ಕರ್ನಾಟಕಕ್ಕೆ ಮತ್ತೊಮ್ಮೆ ಆಘಾತ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಆದೇಶ

ರಾಜ್ಯದಲ್ಲಿ ಮುಂಗಾರು ಕೈಕೊಟ್ಟು ಜಲಾಶಯಗಳಲ್ಲಿ ನೀರಿನ ಕೊರತೆ ಎದುರಾಗಿರುವ ಹೊತ್ತಲ್ಲೇ, ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿದೆ. ದೆಹಲಿಯಲ್ಲಿ CWRC ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ, ಮುಂದಿನ 15 ದಿನಗಳ ಕಾಲ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಲಾಗಿದೆ.

ಕರ್ನಾಟಕಕ್ಕೆ ಮತ್ತೊಮ್ಮೆ ಆಘಾತ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಆದೇಶ
ಕಾವೇರಿ ನೀರು
Image Credit source: tv9 kannada

Updated on: Sep 08, 2026 | 3:13 PM

ಬೆಂಗಳೂರು, ಸೆಪ್ಟೆಂಬರ್​ 08: ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ಎದುರಾಗಿದೆ. ಒಂದೆಡೆ ತೀವ್ರ ಬರ, ಮತ್ತೊಂದೆಡೆ ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಒಳಹರಿವು ಗಣನೀಯವಾಗಿ ಇಳಿಕೆಯಾಗುತ್ತಿರುವ ಮಧ್ಯೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತೊಂದು ಪೆಟ್ಟು ನೀಡಿದೆ. ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 6 ಸಾವಿರ ಕ್ಯೂಸೆಕ್​​ ನೀರು ಹರಿಸುವಂತೆ ಆದೇಶಿಸಿದೆ. ಆ ಮೂಲಕ ಕಾವೇರಿ ಜಲವಿವಾದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಹಿನ್ನಡೆ ಉಂಟಾಗಿದೆ.

ಕರ್ನಾಟಕದ ಮನವಿಗೆ ಸಿಗದ ಮನ್ನಣೆ

ರಾಜ್ಯದ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಕುಸಿದಿರುವುದರಿಂದ ನೀರು ಹರಿಸುವ ಪ್ರಮಾಣವನ್ನು 9 ಸಾವಿರದಿಂದ 2 ಸಾವಿರ ಕ್ಯೂಸೆಕ್‌ಗೆ ಇಳಿಸಬೇಕು ಎಂದು ಕರ್ನಾಟಕ ಈಗಾಗಲೇ ಮೇಲ್ಮನವಿ ಸಲ್ಲಿಸಿತ್ತು. ವಾಸ್ತವ ಸ್ಥಿತಿಯನ್ನು ಮುಂದಿಟ್ಟು ರಾಜ್ಯದ ಅಧಿಕಾರಿಗಳು ಬಲವಾಗಿ ವಾದ ಮಂಡಿಸಿದರೂ, ಅದಕ್ಕೆ ಮನ್ನಣೆ ಸಿಕ್ಕಿಲ್ಲ. ಮತ್ತೊಂದೆಡೆ, ತಮಿಳುನಾಡು ಮತ್ತಷ್ಟು ಹೆಚ್ಚುವರಿ ನೀರಿಗಾಗಿ ಪಟ್ಟು ಹಿಡಿದಿತ್ತು. ಇಂದು ಮಧ್ಯಾಹ್ನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಿಗದಿಯಾಗಿತ್ತು.

ದೆಹಲಿಯಲ್ಲಿ ಕುಳಿತವರಿಗೆ ನೆಲದ ವಾಸ್ತವ ಅರ್ಥವಾಗಲ್ಲ: ಸಚಿವ ಚೆಲುವರಾಯಸ್ವಾಮಿ ಆಕ್ರೋಶ

CWRC ಆದೇಶಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ‘ಇದು ನಮಗೆ ಅತ್ಯಂತ ನೋವಿನ ಸಂಗತಿ. ರಾಜ್ಯದಲ್ಲಿ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಕಳೆದ ವಾರದಿಂದಲೇ ಜಲಾಶಯಗಳಿಗೆ ಒಳಹರಿವು ತಗ್ಗಿರುವುದರಿಂದ 6 ಸಾವಿರ ಕ್ಯೂಸೆಕ್ ನೀರು ಬಿಡುವುದು ಅಸಾಧ್ಯದ ಮಾತು. ದೆಹಲಿಯಲ್ಲಿ ಕೂತು ಆದೇಶ ಮಾಡುವವರಿಗೆ ಇಲ್ಲಿನ ಜನರ ಕುಡಿಯುವ ನೀರಿನ ಸಂಕಷ್ಟ ಅರ್ಥವಾಗುವುದಿಲ್ಲ. ಈ ಆದೇಶವನ್ನು ಒಪ್ಪಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಕಾವೇರಿ ಜಲ ವಿವಾದ: ತಮಿಳುನಾಡಿಗೆ ನೀರು ಹರಿಸಬೇಕಿರುವ ಪ್ರಮಾಣ ಇಳಿಕೆಗೆ ಆಗ್ರಹಿಸಿ CWMAಗೆ ಕರ್ನಾಟಕ ಮನವಿ

‘ಮಧ್ಯಾಹ್ನದ CWMA ಸಭೆಯ ತೀರ್ಮಾನವನ್ನು ಗಮನಿಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ. ಅಡ್ವೋಕೇಟ್ ಜನರಲ್ ಹಾಗೂ ಕಾನೂನು ತಜ್ಞರ ಜತೆ ಸಮಾಲೋಚಿಸಿ ಸುಪ್ರೀಂ ಕೋರ್ಟ್‌ಗೆ ನಾಳೆಯೇ ಮೇಲ್ಮನವಿ ಸಲ್ಲಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಹಣೆ ತಟ್ಟಿಕೊಂಡು ಹೋದ ಸಿಎಂ ಡಿಕೆ ಶಿವಕುಮಾರ್

ಇನ್ನು ಈ ಕುರಿತು ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಿಎಂ ಡಿಕೆ ಶಿವಕುಮಾರ್​, ಯಾವುದೇ ಹೇಳಿಕೆ ನೀಡದೆ ಕೇವಲ ಕೈಯಿಂದ ಹಣೆ ತಟ್ಟಿಕೊಂಡು ಅಲ್ಲಿಂದ ತೆರಳಿದ್ದಾರೆ.

CWRS Recommended Karnataka Govt To Release 6000 Cusecs Of Cauvery Water For Next 15 Days To TN

ವರದಿ: ನಟರಾಜ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us