ಮಂಗಳೂರು ಕುಕ್ಕರ್ ಬಾಂಬ್, ರಾಮೇಶ್ವರಂ ಕೆಫೆ ಸ್ಫೋಟ ಮಾಸ್ಟರ್ ಮೈಂಡ್ಗೂ ಬಂಧಿತ ಶಂಕಿತರಿಗೂ ಪ್ರಬಲ ನಂಟು!
Bengaluru NIA Raid: ರಾಷ್ಟ್ರೀಯ ತನಿಖಾ ದಳ ಬೆಂಗಳೂರು ಮತ್ತು ಕೋಲಾರದಲ್ಲಿ ದಾಳಿ ನಡೆಸಿ ಉಗ್ರರ ಜತೆ ನಿಕಟ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಮೂವರನ್ನು ಬಂಧಿಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಎಎಸ್ಐ ಮತ್ತು ಶಮಕಿತ ಉಗ್ರನ ತಾಯಿಯನ್ನು ಬಂಧಿಸಲಾಗಿದೆ. ಇವರೆಲ್ಲರೂ ದಕ್ಷಿಣ ಭಾರತದ ಹಲವು ಸ್ಫೋಟಗಳ ಮಾಸ್ಟರ್ಮೈಂಡ್ ನಾಸೀರ್ ಜೊತೆ ಸಂಪರ್ಕ ಹೊಂದಿದ್ದರು. ಉಗ್ರರ ಜತೆ ಬಂಧಿತರು ಹೊಂದಿದ್ದ ನಂಟಿನ ವಿವರ ಇಲ್ಲಿದೆ.

ಬೆಂಗಳೂರು, ಜುಲೈ 9: ಬೆಂಗಳೂರು, ಕೋಲಾರದಲ್ಲಿ ಮಂಗಳವಾರ ರಾತ್ರಿ ದಿಢೀರ್ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಚಂದ್ ಪಾಷಾ ಹಾಗೂ ಶಂಕಿತ ಉಗ್ರನ (Suspected Terrorist) ತಾಯಿ ಅನೀಸ್ ಫಾತೀಮಾರನ್ನು ಬಂಧಿಸಲಾಗಿದೆ. ಈ ಮೂವರಿಗೆ ಮಂಗಳೂರಿನ ಕುಕ್ಕರ್ ಬಾಂಬ್, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಸ್ಫೋಟ ಸೇರಿದಂತೆ ದಕ್ಷಿಣ ಭಾರತದಲ್ಲಿ ಸಂಭವಿಸಿದ ಹಲವು ಸ್ಫೋಟಗಳ ಮಾಸ್ಟರ್ ಮೈಂಡ್ ನಾಸೀರ್ ಜತೆ ಪ್ರಬಲವಾದ ಸಂಪರ್ಕ ಇತ್ತು ಎಂಬುದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಸಂಚು
ಜೈಲಿನಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ನಾಸೀರ್ ಸಂಚು ಹೂಡುತ್ತಿದ್ದ. ಜೈಲಿನಿಂದಲೇ ಯುವಕರ ತಂಡ ತಯಾರು ಮಾಡುತ್ತಿದ್ದ. ದಕ್ಷಿಣ ಭಾರತದಲ್ಲಿ ನಡೆದ ಹಲವು ಸ್ಫೋಟಗಳ ಮಾಸ್ಟರ್ ಮೈಂಡ್ ಈತನಾಗಿದ್ದು, ಹಲವು ಕೇಸ್ಗಳಲ್ಲಿ ಈತನ ಕೈವಾಡವಿದೆ ಎಂಬುದು ಎನ್ಐಎ ತನಿಖೆಯಲ್ಲಿ ತಿಳಿದುಬಂದಿರುವುದು ಗೊತ್ತಾಗಿದೆ. ಸ್ಲೀಪರ್ ಸೆಲ್ ಜತೆ ನೇರ ಸಂಪರ್ಕ ಹೊಂದಿರುವ ಉಗ್ರ ನಾಸೀರ್, ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ. ಅದಕ್ಕಾಗಿ ಜೈಲಿನಲ್ಲಿ ಇದ್ದುಕೊಂಡೇ ಯುವಕರ ತಂಡ ಕಟ್ಟಿದ್ದ ಎನ್ನಲಾಗಿದೆ.
ಕೊಲೆ ಕೇಸ್ನಲ್ಲಿ ಶಾಮೀಲಾಗಿದ್ದ ಯುವಕರ ತಂಡ ಕಟ್ಟಿದ್ದ ನಾಸೀರ್
ಉಗ್ರ ನಾಸೀರ್, ಕೊಲೆ ಕೇಸ್ನಲ್ಲಿ ಶಾಮೀಲಾಗಿದ್ದ ಯುವಕರ ತಂಡ ಕಟ್ಟಿದ್ದ. ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಇರುವ ತಂಡ ರೆಡಿ ಮಾಡಿದ್ದ. ಈ ತಂಡ ಗ್ರೆನೇಡ್, ಪಿಸ್ತೂಲ್, ಸ್ಫೋಟಕ ವಸ್ತುಗಳ ಸಮೇತ ಸಿಕ್ಕಿಬಿದ್ದಿತ್ತು. ಬೆಂಗಳೂರಿನ ಆರ್.ಟಿ.ನಗರ, ಹೆಬ್ಬಾಳದಲ್ಲಿ ಸಿಕ್ಕಿ ಬಿದ್ದಿತ್ತು. ಇದೀಗ ಪ್ರಮುಖ ಆರೋಪಿ ಜುನೈದ್ಗಾಗಿ ಎನ್ಐಎ ಹುಡುಕಾಟ ನಡೆಸುತ್ತಿದೆ. ಈ ವಿಚಾರ ಸಂಬಂಧ ದಾಳಿ ನಡೆಸಿದಾಗ ಡಾ. ನಾಗರಾಜ್, ಚಂದ್ ಪಾಷಾ ಹಾಗೂ ಅನೀಸ್ ಫಾತೀಮಾ ಸಿಕ್ಕಿಬಿದ್ದಿದ್ದಾರೆ.
ಉಗ್ರ ಟಿ.ನಾಸೀರ್ ಜತೆ ಬಂಧಿತರ ಸಂಪರ್ಕ ವಿವರ
ಮನೋವೈದ್ಯ ಡಾ. ನಾಗರಾಜ್
4-5 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯರಾಗಿ ಕೆಲಸ ಮಾಡುತ್ತಿದ್ದು, ಉಗ್ರ ಟಿ.ನಾಸೀರ್ ಸೇರಿದಂತೆ ಕೈದಿಗಳಿಗೆ ಮೊಬೈಲ್ ಸ್ಮಗ್ಲಿಂಗ್ ಮಾಡಿದ್ದರು. ಸಹಾಯಕಿ ಪವಿತ್ರಾ ಜೊತೆ ಸೇರಿ ಮೊಬೈಲ್ ಸ್ಮಗ್ಲಿಂಗ್ ಮಾಡಿದ್ದರು.
ಎಎಸ್ಐ ಚಂದ್ ಪಾಷಾ
2022ರಲ್ಲಿ ಟಿ.ನಾಸೀರ್ ಪರ ಕೆಲಸ ಮಾಡಿ ಚಂದ್ ಪಾಷಾ, ನಾಸೀರ್ನನ್ನು ಜೈಲಿನಿಂದ ಯಾವ್ಯಾವ ಕೋರ್ಟಗೆ ಕರೆದೊಯ್ಯಲಾಗುತ್ತಿದೆ ಎಂಬ ಮಾಹಿತಿ ಸೋರಿಕೆ ಮಾಡುತ್ತಿದ್ದ. ಟಿ.ನಾಸೀರ್ ಸೇರಿದಂತೆ ಆತನಿಗೆ ಸಂಪರ್ಕ ಇರುವ ಸಂಘಟನೆಗಳ ಸದಸ್ಯರಿಗೆ ಮಾಹಿತಿ ನೀಡಿದ್ದ.
ಅನೀಸ್ ಫಾತೀಮಾ
ನಾಪತ್ತೆಯಾಗಿರುವ ಜುನೈದ್ ಅಹ್ಮದ್ ತಾಯಿ ಅನೀಸ್ ಫಾತೀಮಾ, ಟಿ.ನಾಸೀರ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಎಲ್ಇಟಿಗೆ ಫಂಡ್ ಸಂಗ್ರಹಿಸುವ ಬಗ್ಗೆ ಈಕೆಗೆ ನಾಸೀರ್ ಮಾಹಿತಿ ನೀಡುತ್ತಿದ್ದ. ಈ ಮಾಹಿತಿಯನ್ನು ವಿದೇಶದಲ್ಲಿದ್ದ ಮಗ ಜುನೈದ್ ಗೆ ಫಾತೀಮಾ ತಿಳಿಸಿದ್ದರು.
2023ರಲ್ಲಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಜೈಲಿನಲ್ಲೇ ಟಿ.ನಾಸೀರ್ ಹುಡುಗರನ್ನು ಸಿದ್ಧಗೊಳಿಸಿದ್ದ. ಈ ಕೃತ್ಯಕ್ಕೆ ಬೇಕಾದ ಸಹಕಾರವನ್ನು ಈಗ ಸಿಕ್ಕಿಬಿದ್ದ ಮೂವರು ಆರೋಪಿಗಳು ನೀಡುತ್ತಿದ್ದರು. ಈ ಸ್ಫೊಟಕ ಮಾಹಿತಿ ಸಿಕ್ಕ ತಕ್ಷಣವೇ ಎನ್ಐಎ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಸಿಮ್ ಕಾರ್ಡ್ಗಳನ್ನು ಪೂರೈಕೆ ಮಾಡಿರುವ ಆರೋಪದ ಮೇಲೆ ವೈಟ್ಫೀಲ್ಡ್ ಬಳಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೋಲಾರ ಮೂಲದ ಸತೀಶ್ ಗೌಡ ಎಂಬಾತನಿಗೂ ಎನ್ಐಎ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ.
ಇದನ್ನೂ ಓದಿ: ಬೆಂಗಳೂರು, ಕೋಲಾರದಲ್ಲಿ NIA ದಾಳಿ: ಒಟ್ಟು ಮೂವರು ಶಂಕಿತ ಉಗ್ರರ ಬಂಧನ
ಸದ್ಯ ಬಂಧಿತರ ಮನೆಗಳಿಂದ ಚಿನ್ನಾಭರಣ ಸೇರಿದಂತೆ ಕೆಲವು ಡಿಜಿಟಲ್ ಡಿವೈಸ್, ದಾಖಲೆಗಳನ್ನು ಎನ್ಐಎ ವಶಕ್ಕೆ ಪಡೆದಿದ್ದು, ಬಂಧಿತರ ಎಲ್ಲರ ಪಾತ್ರ ಇನ್ನೂ ಏನೇನಿದೆ ಎಂಬುದು ತನಿಖೆಯಲ್ಲಿ ಬಯಲಾಗಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:04 am, Wed, 9 July 25







