
ಬೆಂಗಳೂರು, ಜುಲೈ 22: ಎಲ್ಲಾ ಹಬ್ಬಗಳಲ್ಲಿ ಅತ್ಯಂತ ಅದ್ಧೂರಿ ಹಾಗೂ ಕಲರ್ ಫುಲ್ ಹಬ್ಬ ಅಂದರೆ ಅದು ಗೌರಿ-ಗಣೇಶ ಹಬ್ಬ (Ganesh Chaturthi). ಆದರೆ ಕಳೆದ ಕೆಲವು ವರ್ಷಗಳಿಂದ ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಪಿಒಪಿ (POP) ಗಣೇಶ ಮೂರ್ತಿಗಳು ಆರ್ಭಟ ಹೆಚ್ಚಾಗಿದೆ. ಇದು ಪರಿಸರಕ್ಕೂ ಹಾನಿಯಾಗುತ್ತಿದ್ದು, ಧಾರ್ಮಿಕ ಭಾವನೆಗೂ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಈ ವರ್ಷ ಗಣೇಶ ಹಬ್ಬಕ್ಕೆ ಎರಡು ತಿಂಗಳು ಮುಂಚಿತವಾಗಿಯೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಎಚ್ಚರಿಸಿದ್ದರು. ಆದರೆ, ಪ್ರಧಾನಿಗಳ ಕರೆಯನ್ನು ಮೀರಿಯೂ ಈಗ ರಾಜಧಾನಿ ಬೆಂಗಳೂರಿಗೆ (bangaluru) ಪಿಒಪಿ ಗಣೇಶ ಮೂರ್ತಿಗಳು ಎಂಟ್ರಿ ನೀಡುತ್ತಿವೆ.
ಈ ವರ್ಷ ಸೆಪ್ಟಂಬರ್ 14ರಂದು ನಾಡಿನಾದ್ಯಂತ ಗೌರಿ-ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಆದರೆ ಇಷ್ಟು ಬೇಗ ಏಕೆ ಈ ಸುದ್ದಿ ಅಂದರೆ ಗಣೇಶ ಚತುರ್ಥಿಗೂ ಎರಡು ತಿಂಗಳು ಮೊದಲೇ ರಾಜಧಾನಿ ಬೆಂಗಳೂರಿಗೆ ಪಿಒಪಿ ಗಣೇಶ ಮೂರ್ತಿಗಳು ಎಂಟ್ರಿ ಕೊಟ್ಟಿವೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಲಹೆಗೂ ಕವಡೆ ಕಾಸಿನ ಬೆಲೆ ಇಲ್ಲದಾಗಿದೆ.
ಇದನ್ನೂ ಓದಿ: ಗಣೇಶ ಹಬ್ಬಕ್ಕೂ ಮುನ್ನವೇ ಸುರೇಶ್ ಕುಮಾರ್ ಅಲರ್ಟ್: ಪಿಓಪಿ ಮೂರ್ತಿಗಳ ಬಳಕೆ ತಡೆಗಟ್ಟುವಂತೆ ಕೃಷ್ಣಬೈರೇಗೌಡಗೆ ಪತ್ರ
ಪ್ರಧಾನಿ ಮೋದಿ ಅವರು ಜೂನ್ 28ರಂದೇ ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವಂತೆ ಹಾಗೂ ಪಿಒಪಿ ಮೂರ್ತಿಗಳನ್ನು ತ್ಯಜಿಸುವಂತೆ ಕರೆ ನೀಡಿದ್ದರು. ಈ ಬೆನ್ನಲ್ಲೇ ಇತ್ತೀಚೆಗೆ ಮಾಜಿ ಸಚಿವ, ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಕೃಷ್ಣಬೈರೇಗೌಡಗೆ ತುರ್ತು ಪತ್ರ ಬರೆಯುವ ಮೂಲಕ ಪಿಒಪಿ ಮೂರ್ತಿಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದರು.
ಸದ್ಯ ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಆದರೆ ರಾಜಧಾನಿಯ ಮಾರುಕಟ್ಟೆಗೆ ಪಿಒಪಿ ಗಣೇಶ ಮೂರ್ತಿಗಳ ಎಂಟ್ರಿಯಾಗಿದೆ. ಪ್ರತಿ ವರ್ಷ ಗಣೇಶ ಹಬ್ಬದ ಸಮಯದಲ್ಲಿ ಸರ್ಕಾರ ಪಿಒಪಿ ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕಲು ಮುಂದಾಗುತ್ತದೆ. ಆದರೆ ಅಷ್ಟರಲ್ಲಿ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬರುತ್ತಿದ್ದವು. ಹೀಗಾಗಿ ನಿಯಂತ್ರಣ ಕಷ್ಟವಾಗುತಿತ್ತು. ಆದರೆ ಈ ವರ್ಷ ಎರಡುವರೆ ತಿಂಗಳು ಮೊದಲೇ ಪ್ರಧಾನಿ ಮೋದಿ ಎಚ್ಚರಿಸಿದರು ಮಾರುಕಟ್ಟೆಗೆ ಪಿಒಪಿ ಮೂರ್ತಿಗಳು ಬರುತ್ತಿವೆ.
ಇದನ್ನೂ ಓದಿ: Raichur News: ರಾಯಚೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ತತ್ತರಿಸಿದ ಜನತೆ; 3 ವರ್ಷದ ಬಾಲಕಿಗೆ ಗಂಭೀರ ಗಾಯ!
ಒಟ್ಟಿನಲ್ಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಿಗೆ ಪಿಒಪಿ ಗಣೇಶ ಮೂರ್ತಿಗಳು ಎಂಟ್ರಿ ಕೊಟ್ಟಿರುವುದು ಕಳವಳಕಾರಿ ಸಂಗತಿ. ಮುಂದಿನ ದಿನಗಳಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಅಂತ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:11 pm, Wed, 22 July 26