ಐಪಿಎಲ್ ಟಿಕೆಟ್​ಗಾಗಿ ಶಾಸಕ ಸುರೇಶ್ ಕುಮಾರ್‌ಗೆ ಅಪರಿಚಿತ ವ್ಯಕ್ತಿಯಿಂದ ಫೋನ್​ ಕಾಲ್​​

ಐಪಿಎಲ್ ಹಬ್ಬ ಶುರುವಾಗಿದೆ. ಅಭಿಮಾನಿಗಳು ಟಿಕೆಟ್ ಪಡೆಯಲು ಸರ್ಕಸ್ ಮಾಡುತ್ತಿದ್ದಾರೆ. ಇದರ ಮಧ್ಯೆ ಇಂದು ವಿಧಾನಸಭೆಯಲ್ಲಿ ಶಾಸಕರಿಗೆ ಐಪಿಎಲ್​​ ಟಿಕೆಟ್​ ಹಂಚಿಕೆ ಮಾಡಲಾಗಿದೆ. ಹೀಗಿರುವಾಗ ಬಿಜೆಪಿ ಶಾಸಕರಿಗೆ ಅಪರಿಚಿತ ವ್ಯಕ್ತಿ ಓರ್ವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಂಬಂಧಿ ಎಂದು ಹೇಳಿಕೊಂಡು ಐಪಿಎಲ್​​ ಟಿಕೆಟ್​​ಗೆ ಬೇಡಿಕೆ ಇಟ್ಟಿರುವಂತಹ ಘಟನೆ ವಿಚಿತ್ರ ಘಟನೆಯೊಂದು ನಡೆದಿದೆ.

ಐಪಿಎಲ್ ಟಿಕೆಟ್​ಗಾಗಿ ಶಾಸಕ ಸುರೇಶ್ ಕುಮಾರ್‌ಗೆ ಅಪರಿಚಿತ ವ್ಯಕ್ತಿಯಿಂದ ಫೋನ್​ ಕಾಲ್​​
ಶಾಸಕ ಸುರೇಶ್ ಕುಮಾರ್‌
Image Credit source: google
Edited By:

Updated on: Apr 04, 2026 | 5:13 PM

ಬೆಂಗಳೂರು, ಏಪ್ರಿಲ್​ 04: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್​ 05ರಂದು ಆರ್​ಸಿಬಿ ಮತ್ತು ಸಿಎಸ್​ಕೆ ಮಧ್ಯೆ ಹೈವೋಲ್ಟೇಜ್ ಪಂದ್ಯ (RCB vs CSK Match) ನಡೆಯಲಿದೆ. ಕ್ರಿಕೆಟ್​ ಫ್ಯಾನ್ಸ್​ ನಾಳೆ ನಡೆಯಲಿರುವ ಪಂದ್ಯ ನೋಡಲು ಕಾತರರಾಗಿದ್ದಾರೆ. ಇತ್ತ ರಾಜ್ಯದ ಶಾಸಕರಿಗೆ ತಲಾ ಮೂರು ಐಪಿಎಲ್ ಟಿಕೆಟ್ ವಿತರಣೆ ಮಾಡಲಾಗಿದೆ. ಹೀಗಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಂಬಂಧಿ ಎಂದು ಹೇಳಿಕೊಂಡು ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ಗೆ (MLA Suresh Kumar) ದೂರವಾಣಿ ಕರೆ ಮಾಡಿರುವ ಘಟನೆ ನಡೆದಿದೆ.

ಐಪಿಎಲ್ ಟಿಕೆಟ್​ಗಾಗಿ ಶಾಸಕರಿಗೆ ಕರೆ

ನಾಳಿನ ಪಂದ್ಯಕ್ಕೆ ಸರತಿಸಾಲಿನಲ್ಲಿ ನಿಂತು ಶಾಸಕರ ಪಿಎಗಳು ಇಂದು ಟಿಕೆಟ್ ಪಡೆದುಕೊಂಡಿದ್ದಾರೆ. ವಿಧಾನಸೌಧದ ಸ್ಪೀಕರ್ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಕೊಠಡಿಯಲ್ಲಿ ತಲಾ 3 ಟಿಕೆಟ್ ವಿತರಣೆ ಮಾಡಲಾಗಿದೆ. ಶಾಸಕರಿಗೆ ಐಪಿಎಲ್ ಟಿಕೆಟ್ ವಿತರಣೆ ಮಾಡುತ್ತಿರುವುದನ್ನು ತಿಳಿದ ಸಂದೀಪ್ ಎಂಬ ಹೆಸರಿನ ವ್ಯಕ್ತಿ ಶಾಸಕ ಸುರೇಶ್ ಕುಮಾರ್‌ಗೆ ದೂರವಾಣಿ ಕರೆ ಮಾಡಿ ಟಿಕೆಟ್ ಪಡೆಯಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಶಾಸಕ ಸುರೇಶ್ ಫೆಸ್​ಬುಕ್ ಪೋಸ್ಟ್

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಂಬಂಧಿ ಎಂದು ಹೇಳಿರುವ ಸಂದೀಪ್​, ತೆಲಂಗಾಣ ಸಿಎಂ ಕಚೇರಿಯಿಂದ ನಿಮ್ಮ ದೂರವಾಣಿ ಸಂಖ್ಯೆ ಪಡೆದಿದ್ದೇನೆ. ಐಪಿಎಲ್ ಟಿಕೆಟ್ ಪಡೆಯಲು ಸಹಾಯ ಎಂದಿದ್ದಾರೆ. ಆದರೆ  ನಾನು ಟಿಕೆಟ್ ಬೇಡ ಎಂದು ಸ್ಪೀಕರ್‌ಗೆ ಪತ್ರ ಬರೆದಿದ್ದೇನೆ. ನನ್ನ ಬಳಿ ಐಪಿಎಲ್ ಟಿಕೆಟ್ ವಿಚಾರ ಮಾತನಾಡಬೇಡಿ ಎಂದು ಸಂದೀಪ್‌ಗೆ ಶಾಸಕ ಸುರೇಶ್‌ ಕುಮಾರ್ ಹೇಳಿದ್ದಾರೆ.

ವಿಚಿತ್ರ ಮೊಬೈಲ್ ಕರೆ

ಇನ್ನು ಈ ಬಗ್ಗೆ ಫೆಸ್​ಬುಕ್ ಪೋಸ್ಟ್ ಹಂಚಿಕೊಂಡ ಶಾಸಕ ಸುರೇಶ್‌ ಕುಮಾರ್, ಇಂದು ಮಧ್ಯಾಹ್ನ ಹೀಗೊಂದು ವಿಚಿತ್ರ ಮೊಬೈಲ್ ಕರೆ ನನಗೆ ಬಂದಿತ್ತು. ಆಹಾ.. ಎಂತಹ ಕರೆ ಅಂತೀರಿ! ಕರೆ ಮಾಡಿದವರ ಹೆಸರು ಸಂದೀಪ್ ಎಂದು. ಮಿಸ್ಡ್ ಕಾಲ್ ಲಿಸ್ಟ್ ಅಲ್ಲಿದ್ದ ಆ ನಂಬರ್​​ಗೆ ನಾನು ಮರುಕರೆ ಮಾಡಿ ಕನ್ನಡದಲ್ಲಿ ಮಾತನಾಡಿದಾಗ ಅವರು ಇಂಗ್ಲಿಷ್​ನಲ್ಲಿ ತಮ್ಮ ಪರಿಚಯ ಹೇಳಿಕೊಂಡಿದ್ದು ಹೀಗೆ. “ನನ್ನ ಹೆಸರು ಸಂದೀಪ್ ಎಂದು. ನಿಮ್ಮ ಮೊಬೈಲ್ ನಂಬರ್ ನನಗೆ ಶ್ರೀ ರೇವಂತ ರೆಡ್ಡಿ ಅವರ ಆಫೀಸಿಂದ ದೊರಕಿತು. ನಾನು ಕಾಂಗ್ರೆಸ್ ಕಾರ್ಯಕರ್ತ ಹಾಗೂ ರೇವಂತರ ರೆಡ್ಡಿ ಅವರ ಸಂಬಂಧಿ. ನನಗೆ ಐಪಿಎಲ್ ಟಿಕೆಟ್ ಬೇಕಿತ್ತು. ದಯವಿಟ್ಟು ಸಹಾಯ ಮಾಡುವಿರಾ” ಎಂಬುದು ಆ ಕರೆಯ ಸಾರಾಂಶ.

ಇದನ್ನೂ ಓದಿ: ಅತ್ತ ಗ್ಯಾಸ್​​ಗಾಗಿ ಆಟೋ ಚಾಲಕರ ಪರದಾಟ: ಇತ್ತ ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು

ನಾನು ಅವರಿಗೆ ಮಾರುತ್ತರ ಕೊಟ್ಟೆ “ನನಗೆ ಐಪಿಎಲ್ ಟಿಕೆಟ್ ಬೇಡ. ನನ್ನ ಹೆಸರಿನಲ್ಲಿ ಯಾರಿಗೂ ಟಿಕೆಟ್ ಕೊಡುವುದು ಬೇಡ. ಈ ವಿಐಪಿ ಸಂಸ್ಕೃತಿಗೆ ಕೊನೆ ಹಾಡಬೇಕು” ಎಂದು ನಾನು ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ದಯವಿಟ್ಟು ಈ ವಿಚಾರ ನನ್ನ ಜೊತೆ ಮಾತನಾಡಬೇಡಿ ಎಂದೆ. ಪಾಪ, ತುಂಬಾ ನಿರಾಶರಾದ ಅವರು ಫೋನ್ ಕರೆ ಕಟ್ ಮಾಡಿದರು. ನನಗೂ ನಗು ಬಂತು. ನಕ್ಕುಬಿಟ್ಟೆ. ಅಬ್ಬಾ.. IPL ಮಾಯೆ ತೆಲಂಗಾಣದವರನ್ನು ನನಗೆ ಫೋನಾಯಿಸುವಂತೆ ಮಾಡಿತು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:09 pm, Sat, 4 April 26

Follow Us