
ಬೆಂಗಳೂರು, ಜೂನ್ 26: ಸಿಎಂ ಡಿಕೆ ಶಿವಕುಮಾರ್ (DK Shivakumar) ತಮ್ಮ ಸರ್ಕಾರ ಆಡಳಿತ ಯಂತ್ರಕ್ಕೆ ಮತ್ತಷ್ಟು ವೇಗ ನೀಡುತ್ತಿದ್ದಾರೆ. ಕಳೆದ ವಾರ ಜಿಲ್ಲಾ ಡಿಸಿ, ಎಸ್ಪಿಗಳ ಜೊತೆ ಸಭೆ ಮಾಡಿದ್ದ ಡಿಕೆ ಶಿವಕುಮಾರ್ ಇಂದು ಇಲಾಖಾವಾರು ಮೀಟಿಂಗ್ ಮಾಡಿದರು. ಅದರಲ್ಲೂ ಸರ್ಕಾರದ ಖಜಾನೆ ತುಂಬುವ ಇಲಾಖೆಗಳು ಅಂದರೆ ಆದಾಯ ತೆರಿಗೆ ಇಲಾಖೆ ಮತ್ತು ಅಬಕಾರಿ. ಹೀಗಾಗಿ ಇವಗಳನ್ನ ಅರ್ಥ ಮಾಡಿಕೊಳ್ಳೋಕೆ ಸಿಎಂ ಹೆಜ್ಜೆ ಇಟ್ಟಿದ್ದರು. ಅದಕ್ಕಾಗಿ ವಿಧಾನಸೌಧದಲ್ಲಿ ಎರಡೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮಾಡಿದ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.
ತೆರಿಗೆ ರಿಟರ್ನ್ಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸದವರನ್ನು ಗುರುತಿಸಿ, ಅವರಿಂದ ಸಮಯಕ್ಕೆ ಸರಿಯಾಗಿ ರಿಟರ್ನ್ಸ್ ಸಲ್ಲಿಕೆ ಮಾಡಿಸಲು ಜಂಟಿ ಆಯುಕ್ತರುಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಮ್ಮ ಉದ್ದೇಶ ಯಾರಿಗೂ ಅನಗತ್ಯ ತೊಂದರೆ ನೀಡುವುದಲ್ಲ. ಪ್ರಾಮಾಣಿಕ ತೆರಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಮಸ್ಯೆಗಳನ್ನು ಆನ್ಲೈನ್ ಮೂಲಕವೇ ತ್ವರಿತವಾಗಿ ಬಗೆಹರಿಸಿ, ಘನತೆಯಿಂದ ನಡೆಸಿಕೊಳ್ಳಬೇಕು ಎಂದಿದ್ದಾರೆ.
ವಂಚಕರಿಗೆ ಕಠಿಣ ಶಿಕ್ಷೆ, ಪ್ರಾಮಾಣಿಕರಿಗೆ ಪೂರ್ಣ ರಕ್ಷೆ
ವಿಧಾನಸೌಧದಲ್ಲಿ ಇಂದು ನಡೆದ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು, ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಯಿತು.
– ದಾಖಲೆ ಇಲ್ಲದ ವಾಹನಗಳಿಗೆ ಗಡಿಯಲ್ಲೇ ತಡೆ: ಯಾವುದೇ ಸರಕು ಸಾಗಣೆ ವಾಹನಗಳು ಸೂಕ್ತ ಲೆಕ್ಕಪತ್ರ ಹಾಗೂ ಅಗತ್ಯ ದಾಖಲೆಗಳಿಲ್ಲದೆ… https://t.co/YP78Aa3kJj
— DK Shivakumar (@DKShivakumar) June 26, 2026
ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಿದರೆ ಗುರಿ ತಲುಪಲು ಸಾಧ್ಯ, ಆದರೆ ತೆರಿಗೆ ವಂಚನೆಗೆ ಮಾತ್ರ ಯಾವುದೇ ಅವಕಾಶ ಇರಬಾರದು. ತೆರಿಗೆ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ನಾನು ನೀಡಿರುವ ಪ್ರತಿಯೊಂದು ಸೂಚನೆಯೂ ಜಾರಿಯಾಗಿರಬೇಕು. ಮುಂದಿನ ಸಭೆಯಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತೇನೆ ಎಂದು ಹೇಳಿದ್ದಾರೆ.
ಯಾವುದೇ ಸರಕು ಸಾಗಣೆ ವಾಹನಗಳು ಸೂಕ್ತ ಲೆಕ್ಕಪತ್ರ ಹಾಗೂ ಅಗತ್ಯ ದಾಖಲೆಗಳಿಲ್ಲದೆ ಚೆಕ್ಪೋಸ್ಟ್ ಅಥವಾ ರಾಜ್ಯದ ಗಡಿಯನ್ನು ದಾಟುವಂತಿಲ್ಲ. ತೆರಿಗೆ ವಂಚನೆ ಹಾಗೂ ಬೋಗಸ್ ಕಂಪನಿಗಳ ಸೃಷ್ಟಿಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇನ್ನು ಪಕ್ಕದ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಜಾರಿ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯ ಸಾಧಿಸಿ, ಮಾಹಿತಿ ಹಂಚಿಕೆಯ ಮೂಲಕ ತೆರಿಗೆ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವಂತೆ ಸಿಎಂ ಡಿಕೆ ಶಿವಕುಮಾರ್ ಸೂಚಿಸಿದರು.
ಇದನ್ನೂ ಓದಿ: 25 ರಿಂದ 30 ಹೊಸ ಜನಪ್ರಿಯ ಯೋಜನೆಗಳ ಘೋಷಣೆಗೆ ಡಿಕೆಶಿ ಸರ್ಕಾರ ಚಿಂತನೆ, ಎಚ್ಚರಿಕೆ ಕೊಟ್ಟ ಆರ್ಥಿಕ ತಜ್ಞರು!
ಇನ್ನು ಇದಾದ್ಮೇಲೆ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಕೂಡ ನಡೆಯಿತು. ಈ ವೇಳೆ ಅಧಿಕಾರಿಗಳಿಗೆ ಸಿಎಂ ಡಿಕೆ ಶವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ. ನೀವುಗಳು ಘನತೆ ಉಳಿಸಿಕೊಂಡರೆ ಸರ್ಕಾರದ ಘನತೆ ಹೆಚ್ಚುತ್ತದೆ. ನೀವು ಸರ್ಕಾರದ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ನಾವು ನೋಡುತ್ತಾ ಕೂರುವುದಿಲ್ಲ. ಅಬಕಾರಿ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡುವುದಕ್ಕೆ ಆಗುವುದಿಲ್ಲ ಎಂದುಕೊಳ್ಳಬೇಡಿ. ಅಗತ್ಯಬಿದ್ದರೆ ವರ್ಗಾವಣೆ ಮಾಡಲು ಅಗತ್ಯವಾದ ಕಾನೂನು ಬದಲಾವಣೆಯನ್ನೂ ತರಲು ಅಕಾಶಗಳಿವೆ ಎಂದಿದ್ದಾರೆ. ಆ ಮೂಲಕ ಬಹಳ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯಾರನ್ನೂ, ಯಾವ ಪ್ರಯತ್ನವನ್ನೂ ನಾನು ಸಹಿಸುವುದಿಲ್ಲ. ಇಲಾಖೆಯಲ್ಲಿ ಹೊಸದಾಗಿ ಎಐಬಿ ಪದ್ಧತಿ ಜಾರಿಯಾದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಆಗಿದೆ. ಹೊಸದಾಗಿ 574 ಸನ್ನದುಗಳನ್ನು ಇ-ಹರಾಜು ಹಾಕಲು ನಿರ್ಧರಿಸಲಾಗಿದೆ. ಪರವಾನಗಿ ನವೀಕರಣ ಮೊತ್ತವನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಿ ಎಂದರು. ಅಕ್ಕ ಪಕ್ಕದ ರಾಜ್ಯಗಳಲ್ಲಿ ಇಲಾಖೆ ಹೇಗೆ ನಡೆಯುತ್ತಿದೆ ಎನ್ನುವ ವರದಿ ನೋಡಿದ್ದೇನೆ. ಇಲಾಖೆಗೆ ಕೊಟ್ಟಿರುವ ಗುರಿ ತಲುಪಲು ಶ್ರಮಿಸಬೇಕು. ನೀವುಗಳು ಘನತೆ ಉಳಿಸಿಕೊಂಡರೆ ಇಲಾಖೆಯ ಘನತೆ ಉಳಿಯುತ್ತದೆ. ಇಲಾಖೆ ಘನತೆ ಉಳಿದರೆ ಸರ್ಕಾರದ ಘನತೆ ಹೆಚ್ಚುತ್ತದೆ. ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ, ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದಿದ್ದಾರೆ.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಶಾಸಕರ ಲಾಬಿ: ಹೈಕಮಾಂಡ್ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಡಿಕೆ ಶಿವಕುಮಾರ್, ಎಲ್ಲಾ ಇಲಾಖೆಯ ಆಳ ಮತ್ತು ಅಗಲ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಆರ್ಥಿಕ ಇಲಾಖೆ, ಅಬಕಾರಿ ಮತ್ತು ಆದಾಯ ತೆರಿಗೆ ಇಲಾಖೆ ಸರ್ಕಾರದ ಬೊಕ್ಕಸವನ್ನ ತುಂಬುವ ಅಕ್ಷಯ ಪಾತ್ರೆ. ಹೀಗಾಗಿ ಸಭೆ ಕರೆದು ಅಧಿಕಾರಿಗಳಿಗೆ ತಮ್ಮ ಆಡಳಿತ ವೈಖರಿಯನ್ನ ತಿಳಿಸುತ್ತಿದ್ದಾರೆ. ಅಲ್ಲದೆ ನೀವು ಹೀಗೇ ಕೆಲಸ ಮಾಡಬೇಕು ಅಂತ ಸೂಚನೆ ನೀಡಿದ್ದಾರೆ.
ವರದಿ: ಈರಣ್ಣಾ ಬಸವಾ ಟಿವಿ9 ಬೆಂಗಳೂರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.