Bengaluru Rain Tragedy: ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಘನಘೋರ ದುರಂತ; ಕಾಂಪೌಂಡ್ ಕುಸಿದು 7 ಜನ ಸಾವು
ಬೆಂಗಳೂರು ಮಳೆ ಅವಾಂತರ: ಬೆಂಗಳೂರಿನಲ್ಲಿ ಆಲಿಕಲ್ಲು ಸಮೇತ ಧಾರಾಕಾರ ಮಳೆ ಸುರಿದೆ. ಸಿಟಿ ಮಂದಿ ಮಳೆ ಬಂದು ತಂಪೆರೆಯಬಹುದು ಅಂದುಕೊಂಡಿದ್ದರು. ಆದರೆ ವರುಣ ಸಾವಿನ ಸವಾರಿಯೇ ಮಾಡಿದ್ದಾನೆ. ರಣರಕ್ಕಸ ಮಳೆಗೆ ಕಾಂಪೌಂಡ್ ಕುಸಿದು 7 ಜನರು ದುರ್ಮರಣಗೊಂಡಿದ್ದಾರೆ. ಸದ್ಯ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

ಬೆಂಗಳೂರು, ಏಪ್ರಿಲ್ 29: ಇಂದು ಬೆಂಗಳೂರಿನಲ್ಲಿ ಸುರಿದ ರಣರಕ್ಕಸ ಮಳೆ (Rain) ಒಬ್ಬರಲ್ಲ ಇಬ್ಬರಲ್ಲ ಮಕ್ಕಳು ಸೇರಿದಂತೆ ಬರೋಬ್ಬರಿ 7 ಜನರನ್ನು ಬಲಿ (death) ಪಡೆದಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ರಸ್ತೆ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳು ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ. ಅವಶೇಷದಡಿ ಇನ್ನೂ ಜನರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಡೆದಿದ್ದೇನು?
ಸಂಜೆ 5 ಗಂಟೆಯಿಂದ ಸತತ 1 ಗಂಟೆ ಕಾಲ ಎಡಬಿಡದೆ ಮಳೆ ಸುರಿದಿದೆ. ಬಿರುಗಾಳಿ, ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆ ಜೋರಾಗುತ್ತಿದ್ದಂತೆ ಬೀದಿಬದಿ ವ್ಯಾಪಾರಿಗಳು, ಕಾಂಪೌಂಡ್ ಪಕ್ಕದಲ್ಲಿ ಆಶ್ರಯ ಪಡೆದಿದ್ದಾರೆ. ಮಳೆಯಲ್ಲಿ ಮಕ್ಕಳು ನೆನೀತಾರೆ ಅಂತಾ ಎಲ್ಲರು ಕಾಂಪೌಂಡ್ ಬದಿಗೆ ಓಡಿ ಬಂದಿದ್ದಾರೆ. ಆದರೆ ಬೃಹತ್ ಕಾಂಪೌಂಡ್ನಲ್ಲೇ ಕಾದು ಕುಳಿತಿದ್ದ ಜವರಾಯ, 7 ಜನರ ಜೀವ ಹೊತ್ತೊಯ್ದಿದ್ದಾನೆ.
ಮುಗಿಲುಮುಟ್ಟಿದ ಸಂಬಂಧಿಕರ ಆಕ್ರಂದನ
ಸದ್ಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೂವರು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಿಬ್ಬಂದಿ ಮೃತದೇಹಗಳನ್ನು ಶವಗಾರಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ. ಇತ್ತ ಕುಟುಂಬಕ್ಕೆ ಆಧಾರವಾಗಿದ್ದವರ ಮೃತದೇಹ ಕಂಡು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಇನ್ಮುಂದೆ ನಮಗ್ಯಾರು ದಿಕ್ಕು ಎಂದು ರೋಧಿಸುತ್ತಿದ್ದು, ಆಕ್ರಂದನ ಮುಗಿಲುಮುಟ್ಟಿದೆ.
ಘಟನಾ ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ
ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಶೀಲನೆ ಮಾಡಿದರು. ದುರಂತದ ಬಗ್ಗೆ ಸ್ಥಳೀಯರು, ಜಿಬಿಎ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಒತ್ತಡದಿಂದ ಕಾಂಪೌಂಡ್ ಕುಸಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಏಕಾಏಕಿ ಹೇಗೆ ಕುಸಿದು ಬಿತ್ತು ಎಂದು ಅಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡರು. ದುರಂತದ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಸರ್ಕಾರ ಜನರ ನೆರವಿಗೆ ನಿಲ್ಲಬೇಕು ಎಂದ ಸಿ.ಟಿ.ರವಿ
ಅವಘಡ ಬಗ್ಗೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, 8 ರಿಂದ 10 ಜನ ಮೃತಪಟ್ಟಿರುವುದಾಗಿ ಪ್ರಾಥಮಿಕ ಮಾಹಿತಿ ಇದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಅಕಾಲಿಕ ಮಳೆಗೆ ಇಷ್ಟೊಂದು ಅವಾಂತರ ಆಗಿದೆ. ಇದಕ್ಕೆ ನಾವು ಸರ್ಕಾರವನ್ನ ದೂರುವುದಿಲ್ಲ. ಸರ್ಕಾರ ಜನರ ನೆರವಿಗೆ ನಿಲ್ಲಬೇಕು ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:40 pm, Wed, 29 April 26
