ಬೆಂಗಳೂರು: ಇಟ್ಟಿಗೆ, ಮರದ ತುಂಡು ಪಾಲಿಶ್ ಮಾಡಿ ಚಿನ್ನ ಎಂದು ಮಾರಲು ಯತ್ನ, ಬಿಹಾರದ ಮೂವರ ಬಂಧನ

ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಿಂದ ದೇಶಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆಂಗಳೂರು ಇದೀಗ ಮತ್ತೆ ಚಿನ್ನದ ವಿಚಾರಕ್ಕೇ ಸುದ್ದಿಯಾಗಿದೆ. ಚಿನ್ನ ಸ್ಮಗ್ಲಿಂಗ್ ಆಯ್ತು, ಇದೀಗ ನಕಲಿ ಚಿನ್ನ ಮಾರಾಟ ಜಾಲ ಪತ್ತೆಯಾಗಿದೆ. ಇಟ್ಟಿಗೆ, ಮರದ ತುಂಡನ್ನೆಲ್ಲ ಚಿನ್ನವೆಂದು ಮಾರಾಟ ಮಾಡುತ್ತಿದ್ದ ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ್ದಾರೆ. ಇಟ್ಟಿಗೆ, ಮರದ ತುಂಡನ್ನು ಚಿನ್ನ ಎಂದು ನಂಬಿಸುತ್ತಿದ್ದುದು ಹೇಗೆ? ನಡೆದಿದ್ದೇನು? ಇಲ್ಲಿದೆ ವಿವರ.

ಬೆಂಗಳೂರು: ಇಟ್ಟಿಗೆ, ಮರದ ತುಂಡು ಪಾಲಿಶ್ ಮಾಡಿ ಚಿನ್ನ ಎಂದು ಮಾರಲು ಯತ್ನ, ಬಿಹಾರದ ಮೂವರ ಬಂಧನ
ಬಂಧಿತ ಆರೋಪಿಗಳು ಹಾಗೂ ಅವರಿಂದ ವಶಪಡಿಸಿರುವ ನಕಲಿ ಚಿನ್ನ
Edited By:

Updated on: Mar 24, 2025 | 9:05 AM

ಬೆಂಗಳೂರು, ಮಾರ್ಚ್ 24: ಇಟ್ಟಿಗೆ ಹಾಗೂ ಮರದ ತುಂಡಿಗೆ ಚಿನ್ನದ (Gold) ಪಾಲಿಶ್ ಮಾಡಿ ಮಾರಾಟ ಮಾಡಲು ಯತ್ನಿಸಿದ ಬಿಹಾರ (Bihar) ಮೂಲದ ಮೂವರು ಆರೋಪಿಗಳನ್ನು ಬೆಂಗಳೂರಿನ ಕೋರಮಂಗಲದಲ್ಲಿ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಬಂಧಿತರನ್ನು ರಬಿಕುಲ್ ಇಸ್ಲಾಂ, ಇದ್ದಿಶ್ ಅಲಿ, ಅನ್ವರ್ ಹುಸೇನ್ ಎಂದು ಗುರುತಿಸಲಾಗಿದೆ. ಇದರೊಂದಿಗೆ, ಈಗಾಗಲೇ ಚಿನ್ನ ಕಳ್ಳಸಾಗಣೆ ಪ್ರಕರಣದಿಂದ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆಂಗಳೂರು (Bengaluru) ಚಿನ್ನದ ವಿಚಾರಕ್ಕೆ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗುವಂತಾಗಿದೆ.

ನಿಧಿ ಸಿಕ್ಕಿತೆಂದು ಬಿಂಬಿಸುತ್ತಿದ್ದ ಆರೋಪಿಗಳು

ಮನೆ ಪಾಯ ಹಾಕುವಾಗ ಚಿನ್ನದ ನಿಧಿ ಸಿಕ್ಕಿದೆ ಎಂದು ಆರೋಪಿಗಳು ಕಥೆ ಕಟ್ಟಿದ್ದರು. ಅಲ್ಲದೆ. ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಗಿಂತ ಅರ್ಧ ಬೆಲೆಗೆ ಚಿನ್ನ ಕೊಡುತ್ತೇವೆ ಎಂದು ಹೇಳುತ್ತಿದ್ದರು. ಮರದ‌ ಹಲಗೆ ಹಾಗೂ ಇಟ್ಟಿಗೆಗೆ ಚಿನ್ನ ಪಾಲಿಶ್ ಮಾಡಿ ವಂಚಿಸುತ್ತಿದ್ದರು.

ನಂಬಿಕೆ ಗಳಿಸಲು ಮತ್ತೊಂದು ತಂತ್ರ

ತಾವು ನೀಡುತ್ತಿರುವುದು ಅಸಲಿ ಚಿನ್ನವೇ ಎಂಬ ನಂಬಿಕೆ ಬರುವಂತೆ ಮಾಡಲು ಆರೋಪಿಗಳು ಮೊದಲಿಗೆ ಒಂದೆರಡು ಗ್ರಾಂ ಅಸಲಿ ಚಿನ್ನ ನೀಡುತ್ತಿದ್ದರು. ಒಮ್ಮೆ ಜನ ನಂಬಿದ ನಂತರ ನಕಲಿ ಚಿನ್ನ ಮಾರಾಟ ಮಾಡಲು ಯತ್ನಿಸಿದ್ದರು. ಚಿನ್ನ ತೆಗೆದುಕೊಳ್ಳಲು ತಾವು ತಿಳಿಸಿದ ಜಾಗಕ್ಕೆ ಬರುವಂತೆ ಹೇಳಿ ಪದೆ ಪದೇ ಲೊಕೇಷನ್ ಬದಲಿಸುತ್ತಿದ್ದರು.  ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು. ಇದರ ಆಧಾರದಲ್ಲಿ ಕೋರಮಂಗಲದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 970 ಗ್ರಾಂ ನಕಲಿ ಚಿನ್ನ, ಒಂದು ವಾಹ‌ನ, ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ
ಆಯಸ್ಸು ಮುಗಿದರೂ ಬದಲಾಗದ ತುಂಗಭದ್ರಾ ಡ್ಯಾಂ ಕ್ರೆಸ್ಟ್​ಗೇಟ್​ಗಳು!
ಕೋಳಿ, ಸಿಗರೇಟು, ಹೆಂಡ ನೈವೇದ್ಯ! ಕಾರವಾರದ ಖಾಪ್ರಿ ದೈವದ ಹಿನ್ನೆಲೆಯೇ ರೋಚಕ
ಬಾಗಲಕೋಟೆ: ಕುಸಿದ ಬಿಳಿಜೋಳದ ಬೆಲೆ, ರೈತರು ಕಂಗಾಲು
ಜಿಮ್ಸ್​ನಲ್ಲಿ ಆಕ್ಸಿಜನ್​ಗಾಗಿ ರೋಗಿಗಳ ನರಳಾಟ, ವಿಡಿಯೋ ವೈರಲ್

ಇದನ್ನೂ ಓದಿ: Shocking News: ಹೊಟ್ಟೆಯಲ್ಲಿ 1 ಕೆಜಿ ಚಿನ್ನ ಬಚ್ಚಿಟ್ಟುಕೊಂಡು ಸ್ಮಗ್ಲಿಂಗ್ ಮಾಡುತ್ತಿದ್ದ ಭೂಪ; ಎಕ್ಸ್​-ರೇ ವೇಳೆ ಬಯಲಾಯ್ತು ಸತ್ಯ

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಚಿನ್ನಕ್ಕೆ ಸಂಬಂಧಿಸಿದ ವಂಚನೆ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವುದು ಕಂಡುಬಂದಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12 ಕೋಟಿ ರೂ.ಗೂ ಹೆಚ್ಚು ಮೌಲ್ಯದ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿ ನಟಿ ರನ್ಯಾ ರಾವ್ ಸಿಕ್ಕಿಬಿದ್ದಿದ್ದರು. ಇದೀಗ ನಗರದ ಒಳಗೂ ಚಿನ್ನ ಸಂಬಂಧಿತ ಅಕ್ರಮಗಳು ಹೆಚ್ಚುತ್ತಿರುವುದು ಬಯಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:55 am, Mon, 24 March 25