ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆ: ಮನೆಯ ಮೇಲ್ಚಾವಣಿ, ಸಿಮೆಂಟ್​ ಇಟ್ಟಿಗೆ ಬಿದ್ದು ವ್ಯಕ್ತಿ ಸಾವು

ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಬಲಿಯಾದವರ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಮನೆ ಛಾವಣಿ ಕುಸಿದ ಪರಿಣಾಮ ಮಲಗಿದ್ದ ವ್ಯಕ್ತಿ ಬಲಿಯಾಗಿದ್ದಾರೆ. ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು 7 ಮಂದಿ, ವಿದ್ಯುತ್ ಶಾಕ್‌ನಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದ ಘಟನೆ ನಿನ್ನೆ ವರದಿಯಾಗಿತ್ತು. ನಗರದಾದ್ಯಂತ ಭಾರೀ ಮಳೆಯಿಂದ ಹಲವು ಜೀವಗಳು ಬಲಿಯಾಗಿರೋದು, ಮಳೆಗಾಲದ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಿದೆ.

ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆ: ಮನೆಯ ಮೇಲ್ಚಾವಣಿ, ಸಿಮೆಂಟ್​ ಇಟ್ಟಿಗೆ ಬಿದ್ದು ವ್ಯಕ್ತಿ ಸಾವು
ಹಾರಿಬಿದ್ದಿರುವ ಮನೆಯ ಶೀಟ್​​ಗಳು
Image Credit source: Tv9 Kannada
Edited By:

Updated on: Apr 30, 2026 | 11:46 AM

ಬೆಂಗಳೂರು, ಏಪ್ರಿಲ್​​ 30: ಮಳೆಯ ಅವಾಂತರಕ್ಕೆ ಬೆಂಗಳೂರಿನಲ್ಲಿ (Bengaluru) ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮನೆಯ ಮೇಲ್ಚಾವಣಿ, ಸಿಮೆಂಟ್​ ಇಟ್ಟಿಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಜುನಾಥ್​ ಎಂದು ಗುರುತಿಸಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಮಂಜುನಾಥ್​ ಮೃತದೇಹ ಶಿಫ್ಟ್ ಮಾಡಲಾಗಿದೆ. ಮನೆಯ ಮೇಲಿನ ಶೀಟ್​​ ಹಾರದಂತೆ ಕಲ್ಲು ಇಡಲಾಗಿತ್ತು. ಗಾಳಿ ಮಳೆಗೆ ಶೀಟ್​​ ಬಿದ್ದಿದ್ದು ಈ ವೇಳೆ ಶೀಟ್​​ ಮೇಲಿಟ್ಟಿದ್ದ ಕಲ್ಲು ಮನೆಯಲ್ಲಿ ಮಲಗಿದ್ದ ಮಂಜುನಾಥ್​​ ಮೇಲೆ ಬಿದ್ದ ಪರಿಣಾಮ ಸಾವು ಸಂಭವಿಸಿದೆ.

ಸಾಲು ಸಾಲು ಬಲಿ

ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಸಂಭವಿಸಿದ ಘೋರ ದುರಂತದಲ್ಲಿ ಮಗು ಸೇರಿ ಒಟ್ಟು 7 ಜನ ದಾರುಣವಾಗಿ ಮೃತಪಟ್ಟಿದ್ದರು. ಬೆಂಗಳೂರಿನ ಜೆಸಿ ನಗರದ ಮೊಹಮ್ಮದ್ ಅಬ್ದುಲ್ (52), ಡಿ.ಜೆ.ಹಳ್ಳಿಯ ಫಯಾಜ್ ಅಹ್ಮದ್ (39), ಕೆ.ಜೆ.ಹಳ್ಳಿಯ ಮುಸಾವಿರ್ ಬೇಗಂ (6), ಕೇರಳದ ಎರ್ನಾಕುಲಂನ ಸ್ಮಿತಾ (47) ಹಾಗೂ ಲತಾ (57), ಕಾರ್ ಸ್ಟಿಕ್ಕರಿಂಗ್ ಕೆಲಸ ಮಾಡುತ್ತಿದ್ದ ಅಸ್ಸಾಂನ ನಸೀಮುಲ್ಲಾ (19) ಮತ್ತು ಉತ್ತರ ಪ್ರದೇಶದ ವ್ಯಾಪಾರಿ ಸಲಾವುದ್ದೀನ್ ಅನ್ಸಾರಿ (36) ಅವಘಡದಲ್ಲಿ ಪ್ರಾಣಬಿಟ್ಟಿದ್ದರು. ಗಾಳಿ ಮಳೆಯ ಕಾರಣಕ್ಕೆ ಪಾದಚಾರಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಯ ಕೆಳಗೆ ಆಶ್ರಯ ಪಡೆದಿದ್ದರು. ಮಳೆಯ ತೀವ್ರತೆಗೆ ದುರ್ಬಲವಾಗಿದ್ದ ಗೋಡೆ ಏಕಾಏಕಿ ಕುಸಿದ ಪರಿಣಾಮ ಅವಶೇಷಗಳಡಿ ಸಿಲುಕಿದವರ ಪೈಕಿ 7 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ದಾಖಲೆ ಬರೆದ ವರುಣ; ನಿನ್ನೆ ಸುರಿದ ಮಳೆಯ ಪ್ರಮಾಣ ಎಷ್ಟು ಗೊತ್ತಾ?; ಇಲ್ಲಿದೆ ಮಾಹಿತಿ

ಯಾರಬ್ ನಗರದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ವಿದ್ಯುತ್ ಶಾಕ್ ತಗುಲಿ ಸೈಯದ್ ಸೂಫಿಯಾನ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದ. ನಿನ್ನೆ ಸಂಜೆ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆಯೇ ತನ್ನ ಬೈಕ್ ಪಾರ್ಕ್ ಮಾಡಲು ಸೈಯದ್ ಪ್ರಯತ್ನಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ತಂತಿ ಅಥವಾ ಕಂಬದಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಆತ ಪ್ರಾಣಕಳೆದುಕೊಂಡಿದ್ದ. ಮತ್ತೊಂದೆಡೆ ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಇಂತಹುದ್ದೇ ಘಟನೆ ನಡೆದಿತ್ತು. ಮಳೆಯ ನಡುವೆ ಸಂಚರಿಸುತ್ತಿದ್ದಾಗ, ರಸ್ತೆಯಲ್ಲಿದ್ದ ವಿದ್ಯುತ್ ಕಂಬದ ಬಳಿ ಹರಿದುಬಿದ್ದಿದ್ದ ವಿದ್ಯುತ್ ತಂತಿ (ವೈರ್) ಟಚ್ ಆದ ಪರಿಣಾಮ ಸುಮಾರು 30-35 ವರ್ಷ ವಯಸ್ಸಿನ ರಘು ಎಂಬುವವರು ಜೀವ ಬಿಟ್ಟಿದ್ದರು.ಜೆ.ಪಿ. ನಗರದ ಮಿನಿ ಫಾರೆಸ್ಟ್​​ನ 15ನೇ ಕ್ರಾಸ್ ಬಳಿ ಈ ದುರ್ಘಟನೆ ನಡೆದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Follow Us