ಖಾಕಿ ಮೇಲೆಯೇ ಅಟ್ಯಾಕ್ ಮಾಡಿ ಎಸ್ಕೇಪ್ ಯತ್ನ: ಕೊಲೆ ಆರೋಪಿಗೆ ಗುಂಡೇಟು
ಕೊಲೆ, ಅಪಹರಣ ಪ್ರಕರಣಗಳ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿರುವ ಘಟನೆ ಬೆಂಗಳೂರಿನ ಬೊಮ್ಮಸಂದ್ರ ಬಳಿ ನಡೆದಿದೆ. ಸ್ಥಳ ಮಹಜರು ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಮತ್ತೆ ಬಂಧಿಸಲಾಗಿದೆ. ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಬೆಂಗಳೂರು, ನವೆಂಬರ್ 09: ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ಆರೋಪಿ ಮೇಲೆ ಫೈರಿಂಗ್ ನಡೆಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಸ್ಮಶಾನದ ಬಳಿ ನಿನ್ನೆ (ನ.8) ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದ್ದು, ಕಿಡ್ನಾಪ್ & ಇಬ್ಬರ ಕೊಲೆ ಪ್ರಕರಣದ ಆರೋಪಿಯಾಗಿರುವ ಆಂಧ್ರ ಮೂಲದ ರವಿ ಪ್ರಸಾದ್ ರೆಡ್ಡಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಹೆಡ್ ಕಾನ್ಸ್ಸ್ಟೇಬಲ್ ಮೇಲೆ ದಾಳಿ
ಉದ್ಯಮಿ ಬಾಲಪ್ಪ ರೆಡ್ಡಿ, ಮಾದೇಶ್ ಎಂಬುವರ ಕೊಲೆ ಪ್ರಕರಣದ ಸಂಬಂಧ ಆರೋಪಿ ರವಿ ಪ್ರಸಾದ್ ರೆಡ್ಡಿಯನ್ನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದರು. ಕೇಸ್ ಸಂಬಂಧ ಸ್ಥಳ ಮಹಜರಿಗೆ ಪೊಲೀಸರು ಕರೆದೊಯ್ದಿದ್ದ ವೇಳೆ ಆರೋಪಿ, ಹೆಡ್ ಕಾನ್ಸ್ಸ್ಟೇಬಲ್ ಅಶೋಕ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ. ಈ ವೇಳೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ವಾರ್ನಿಂಗ್ ನೀಡಿದರೂ ದಾಳಿ ನಿಲ್ಲಿಸದಿದ್ದಾಗ ಆರೋಪಿ ಮೇಲೆ ಹೆಬ್ಬಗೋಡಿ ಇನ್ಸ್ಪೆಕ್ಟರ್ ಸೋಮಶೇಖರ್ ಫೈರಿಂಗ್ ಮಾಡಿದ್ದಾರೆ. ರವಿ ಪ್ರಸಾದ್ ರೆಡ್ಡಿ ಕಾಲಿಗೆ ಎರಡು ಸುತ್ತು ಗುಂಡು ಹೊಡೆದು ಬಂಧಿಸಿದ್ದಾರೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ DCP ನಾರಾಯಣ್ ಭೇಟಿ ನೀಡಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 40 ವರ್ಷದ ಮಹಿಳೆ ಮೇಲೆ 14 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ, ಸಹಕರಿಸದಿದ್ದಾಗ ಕೊಲೆ
ಇಬ್ಬರನ್ನು ಕೊಂದಿದ್ದ ಕಿರಾತಕ
ನ.6ರಂದು ಹೆಬ್ಬಗೋಡಿ ಉದ್ಯಮಿ ಬಾಲಪ್ಪ ರೆಡ್ಡಿ ಅಪಹರಣ ಮಾಡಿದ್ದ ರವಿ ಪ್ರಸಾದ್ ರೆಡ್ಡಿ, ಹಣ ನೀಡದಿದ್ದಾಗ ಕುತ್ತಿಗೆ ಸೀಳಿ ಅವರನ್ನು ಕೊಂದಿದ್ದ. ಅದಕ್ಕೂ ಮೊದಲು ಮಾದೇಶ್ ಎಂಬುವರನ್ನೂ ಈತ ಕೊಂದಿದ್ದ. ನ.4ರಂದು ಕಿತ್ತಗಾನಹಳ್ಳಿಯ ಮನೆಯಲ್ಲಿ ಮಾದೇಶ್ ಕೊಲೆ ನಡೆದಿತ್ತು. ಈ ಎರಡೂ ಕೊಲೆ ಕೇಸ್ ಸಂಬಂಧ ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಆರೋಪಿ ರವಿ ಪ್ರಸಾದ್ ರೆಡ್ಡಿಯನ್ನ ಬಂಧಿಸಿದ್ದ ಪೊಲೀಸರು, ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಆರೋಪಿ ತನ್ನ ಖತರ್ನಾಕ್ ಐಡಿಯಾ ತೋರಿದ್ದಾನೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ರವಿ ಪ್ರಸಾದ್ ರೆಡ್ಡಿ ಯತ್ನಿಸಿದ ಹಿನ್ನಲೆ ಫೈರಿಂಗ್ ನಡೆಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:37 am, Sun, 9 November 25



