ಒಬ್ಬಳ ಮೇಲೆ ಇಬ್ಬರಿಗೆ ಲವ್: ನೇಪಾಳಿ ಯುವತಿಗಾಗಿ ನಡೆದ ಗಲಾಟೆಯಲ್ಲಿ ನಡೆದಿದ್ದು ರಕ್ತಪಾತ!
ಅವರೆಲ್ಲಾ ಬಹುತೇಕ ಪರಿಚಯಸ್ಥರು. ಆದ್ರೆ ಯುವತಿಯೋರ್ವಳ ಮೇಲೆ ಇಬ್ಬರ ಕಣ್ಣು ಬಿದ್ದಿದ್ದು ಪರಸ್ಪರ ಕಿತ್ತಾಡಿಕೊಳ್ಳುವಂತೆ ಮಾಡಿದೆ. ಭೇಟಿ ಆಗೋಣ ಅಂತ ಒಂದೆಡೆ ಸೇರಿದವರು ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಓರ್ವನ ಮೇಲೆ ಚಾಕುವಿನಿಂದ ಹಲ್ಲೆ ನಡೆದಿದ್ದು ಸ್ಥಿತಿ ಗಂಭೀರವಾಗಿದೆ. ನೇಪಾಳಿ ಯುವತಿ ಹಿಂದೆ ಬಿದ್ದ ಈ ಇಬ್ಬರ ಕತೆ ಏನೆಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರು, ಫೆಬ್ರವರಿ 04: ಯುವತಿ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಓರ್ವನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರಿನ ಕೆ.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರದಲ್ಲಿ ನಡೆದಿದೆ. ರೋಷನ್ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದು, ಆರೋಪಿ ಮಾಮು ಮತ್ತು ಸಹಚರರು ಘಟನೆ ಬಳಿಕ ತಲೆಮರೆಸಿಕೊಂಡಿದ್ದಾರೆ. ರೋಷನ್ ಸ್ಥಿತಿ ಸದ್ಯ ಚಿಂತಾಜನಕವಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಗಿದ್ದು, ಆರೋಪಿಗಳಿಗಾಗು ಶೋಧ ಮುಂದುವರಿದಿದೆ.
ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ರೋಷನ್ ನೇಪಾಳಿ ಯುವತಿಯೋರ್ವಳ ಹಿಂದೆ ಬಿದ್ದಿದ್ದ. ಆರೋಪಿ ಮಾಮುಗೆ ಕೂಡ ಅದೇ ಯುವತಿಯ ಮೇಲೆ ಲವ್ ಆಗಿತ್ತು. ಈ ರೋಷನ್ ಮತ್ತು ಮಾಮು ಇಬ್ಬರ ನಡುವೆ ತಕ್ಕಮಟ್ಟಿನ ಪರಿಚಯ ಕೂಡ ಇದ್ದು, ಇಬ್ಬರೂ ಭೇಟಿಯಾಗೋಣ ಎಂದು ಫೆಬ್ರವರಿ ಒಂದರಂದು ರಾತ್ರಿ 8.30ರ ಸುಮಾರಿಗೆ ದೇವಸಂದ್ರಕ್ಕೆ ಬಂದಿದ್ದರು. ರೋಷನ್ ಸ್ಥಳಕ್ಕೆ ಬರ್ತಿದ್ದ ಹಾಗೆ ಮಾಮುವಿನ ಹತ್ತರಿಂದ ಹದಿನೈದು ಜನ ಸ್ನೇಹಿತರು ಅಲ್ಲಿಗೆ ಬಂದಿದ್ದಾರೆ. ಮಾತಿಗೆ ಮಾತು ಬೆಳೆದು ರೋಷನ್ ಮೇಲೆ ಕೈ ಮಾಡಿದ್ದಾರೆ. ಇದರಿಂದ ಕೂಡಲೇ ರೊಚ್ಚಿಗೆದ್ದ ರೋಷನ್ ಆಕಡೆ ಈಕಡೆ ಓಡಾಡಿದವನೇ ಒಂದು ಕಲ್ಲು ಎತ್ತಿಕೊಂಡು ಬಂದು ಮಾಮು ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಯುವಕರ ಗುಂಪು ಚಾಕುನಿಂದ ರೋಷನ್ ಕುತ್ತಿಗೆ ಭಾಗಕ್ಕೆ ಮನಬಂದಂತೆ ಇರಿದಿದೆ ಎನ್ನಲಾಗಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ಲಾರಿ ಏರಿ ಸಿನಿಮಾ ಸ್ಟೈಲ್ನಲ್ಲಿ ಡ್ರೈವರ್ ಮೇಲೆ ಮಾರಣಾಂತಿಕ ಹಲ್ಲೆ
ಇನ್ನು ಸ್ಥಳೀಯರು ಕೂಡಲೇ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದು, ರೋಷನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಇನ್ನು ದೇವಸಂದ್ರದಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಿದ್ದು,ಸಿಸಿಟಿವಿ ಕ್ಯಾಮೆರಾಗಳನ್ನ ಜಾಸ್ತಿ ಹಾಕಿಸಬೇಕು. ಬೇರೆ ಏರಿಯಾದ ಹುಡುಗರು ಬಂದು ಇಲ್ಲಿ ಗಲಾಟೆ ಮಾಡುತ್ತಿದ್ದು, ಈ ಬಗ್ಗೆ ಗಮನವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗಾಯಗೊಂಡ ರೋಷನ್ನಿಂದ ಪೊಲೀಸರು ಹೇಳಿಕೆ ಪಡೆದಿದ್ದು, ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿ ಆಧರಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.