ಫುಟ್ಪಾತ್ ಮೇಲೆ ವಾಹನ ಚಲಾಯಿಸ್ತೀರಾ? ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಟ್ರಾಫಿಕ್ ಪೊಲೀಸರು
ಬೆಂಗಳೂರಿನಲ್ಲಿ ಮಾನವರಿಗಿಂತ ವಾಹನಗಳೇ ಹೆಚ್ಚಾಗಿವೆ! ಇದರಿಂದ ಸಂಚಾರ ದಟ್ಟಣೆ, ವಾಯು ಮಾಲಿನ್ಯ ಆಹೋದು ಒಂದೆಡೆಯಾದರೆ, ಮತ್ತೊಂದು ಗಂಭೀರ ಸಮಸ್ಯೆ ಇತ್ತೀಚಿಗೆ ಹೆಚ್ಚಾಗಿದೆ. ಫುಟ್ ಪಾತ್ ಮೇಲೆ ವಾಹನ, ಹೆಚ್ಚಾಗಿ ದ್ವಿಚಕ್ರ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿಯೇ ಬೆಂಗಳೂರು ಸಂಚಾರ ಪೊಲೀಸರು ಹೊಸ ಪ್ಲಾನ್ ಮಾಡಿದ್ದು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಮಂದಿಗೆ ಶಾಕ್ ಕೊಟ್ಟಿದ್ದಾರೆ.

ಬೆಂಗಳೂರು, ಫೆಬ್ರವರಿ 7: ವಿವಿಧ ಕಾರಣಗಳಿಂದಾಗಿ ಬೆಂಗಳೂರು ನಗರದಲ್ಲಿ ಜೀವನ ಕಟ್ಟಿಕೊಂಡಿರುವ ಮಂದಿಗಿಂತ ವಾಹನಗಳ ಸಂಖ್ಯೆಯೇ ನಗರದಲ್ಲಿ ಹೆಚ್ಚಾಗಿ ಹೋಗಿದೆ. ಹೀಗಾಗಿ ವಾಹನಗಳಿಂದ ಆಗುತ್ತಾ ಇರುವ ಟ್ರಾಫಿಕ್ ಜಾಮ್ ಕಂಟ್ರೋಲ್ಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೆ ಮಿತಿಮೀರಿದ ವಾಹನಗಳ ಓಡಾಟದಿಂದ ಪಾದಚಾರಿಗಳ ಜೀವಕ್ಕೆ ಭದ್ರತೆ ಇಲ್ಲದಾಗಿದೆ.
ಐಪಿಸಿ ಸೆಕ್ಷನ್ 283 ರ ಅಡಿ ಪಾದಚಾರಿ ಮಾರ್ಗದಲ್ಲಿ ವಾಹನ ಸಂಚಾರ ಮಾಡುವುದು ಅಪರಾಧ. 1 ಸಾವಿರ ರೂಪಾಯಿ ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ ಇದೆ. ಇಷ್ಟಾದರೂ ಫುಟ್ ಪಾತ್ ಮೇಲೆ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಫುಟ್ ಪಾತ್ ಮೇಲೆ ವಾಹನ ಚಾಲನೆ: ದಾಖಲಾದ ಕೇಸ್ ಎಷ್ಟು?
ಕಳೆದ ಮೂರು ವರ್ಷಗಳಲ್ಲಿ ಪಾದಚಾರಿ ಮಾರ್ಗದಲ್ಲಿ ವಾಹನ ಓಡಾಟ ಸಂಬಂಧ ದಾಖಲಾಗಿರುವ ಕೇಸ್ಗಳನ್ನು ಗಮನಿಸುವುದಾದರೆ, 2022 ರಲ್ಲಿ 18,144 ಆಗಿದ್ದು, 2023 ರಲ್ಲಿ ಇದು ಇಳಿಕೆಯಾಗಿದೆ. ಆದರೆ ಕಳೆದ ವರ್ಷ ಇದು ವಿಪರೀತ ಏರಿಕೆಯಾಗಿದೆ. ಅಂದರೆ 2024 ರಲ್ಲಿ 17,214 ಫುಟ್ ಪಾತ್ನಲ್ಲಿ ವಾಹನ ಚಲಾಯಿಸಿದ ಪ್ರಕರಣಗಳು ದಾಖಲಾಗಿರುವುದು ಪಾದಚಾರಿಗಳ ಆತಂಕಕ್ಕೆ ಕಾರಣವಾಗಿದೆ.
ರಸ್ತೆ ಇರುವುದು ವಾಹನಗಳು ಓಡಾಟಕ್ಕೆ, ಫುಟ್ ಪಾತ್ ಇರುವುದು ಜನಸಾಮಾನ್ಯರು ನಡೆದಾಡುವುದಕ್ಕೆ. ಆದರೆ ರಸ್ತೆ ಮೇಲೆ ಓಡಬೇಕಾದ ಬೈಕ್ಗಳು ಫುಟ್ ಪಾತ್ ಮೇಲೆ ಸಂಚರಿಸುವುದು ಹೆಚ್ಚಾಗುತ್ತಿದೆ. ಹೀಗಾಗಿಯೇ ಇಂತಹವರ ಕೇಸ್ ಹಾಕಿ, ದಂಡ ವಿಧಿಸಿದರೂ ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸ ಯೋಜನೆ ಹಾಕಿಕೊಂಡಿರುವ ಸಂಚಾರ ಪೊಲೀಸರು ಪದೇ ಪದೇ ನಿಯಮ ಉಲ್ಲಂಘಿಸಿ ಫುಟ್ ಪಾತ್ ಮೇಲೆ ರೈಡ್ ಮಾಡುವವರ ಪರವಾನಗಿ (ಲೈಸೆನ್ಸ್) ರದ್ದು ಮಾಡಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಪೋಲಿಸರ ಈ ಕ್ರಮಕ್ಕೆ ಜನಸಾಮಾನ್ಯರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಏರ್ ಶೋ: ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ, ಪಾರ್ಕಿಂಗ್, ಏರ್ಪೋರ್ಟ್ಗೆ ಬದಲಿ ಮಾರ್ಗ ವಿವರ ಇಲ್ಲಿದೆ
ಕೇಸ್ ಹಾಕಿ, ದಂಡ ಹಾಕಿದರೂ ಬುದ್ಧಿ ಕಲಿಯದೆ ಬೇಕಾಬಿಟ್ಟಿ ವಾಹನ ಚಾಲನೆ ಮಾಡಿ, ಪಾದಚಾರಿಗಳ ಜೀವಕ್ಕೆ ಕುತ್ತು ತರುತ್ತಿರುವವರನ್ನು ಪಟ್ಟಿ ಮಾಡಿ ಸಾರಿಗೆ ಇಲಾಖೆಗೆ ಡಿಎಲ್ ರದ್ದು ಮಾಡಲು ಶಿಫಾರಸು ಮಾಡಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧಾರ ಮಾಡಿದ್ದಾರೆ. ಒಟ್ಟಿನಲ್ಲಿ ಫುಟ್ ಪಾತ್ ಮೇಲೆ ವಾಹನ ಸಂಚಾರ ತಪ್ಪು ಎಂದು ಗೊತ್ತಿದ್ದರೂ, ಮತ್ತದೇ ತಪ್ಪು ಮಾಡುವ ವಾಹನ ಸವಾರರು ಬುದ್ಧಿ ಕಲಿಯಲೇಬೇಕಿದೆ. ಇಲ್ಲವಾದರೆ ಪರವಾನಗಿ ರದ್ದಾಗುವುದನ್ನು ಎದುರುನೋಡುವ ದಿನ ಹತ್ತಿರವಾಗುತ್ತಿದೆ.
ವರದಿ: ಲಕ್ಷ್ಮಿ ನರಸಿಂಹ ‘ಟಿವಿ9’
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




