೊಲೆ ಮಾಡಿ ಸೂಟ್ಕೇಸ್ನಲ್ಲಿ ತುಂಬಿಟ್ಟ ಪ್ರಕರಣ: ಆರೋಪಿ ಸಿಕ್ಕಿಬಿದ್ದಿದ್ಹೇಗೆ? ಬೆಂಗಳೂರು ಪೊಲೀಸರು ಹೇಳಿದ್ದಿಷ್ಟು
ಪುಣೆಗೆ ಹೊರಟ್ಟಿದ್ದವ ಆತ್ಮಹತ್ಯೆಗೆ ಯತ್ನ
ರಾಕೇಶ್ ಕಾರಿನಲ್ಲಿ ಮುಂಬಯಿಗೆ ಹೋಗುತ್ತಿದ್ದನು. ದಾರಿ ಮಧ್ಯೆ ರಾಕೇಶ್, ಪುಣೆಯ ಶಿರವಾರ ಪೋಲಿಸ್ ಠಾಣೆಗೆ ಜಿರಳೆ ಔಷಧಿ ಸೇವಿಸಿ ತೆರಳಿದ್ದಾನೆ. ಠಾಣೆಯಲ್ಲಿ ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ. ಬಳಿಕ, ಆರೋಪಿ ರಾಕೇಶ್ನನ್ನು ಸತಾರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಡರಾತ್ರಿ ಪುಣೆಯ ಸಸೂನ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸಸೂನ್ ಆಸ್ಪತ್ರೆಗೆ ಹುಳಿಮಾವು ಪೊಲೀಸರ ತಂಡ ಭೇಟಿ ನೀಡಿ, ಆರೋಪಿ ರಾಕೇಶ್ನನ್ನು ಬಂಧಿಸಿ, ಬೆಂಗಳೂರಿಗೆ ಕರೆ ತಂದಿದ್ದಾರೆ.