ಬೆಂಗಳೂರು; 50 ತುಂಡಲ್ಲ 59 ತುಂಡು ಮಾಡಿ ಮಹಿಳೆ ಕೊಂದಿದ್ದ ಆರೋಪಿ ಕೊನೆ ಕ್ಷಣದಲ್ಲಿ ಬರೆದಿದ್ದ ಡೆತ್ ನೋಟ್ ಪತ್ತೆ, ಹತ್ಯೆ ಕಾರಣ ಬಯಲು

ಮಹಿಳೆಯ ದೇಹ ತುಂಡು ತುಂಡಾಗಿ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟ ಹಂತಕ ನಾಪತ್ತೆಯಾಗಿದ್ದ. ಇತ್ತ ಬೆಂಗಳೂರಿನ ಪೊಲೀಸರು ಕೊಲೆ ಮಾಡಿದಾತನಿಗೆ ಬಲೆ ಬೀಸಿದ್ದರು. ಆದರೆ ಆರೋಪಿಯ ಹುಡುಕಾಟದಲ್ಲಿ ಹೊರ ರಾಜ್ಯಕ್ಕೆ ಹೋಗಿದ್ದ ಪೊಲೀಸರಿಗೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಬಂದಿದೆ. ಜೊತೆಗೆ ಆತ್ಮಹತ್ಯೆಗೀಡಾದ ಹಂತಕ ಬರೆದಿಟ್ಟ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಅದರಲ್ಲಿ ಕೊಲೆ ರಹಸ್ಯ ಬಯಲಾಗಿದೆ.

ಬೆಂಗಳೂರು; 50 ತುಂಡಲ್ಲ 59 ತುಂಡು ಮಾಡಿ ಮಹಿಳೆ ಕೊಂದಿದ್ದ ಆರೋಪಿ ಕೊನೆ ಕ್ಷಣದಲ್ಲಿ ಬರೆದಿದ್ದ ಡೆತ್ ನೋಟ್ ಪತ್ತೆ, ಹತ್ಯೆ ಕಾರಣ ಬಯಲು
ಮಹಾಲಕ್ಷ್ಮೀ
Edited By: ಆಯೇಷಾ ಬಾನು

Updated on: Sep 26, 2024 | 11:31 AM

ಬೆಂಗಳೂರು, ಸೆ.26: ಇದೇ ತಿಂಗಳ 21ರಂದು ವೈಯಾಲಿಕಾವಲ್ ನ ಪೈಪ್ ಲೈನ್ ರಸ್ತೆಯ ಮನೆಯೊಂದರ ಫ್ರಿಡ್ಜ್ ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿ ಎಂಬಾಕೆಯ ದೇಹ ತುಂಡು ತುಂಡು ಮಾಡಿ ಬರ್ಬರವಾಗಿ ಹತ್ಯೆ (Bengaluru Mahalaxmi Murder Case) ಮಾಡಿ ಇಡಲಾಗಿತ್ತು. ಈ ಪ್ರಕರಣ ಕೈಗೆತ್ತಿಕೊಂಡ ವೈಯಾಲಿಕಾವಲ್ ಪೊಲೀಸರು ಹಲವು ಆಯಾಮದಲ್ಲಿ ತನಿಖೆ ಆರಂಭಿಸಿದ್ದರು. ಆದರೆ ಆರೋಪಿಯ ಪತ್ತೆ ಮಾಡಲು ಹೊರ ರಾಜ್ಯಕ್ಕೆ ಹೋದ ಪೊಲೀಸರಿಗೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿದೆ. ಜೊತೆಗೆ ಡೆತ್ ನೋಟ್ ಪತ್ತೆಯಾಗಿದೆ. ಈ ಡೆತ್ ನೋಟ್​ನಲ್ಲಿ (Death Note) ತಾನೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಯಾವ ರೀತಿ ಕೊಲೆ ಮಾಡಿದ? ಏಕೆ ಕೊಲೆ ಮಾಡಿದ ಎಂಬ ವಿಚಾರಗಳ ಬಗ್ಗೆ ಮೃತ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ.

ಮಹಿಳೆ ಕೊಲೆ ಪ್ರಕರಣದಲ್ಲಿ ಒರಿಸ್ಸಾ ಮೂಲದ ಮುಕ್ತಿ ರಂಜನ್ ರಾಯ್ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಮಹಾಲಕ್ಷ್ಮಿ ಕೆಲಸ ಮಾಡ್ತಿದ್ದ ಮಾಲ್ ನಲ್ಲಿ ಸ್ಟೋರ್ ಮ್ಯಾನೇಜರ್ ಆಗಿದ್ದ ಈತನೇ ಈ ಕೃತ್ಯ ಎಸಗಿರೊ ಶಂಕೆ ವ್ಯಕ್ತವಾಗಿತ್ತು. ಆತನಿಗಾಗಿ ಹಲವು ಕಡೆ ಹುಡುಕಾಡಿದ್ದ ಪೊಲೀಸರಿಗೆ ಆತ ಓರಿಸ್ಸಾಗೆ ತೆರಳಿರೊ ಮಾಹಿತಿ ಸಿಕ್ಕಿತ್ತು. ಸಿಕ್ಕ ಮಾಹಿತಿ ಆಧರಿಸಿ ಒರಿಸ್ಸಾಗೆ ತೆರಳಿದ್ದ ಪೊಲೀಸರಿಗೆ ಈಗ ಶಾಕ್ ಆಗಿದ್ದು, ಮುಕ್ತಿ ರಂಜನ್ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರೋಪಿ ಬಳಿ ಸಿಕ್ಕಿರುವ ಡೈರಿಯಲ್ಲಿ ಡೆತ್ ನೋಟು ಪತ್ತೆಯಾಗಿದೆ. ರಂಜನ್ ಡೆತ್ ನೋಟ್ ಬರೆದಿಟ್ಟು ಸ್ಮಶಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡೆತ್ ನೋಟ್​ನಲ್ಲೇನಿದೆ?

ಸೆಪ್ಟಂಬರ್ 3ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ ಎಂದು ಮಹಾಲಕ್ಷ್ಮೀ ಹತ್ಯೆ ಕುರಿತು ರಂಜನ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ. ಸೆಪ್ಟಂಬರ್‌ 3 ರಂದು ಆಕೆಯ ಮನೆಗೆ ಹೋದಾಗ ಕೃತ್ಯ ಎಸಗಿದ್ದಾಗಿ ಬರೆದಿದ್ದಾನೆ. ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ಆಕೆ ಹಲ್ಲೆ ನಡೆಸಿದಳು, ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಡೆತ್ ನೋಟ್​ನಲ್ಲಿ ಕೊಲೆ ಮಾಡಲು ಕಾರಣವೇನೆಂಬುದನ್ನು ರಂಜನ್ ಬಹಿರಂಗಪಡಿಸಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನ ಮಹಾಲಕ್ಷ್ಮೀಯನ್ನು 50ಕ್ಕೂ ಹೆಚ್ಚು ಪೀಸ್ ಪೀಸ್ ಮಾಡಿದ್ದ ಹಂತಕ ಆತ್ಮಹತ್ಯೆ

ಹ್ಯಾಕ್ಸಲ್ ಬ್ಲೇಡ್ ನಿಂದ ದೇಹ ಕತ್ತರಿಸಿದ್ದ ಹಂತಕ

ಆರೋಪಿ ರಂಜನ್ ಮೊದಲು ಮಹಾಲಕ್ಷ್ಮಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಆಕೆಯನ್ನ ಹ್ಯಾಕ್ಸಲ್ ಬ್ಲೇಡ್ ನಿಂದ ಕತ್ತರಿಸಿದ್ದ. ಬಾತ್ ರೂಂನಲ್ಲಿ ಆಕೆ ದೇಹವನ್ನ ಪೀಸ್ ಪೀಸ್ ಮಾಡಿದ್ದ. ನಂತರ ಫ್ರಿಡ್ಜ್ ಗೆ ಮೃತದೇಹ ತುಂಬಿದ್ದ. ಸಾಕ್ಷಿ ನಾಶಪಡಿಸಲು ಬಾತ್ ರೂಂನಲ್ಲಿ ಆ್ಯಸಿಡ್ ಹಾಕಿ ಕ್ಲೀನ್ ಮಾಡಿದ್ದ ಎಂದು ತಿಳಿದುಬಂದಿದೆ.

ಇನ್ನು ಮುಕ್ತಿ ರಂಜನ್ ರಾಯ್ ಮನೆಯಲ್ಲಿ ಬೆಂಗಳೂರು ಪೊಲೀಸರ ತಂಡ ಬೀಡುಬಿಟ್ಟಿದೆ. ಸ್ಥಳೀಯ ಪೊಲೀಸರ ಜೊತೆ ಆರೋಪಿಯ ಬೆರಳಚ್ಚು ಹಾಗೂ ಡೆತ್ ನೋಟು ಪ್ರತಿಯನ್ನು ಪಡೆಯಲಿದ್ದಾರೆ.

ಸ್ಮಶಾನಕ್ಕೆ ಹೋಗಿ ಆರೋಪಿ ಆತ್ಮಹತ್ಯೆ

ಮೂಲಗಳ ಮಾಹಿತಿ ಪ್ರಕಾರ ಓರಿಸ್ಸಾದ ಫಂಡಿ ಗ್ರಾಮದ ನಿವಾಸಿಯಾದ ರಂಜನ್ ಮೊನ್ನೆ ಬೆಳಿಗ್ಗೆಯಷ್ಟೇ ಮನೆಗೆ ಬಂದಿದ್ದನಂತೆ. ಕೆಲ ಕಾಲ ಮನೆಯಲ್ಲೇ ಇದ್ದ ಈತ ರಾತ್ರಿ ಸ್ಕೂಟಿ ಬೈಕ್ ಹತ್ತಿ ಹೊರಗಡೆ ತೆರಳಿದ್ದ. ಈ ವೇಳೆ ತನ್ನ ಲ್ಯಾಪ್ ಟಾಪ್ ಸಮೇತ ಹೋದ ಆತ ಬಳಿಕ ಎಲ್ಲಿ ಹೋದ ಎಂಬುದು ಯಾರಿಗೂ ತಿಳಿದಿರಲಿಲ್ಲವಂತೆ. ಆದ್ರೆ ನಿನ್ನೆ ಕುಳೆಪಾದ ಎಂಬ ಸ್ಮಶಾನದಲ್ಲಿ ಆತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಸದ್ಯ ಮುಕ್ತಿರಂಜನ್ ರಾಯ್ ಆತ್ಮಹತ್ಯೆ ಸಂಬಂಧ ದುಶಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಕಡೆ ಒರಿಸ್ಸಾಗಿ ತೆರಳಿದ್ದ ಬೆಂಗಳೂರು ಪೊಲೀಸರು ಈ ಬಗ್ಗೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:43 am, Thu, 26 September 24

Loading...
Unable to load recommendations.
Follow Us