ಭುವನೇಶ್ವರ-ಯಶವಂತಪುರ ವೀಕ್ಲಿ ಸ್ಪೆಷಲ್ ರೈಲುಗಳ ಸಂಚಾರ ಅವಧಿ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

ರೈಲು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಪೂರ್ವ ಕರಾವಳಿ ರೈಲ್ವೆಯು ಭುವನೇಶ್ವರ ಹಾಗೂ ಬೆಂಗಳೂರಿನ ಯಶವಂತಪುರ ನಿಲ್ದಾಣಗಳ ನಡುವೆ ಸಂಚರಿಸುವ ಸಾಪ್ತಾಹಿಕ ಬೇಸಿಗೆ ವಿಶೇಷ ರೈಲುಗಳ (ವೀಕ್ಲಿ ಸ್ಪೆಷಲ್ ಟ್ರೈನ್) ಅವಧಿಯನ್ನು ವಿಸ್ತರಿಸಿದೆ. ಈ ಕುರಿತು ನೈಋತ್ಯ ರೈಲ್ವೆ ಮಾಹಿತಿ ಹಂಚಿಕೊಂಡಿದ್ದು, ವಿವರಗಳು ಇಲ್ಲಿವೆ.

ಭುವನೇಶ್ವರ-ಯಶವಂತಪುರ ವೀಕ್ಲಿ ಸ್ಪೆಷಲ್ ರೈಲುಗಳ ಸಂಚಾರ ಅವಧಿ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
ಸಾಂದರ್ಭಿಕ ಚಿತ್ರ
Image Credit source: tv9

Updated on: Jun 19, 2026 | 12:07 PM

ಬೆಂಗಳೂರು, ಜೂನ್ 19: ಭುವನೇಶ್ವರ ಮತ್ತು ಬೆಂಗಳೂರಿನ ಯಶವಂತಪುರ ನಿಲ್ದಾಣಗಳ ನಡುವೆ ಪ್ರಯಾಣಿಸುವ ಸಾರ್ವಜನಿಕರಿಗೆ ನೈಋತ್ಯ ರೈಲ್ವೆ (SWR) ಮಹತ್ವದ ಶುಭ ಸುದ್ದಿ ನೀಡಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಈ ಮಾರ್ಗದಲ್ಲಿ ಚಲಿಸುವ ಸಾಪ್ತಾಹಿಕ ಬೇಸಿಗೆ ವಿಶೇಷ ರೈಲುಗಳ (ರೈಲು ಸಂಖ್ಯೆ: 02811/02812) ಸಂಚಾರ (Weekly Summer Special Train) ಅವಧಿಯನ್ನು ವಿಸ್ತರಿಸಲು ಪೂರ್ವ ಕರಾವಳಿ ರೈಲ್ವೆ ನಿರ್ಧರಿಸಿದೆ ಎಂದು ನೈಋತ್ಯ ರೈಲ್ವೆಯ ಅಧಿಕೃತ ಎಕ್ಸ್ ಖಾತೆಯ ಪ್ರಕಟಣೆಯಲ್ಲಿ ತಿಳಿಸಿದೆ.

ಮುಖ್ಯಾಂಶಗಳು

  • ಸಾಪ್ತಾಹಿಕ ವಿಶೇಷ ರೈಲುಗಳ ಅವಧಿ ವಿಸ್ತರಣೆ.
  • ಆಗಸ್ಟ್ ಅಂತ್ಯದವರೆಗೆ ರೈಲುಗಳ ಸಂಚಾರ ಲಭ್ಯ.
  • ವೇಳಾಪಟ್ಟಿ ಹಾಗೂ ಬೋಗಿಗಳಲ್ಲಿ ಬದಲಾವಣೆಯಿಲ್ಲ.

ವಿಸ್ತೃತ ವೇಳಾಪಟ್ಟಿಯ ವಿವರ

  • ರೈಲು ಸಂಖ್ಯೆ 02811 (ಭುವನೇಶ್ವರ–ಯಶವಂತಪುರ): ಪ್ರತಿ ಶನಿವಾರ ಭುವನೇಶ್ವರದಿಂದ ಹೊರಡುವ ಈ ವಿಶೇಷ ರೈಲಿನ ಸೇವೆಯನ್ನು ಈ ಹಿಂದೆ ಜೂನ್ 27 ರವರೆಗೆ ನಿಗದಿಪಡಿಸಲಾಗಿತ್ತು. ಇದನ್ನು ಈಗ ಜುಲೈ 4 ರಿಂದ ಆಗಸ್ಟ್ 29 ರವರೆಗೆ ವಿಸ್ತರಿಸಲಾಗಿದೆ.
  • ರೈಲು ಸಂಖ್ಯೆ 02812 (ಯಶವಂತಪುರ–ಭುವನೇಶ್ವರ): ಪ್ರತಿ ಸೋಮವಾರ ಯಶವಂತಪುರದಿಂದ ಹೊರಡುವ ಈ ರೈಲು ಈ ಮೊದಲು ಜೂನ್ 29 ರವರೆಗೆ ಸಂಚರಿಸಲಿದೆ ಎನ್ನಲಾಗಿತ್ತು. ಇದನ್ನು ಈಗ ಜುಲೈ 6 ರಿಂದ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.
  • ಈ ರೈಲುಗಳ ನಿಯಮಿತ ವೇಳಾಪಟ್ಟಿ, ನಿಲುಗಡೆ ಹಾಗೂ ಬೋಗಿಗಳ (Coaches) ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ನೈಋತ್ಯ ರೈಲ್ವೆ ಎಕ್ಸ್ ಸಂದೇಶ


ಕೆಎಸ್ಆರ್ ಬೆಂಗಳೂರು ಯಾರ್ಡ್ ಕಾಮಗಾರಿ: ಭಾಗಶಃ ಸಂಚಾರ ರದ್ದು

ಪ್ರಯಾಣಿಕರು ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಕೆಎಸ್ಆರ್ ಬೆಂಗಳೂರು ನಿಲ್ದಾಣದ ಯಾರ್ಡ್‌ನಲ್ಲಿ ನಾನ್-ಇಂಟರ್‌ಲಾಕಿಂಗ್ ತಾಂತ್ರಿಕ ಕಾಮಗಾರಿ ನಡೆಯುತ್ತಿರುವುದರಿಂದ ಈ ರೈಲುಗಳ ಸಂಚಾರದಲ್ಲಿ ಭಾಗಶಃ ಬದಲಾವಣೆ ಇರಲಿದೆ. ಆಗಸ್ಟ್ 29 ರಂದು ಭುವನೇಶ್ವರದಿಂದ ಹೊರಡುವ ರೈಲು (02811) ಯಶವಂತಪುರ ಬದಲಿಗೆ ಯಲಹಂಕ ನಿಲ್ದಾಣದಲ್ಲೇ ಪ್ರಯಾಣ ಮುಕ್ತಾಯಗೊಳಿಸಲಿದೆ. ಹಾಗೆಯೇ, ಆಗಸ್ಟ್ 31 ರಂದು ಹೊರಡಬೇಕಿರುವ ರೈಲು (02812) ಯಶವಂತಪುರ ಬದಲಿಗೆ ಯಲಹಂಕ ನಿಲ್ದಾಣದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ. ಹೀಗಾಗಿ ಈ ಎರಡು ದಿನಗಳಂದು ಯಶವಂತಪುರ ಮತ್ತು ಯಲಹಂಕ ನಡುವೆ ರೈಲು ಸಂಚಾರ ಭಾಗಶಃ ರದ್ದಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us