ಮೆಟ್ರೋ ಬರೆ: ಪ್ರಯಾಣಿಕರ ಆಕ್ರೋಶ ಬೆನ್ನಲ್ಲೇ ದರ ಇಳಿಸುವಂತೆ ಬಿಜೆಪಿ ನಿಯೋಗ ಮನವಿ

ರಾಜಧಾನಿ ಬೆಂಗಳೂರಿಗೆ ಮೆಟ್ರೋ ಬರೆ ಬಿದ್ದಿದೆ. ಮೆಟ್ರೋದ ಟಿಕೆಟ್ ದರ ಏರಿಕೆಯಿಂದಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ನಿಯೋಗ ಇಂದು ಬಿಎಂಆರ್​ಸಿಎಲ್​​ ಎಂಡಿ ಭೇಟಿ ಮಾಡಿ ದರ ಇಳಿಕೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ದರ ಕಡಿಮೆ ಮಾಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಮೆಟ್ರೋ ಬರೆ: ಪ್ರಯಾಣಿಕರ ಆಕ್ರೋಶ ಬೆನ್ನಲ್ಲೇ ದರ ಇಳಿಸುವಂತೆ ಬಿಜೆಪಿ ನಿಯೋಗ ಮನವಿ
ಮೆಟ್ರೋ ಬರೆ: ಪ್ರಯಾಣಿಕರ ಆಕ್ರೋಶ ಬೆನ್ನಲ್ಲೇ ದರ ಇಳಿಸುವಂತೆ ಬಿಜೆಪಿ ನಿಯೋಗ ಮನವಿ
Edited By:

Updated on: Feb 10, 2025 | 4:14 PM

ಬೆಂಗಳೂರು, ಫೆಬ್ರವರಿ 10: ಕೇಂದ್ರ ಸರ್ಕಾರ ಟಿಕೆಟ್ ಬೆಲೆ ಏರಿಕೆಗೆ ಹಸಿರು ನಿಶಾನೆ ತೋರಿಸ್ತಿದ್ದಂತೆ, ಬಿಎಂಆರ್​​ಸಿಎಲ್​ (BMRCL) ದರ ಏರಿಕೆ ಮಾಡಿದೆ. ಆ ಮೂಲಕ ಪ್ರಯಾಣಿಕರಿಗೆ ಶಾಕ್ ಮೇಲೆ ಶಾಕ್ ನೀಡಲಾಗಿದೆ. ಇದರಿಂದಾಗಿ ಪ್ರಯಾಣಿಕರು ಕೆಂಡಾಮಂಡಲರಾಗಿದ್ದಾರೆ. ಈ ಮಧ್ಯೆ ಬಿಜೆಪಿ ನಿಯೋಗ ನಮ್ಮ ಮೆಟ್ರೋ ಪ್ರಧಾನ ಕಚೇರಿಗೆ ಭೇಟಿ ನೀಡಿ ದರ ಇಳಿಸುವಂತೆ ಮನವಿಪತ್ರ ಸಲ್ಲಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಶಾಸಕರಾದ ಸಿ.ಕೆ.ರಾಮಮೂರ್ತಿ, ರವಿಸುಬ್ರಹ್ಮಣ್ಯ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಸ್.ಹರೀಶ್​ ಮತ್ತು ಮಾಜಿ ಮೇಯರ್ ಗೌತಮ್ ಕುಮಾರ್​ ಮತ್ತಿತರರಿಂದ ಬಿಎಂಆರ್​ಸಿಎಲ್ ಎಂಡಿಗೆ ಮನವಿ ಸಲ್ಲಿಸಲಾಗಿದೆ.

ದರ ಏರಿಕೆ ಕಡಿಮೆ ಮಾಡಿದಿದ್ದರೆ ಹೋರಾಟ ಎಂದ ಶಾಸಕ ಸಿ.ಕೆ. ರಾಮಮೂರ್ತಿ

ಮನವಿಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ನಿಯೋಗದಿಂದ ಮೆಟ್ರೋ ಟಿಕೆಟ್ ದರ ವಾಪಸ್ ಪಡೆಯುವಂತೆ ಮನವಿ ಮಾಡಿದ್ದೇವೆ. ಮೆಟ್ರೋ ಎಂಡಿ ಜೊತೆ ಮಾತಾಡಿ ಪ್ರಯಾಣಿಕರ ಮೇಲೆ ಹೊರೆ ಆಗುವ ಬಗ್ಗೆ ವಿವರಿಸಿದ್ದೇವೆ. ಬೇರೆ ಬೇರೆ ನಗರಗಳಲ್ಲಿ ಮೆಟ್ರೋ ಟಿಕೆಟ್ ದರ ಕಡಿಮೆ ಇದೆ ಅಂತ ಗಮನಕ್ಕೆ ತಂದಿದ್ದೇವೆ ಎಂದರು.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ವ್ಯಾಪಕ ಆಕ್ರೋಶ: ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ

ಸರ್ಕಾರ ಶಾಸಕರ ಜೊತೆ ಕುಳಿತು ಚರ್ಚೆ ಮಾಡಬೇಕಿತ್ತು. ಯಾವುದೋ ಕಮಿಟಿ ವರದಿ ಪಡೆದು ದರ ಏರಿಕೆ ಮಾಡಿದ್ದಾರೆ. ದರ ಏರಿಕೆ ಕಡಿಮೆ ಮಾಡಿದಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದೇವೆ. ಜನಕ್ಕೆ ಹೆಚ್ಚು ಹೊರೆಯಾಗದಂತೆ ಏರಿಸಲಿ ಅಂತ ಹೇಳಿದ್ದೇವೆ ಎಂದಿದ್ದಾರೆ.

ಏಕಾಏಕಿ ದರ ಏರಿಕೆಯನ್ನು ನಾವು ಖಂಡಿಸುತ್ತೇವೆ: ಶಾಸಕ ರವಿ ಸುಬ್ರಮಣ್ಯ

ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಮಾತನಾಡಿ, ದೇಶದಲ್ಲೇ ಹೆಚ್ಚಿನ ಮೆಟ್ರೋ ದರ ಕರ್ನಾಟಕದಲ್ಲಿ ಏರಿಕೆ ಮಾಡಲಾಗಿದೆ. ಮೆಟ್ರೋ ಸಂಪಾದನೆ ಮಾಡುವ ಇಲಾಖೆ ಅಲ್ಲ, ಸೇವಾ ವಲಯ ಇದು. ನಗರದ ದಟ್ಟಣೆ ಕಮ್ಮಿ ಮಾಡುವ ಸಲುವಾಗಿ ಮೆಟ್ರೋ ತರಲಾಗಿದೆ. ಏಕಾಏಕಿ ದರ ಏರಿಕೆಯನ್ನು ನಾವು ಖಂಡಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಓನ್​ ಟು ಡಬಲ್ ಏರಿಕೆ ಮಾಡಲಾಗಿದ್ಯಾ? ಭುಗಿಲೆದ್ದ ಆಕ್ರೋಶ

ಈಗಾಗಲೇ ರಾಜ್ಯ ಸರ್ಕಾರ ಜನರ ಮೇಲೆ ದರ ಏರಿಕೆ ಬರ ಎಳೆದಿದೆ. ಈಗ ಮೆಟ್ರೋ ದರ 46% ಏರಿಕೆ ಮಾಡಿ ಗದಾಪ್ರಹಾರ ಮಾಡಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಜನರಿಗೆ ಅಗತ್ಯ ಅನುಕೂಲಗಳನ್ನೂ ಮೆಟ್ರೋ ಮಾಡಲಿ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Kiran Haniyadka
Follow Us