ಉಗ್ರ ಟಿ. ನಾಸೀರ್ ಬಿಡುಗಡೆಗೆ ಸ್ಕೆಚ್: ತಪ್ಪೊಪ್ಪಿಕೊಂಡ ಆರೋಪಿ ಚೋಟಾ ಉಸ್ಮಾನ್​ಗೆ 7 ವರ್ಷ ಜೈಲು ಶಿಕ್ಷೆ

ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ. ನಾಸೀರ್‌ನನ್ನು ಜೈಲಿನಿಂದ ಬಿಡಿಸಿಕೊಳ್ಳಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ವಿಕ್ರಮ್ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್‌ಗೆ ಎನ್ಐಎ ವಿಶೇಷ ನ್ಯಾಯಾಲಯ ಶನಿವಾರ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹರಿಯಾಣದಿಂದ ಗ್ರೆನೇಡ್ ತಂದು ಉಗ್ರವಾದಿ ಕೃತ್ಯಕ್ಕೆ ಸಂಚು ರೂಪಿಸಿದ್ದನ್ನು ಆರೋಪಿ ಒಪ್ಪಿಕೊಂಡಿದ್ದ.

ಉಗ್ರ ಟಿ. ನಾಸೀರ್ ಬಿಡುಗಡೆಗೆ ಸ್ಕೆಚ್: ತಪ್ಪೊಪ್ಪಿಕೊಂಡ ಆರೋಪಿ ಚೋಟಾ ಉಸ್ಮಾನ್​ಗೆ 7 ವರ್ಷ ಜೈಲು ಶಿಕ್ಷೆ
ಸಾಂದರ್ಭಿಕ ಚಿತ್ರ
Image Credit source: tv9
Edited By:

Updated on: May 02, 2026 | 6:50 PM

ಬೆಂಗಳೂರು, ಮೇ 2: ಬೆಂಗಳೂರು ಸರಣಿ ಸ್ಫೋಟದ ಮಾಸ್ಟರ್ ಮೈಂಡ್, ಎಲ್ಇಟಿ ಉಗ್ರ ಟಿ. ನಾಸೀರ್‌ನನ್ನು ಕಾನೂನುಬಾಹಿರವಾಗಿ ಜೈಲಿನಿಂದ ಬಿಡಿಸಿಕೊಳ್ಳಲು ಸಂಚು ರೂಪಿಸಿದ್ದ ಪ್ರಕರಣದ ಒಂಬತ್ತನೇ ಆರೋಪಿ (A9) ವಿಕ್ರಮ್ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್‌ಗೆ (Chota Usman) ಎನ್ಐಎ (NIA) ವಿಶೇಷ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಆರೋಪಿಯು ನ್ಯಾಯಾಲಯದ ಮುಂದೆ ತಪ್ಪು ಒಪ್ಪಿಕೊಂಡಿದ್ದ.

ಇಸ್ಲಾಂಗೆ ಮತಾಂತರಗೊಂಡು ಚೋಟಾ ಉಸ್ಮಾನ್ ಆಗಿದ್ದ ವಿಕ್ರಮ್ ಕುಮಾರ್

ನೂರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿಕ್ರಮ್ ಕುಮಾರ್, ಅಲ್ಲಿ ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ. ನಾಸೀರ್ ಸಂಪರ್ಕಕ್ಕೆ ಬಂದಿದ್ದ. ನಾಸೀರ್ ಪ್ರಭಾವಕ್ಕೊಳಗಾಗಿದ್ದ ವಿಕ್ರಮ್, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಚೋಟಾ ಉಸ್ಮಾನ್ ಎಂದು ಬದಲಾಯಿಸಿಕೊಂಡಿದ್ದ. ಜೈಲಿನಿಂದ ಬಿಡುಗಡೆಯಾದ ನಂತರವೂ ನಾಸೀರ್ ಹಾಗೂ ಇತರ ಉಗ್ರಗಾಮಿ ಸಂಘಟನೆಗಳ ಸದಸ್ಯರೊಂದಿಗೆ ಸತತ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಸಂಚು ರೂಪಿಸಿದ್ದು ಹೇಗೆ?

ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ. ನಾಸೀರ್ ಹಾಗೂ ಇತರ ಉಗ್ರರನ್ನು ಜೈಲಿನಿಂದ ಬಿಡಿಸಿಕೊಳ್ಳಲು ಆರೋಪಿಗಳು ಸಿನಿಮೀಯ ಮಾದರಿಯ ಸ್ಕೆಚ್ ಹಾಕಿದ್ದರು. ನೂರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಎ9 ಆರೋಪಿ ವಿಕ್ರಮ್ ಕುಮಾರ್ (ಚೋಟಾ ಉಸ್ಮಾನ್), ಅಲ್ಲಿ ಟಿ. ನಾಸೀರ್ ಸಂಪರ್ಕಕ್ಕೆ ಬಂದು ಆತನಿಂದ ತೀವ್ರವಾಗಿ ಪ್ರಭಾವಿತನಾಗಿದ್ದ. ನಾಸೀರ್ ಸೂಚನೆಯಂತೆ ಜೈಲಿನಿಂದ ಹೊರಬಂದ ವಿಕ್ರಮ್, ಇತರ ಆರೋಪಿಗಳಾದ ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಜೊತೆ ಸೇರಿ ಸ್ಫೋಟಕಗಳನ್ನು ಸಂಗ್ರಹಿಸಲು ಶುರುಮಾಡಿದ್ದ.

ಇದನ್ನೂ ಓದಿ: ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದಿತ್ತು ಸಿನಿಮೀಯ ರೀತಿ ಸಂಚು! ಎನ್​ಐಎ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು

ಉಗ್ರರನ್ನು ನ್ಯಾಯಾಲಯದ ವಿಚಾರಣೆಗೆ ಅಥವಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿ, ಗ್ರೆನೇಡ್ ಎಸೆದು ಪೊಲೀಸರನ್ನು ಹತ್ಯೆ ಮಾಡಿ ನಾಸೀರ್‌ನನ್ನು ಅಪಹರಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಹರಿಯಾಣದ ಅಂಬಾಲಾದಿಂದ ಗ್ರೆನೇಡ್‌ಗಳನ್ನು ತರಿಸಿಕೊಳ್ಳಲಾಗಿತ್ತು. ಕೇವಲ ಗ್ರೆನೇಡ್ ಅಷ್ಟೇ ಅಲ್ಲದೆ, ದಾಳಿಗೆ ಅಗತ್ಯವಾದ ಮಾರಕಾಸ್ತ್ರಗಳು ಮತ್ತು ವಾಹನಗಳ ವ್ಯವಸ್ಥೆಯನ್ನೂ ಈ ಗ್ಯಾಂಗ್ ಮಾಡಿಕೊಂಡಿತ್ತು ಎಂಬ ಆಘಾತಕಾರಿ ವಿಷಯ ಎನ್​ಐಎ ತನಿಖೆಯಲ್ಲಿ ಬಯಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us