ಬೆಂಗಳೂರು: ಮಳೆ ಮಧ್ಯೆಯೂ ಹೊತ್ತಿ ಉರಿದ ಬಿಎಂಟಿಸಿ ಬಸ್​

| Updated By: ವಿವೇಕ ಬಿರಾದಾರ

Updated on: Aug 06, 2024 | 7:52 AM

ಸೋಮವಾರ ರಾತ್ರಿ ಮಳೆಯ ನಡುವೆಯೂ ನಾಗವಾರ - ಹೆಬ್ಬಾಳ ಸರ್ವಿಸ್ ರಸ್ತೆಯಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್​ ಬಸ್​ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಎಲೆಕ್ಟ್ರಿಕ್​ ಬಸ್​​​ನಲ್ಲಿ ಉಂಟಾದ ಶಾರ್ಟ್​​​​ ಸರ್ಕ್ಯೂಟ್​​ನಿಂದ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು: ಮಳೆ ಮಧ್ಯೆಯೂ ಹೊತ್ತಿ ಉರಿದ ಬಿಎಂಟಿಸಿ ಬಸ್​
ಹೊತ್ತಿ ಉರಿದ ಬಿಎಂಟಿಸಿ ಬಸ್​​
Follow us on

ಬೆಂಗಳೂರು, ಆಗಸ್ಟ್​ 06: ನಗರದಲ್ಲಿ ಕಳೆದ ರಾತ್ರಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಮಳೆಯ ನಡುವೆಯೂ ನಗರದ ಮಾನ್ಯತಾ ಟೆಕ್​​ಪಾರ್ಕ್ ಬಳಿ ಬಿಎಂಟಿಸಿ ಎಲೆಕ್ಟ್ರಿಕ್​ ​​ಬಸ್ (BMTC Electric Bus) ಬೆಂಕಿಗಾಹುತಿಯಾಗಿರುವ ಘಟನೆ ನಾಗವಾರ – ಹೆಬ್ಬಾಳ ಸರ್ವಿಸ್ ರಸ್ತೆಯಲ್ಲಿ ನಡೆದಿದೆ. ರಾತ್ರಿ ಸುರಿದ ಮಳೆಯಿಂದ ಸರ್ವಿಸ್​ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಇದೇ ಮಾರ್ಗದಲ್ಲಿ ಬರುತ್ತಿದ್ದ ಬಸ್​ ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ.

ಎಲೆಕ್ಟ್ರಿಕ್​ ಬಸ್​​​ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡಿದೆ. ಕೂಡಲೆ ಚಾಲಕ ಬಸ್​ ಅನ್ನು ನಿಲ್ಲಿಸಿದ್ದಾನೆ. ಪ್ರಯಾಣಿಕರು ಬಸ್ಸಿಂದ ಕೆಳಗಿಳಿದ್ದಾರೆ. ಅನಂತರ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಗ್ನಿಶಾಮಕದಳದ ವಾಹನ ಸ್ಥಳಕ್ಕೆ ತಲುಪುವ ಮೊದಲೇ ಬಸ್​ ಬೆಂಕಿಗಾಹುತಿಯಾಗಿತ್ತು. ಬಸ್​ನಲ್ಲಿ ಉಂಟಾದ ಶಾರ್ಟ್​​​​ ಸರ್ಕ್ಯೂಟ್​​ನಿಂದ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಅಗ್ನಿ ಅವಘಡದಿಂದ ನಾಗವಾರ ಜಂಕ್ಷನ್​​ನಿಂದ ಲುಂಬಿನಿ ಗಾರ್ಡನ್​​ವರೆಗೆ ಸುಮಾರು 3 ಕಿಮೀ. ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿತ್ತು. ಟ್ರಾಫಿಕ್​​ನಲ್ಲಿ ಸಿಲುಕಿದ ಅಗ್ನಿಶಾಮಕ ಸಿಬ್ಬಂದಿ ಅವಘಡ ನಡೆದ ಸ್ಥಳಕ್ಕೆ ತೆರಳಲು ಆಗದೆ ಪರದಾಡಿದರು. ಇದರಿಂದ ಘಟನಾ ಸ್ಥಳಕ್ಕೆ ತೆರಳಲು ತಡವಾಯ್ತು.

ಅಂಡರ್ ಪಾಸ್​​ನಲ್ಲಿ ಸಿಲುಕಿದ ಕಂಟೆನರ್

ಮಹಾರಾಣಿ ಕಾಲೇಜು ಅಂಡರ್ ಪಾಸ್​​ನಲ್ಲಿ ಕಂಟೆನರ್ ಸಿಲುಕಿತ್ತು. ಇದರಿಂದ ಅಂಡರ್​​ ಪಾಸ್​ನಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಕಂಟೆನರ್​​ ಅನ್ನು ಅಂಡರ್ ಪಾಸ್​​ನಿಂದ ಹೊರ ತಗೆಯಲು ಚಾಲಕ ಹರಸಾಹಸಪಟ್ಟನು. ಕಂಟೆನರ್ ಹೊರ ತೆಗೆಯಲು ಚಾಲಕ ಟಯರ್ ಬ್ಲೋ ತೆಗೆದು, ವಾಹನ ಪಾರು ಮಾಡಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ

ಮಳೆಯಿಂದ ಅವಾಂತರ

ರಾತ್ರಿ ಸುರಿದ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಮಾಗಡಿ ರಸ್ತೆ, ನಾಗರಬಾವಿ, ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಸಂಪರ್ಕಿಸುವ ನಾಯಂಡಹಳ್ಳಿ ಜಂಕ್ಷನ್ ರಸ್ತೆಯಲ್ಲಿ ಗುಂಡಿ ಬಿದ್ದಿವೆ. ರಸ್ತೆಯಲ್ಲಿನ ಗುಂಡಿಗಳಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ರಸ್ತೆಯ ದುಸ್ಥಿತಿ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪ್ರತಿಬಾರಿ ಮಳೆ ಬಂದಾಗ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಯಾರಾದರೂ ಬಿದ್ದು ಜೀವ ಹೋದರೆ ಯಾರು ಹೊಣೆ? ರಸ್ತೆ ಗುಂಡಿಗಳನ್ನು ಮುಚ್ಚದೆ ತೇಪೆ ಹಾಕಿ ಹೋಗುತ್ತಾರೆ. ಮಳೆ ಬಂದಾಗ ಮತ್ತೆ ರಸ್ತೆಯಲ್ಲಿ ಗುಂಡಿಗಳು ಬಾಯಿ ತೆರೆಯುತ್ತವೆ” ಎಂದು ಬಿಬಿಎಂಪಿ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ