25 ರಿಂದ 30 ಹೊಸ ಜನಪ್ರಿಯ ಯೋಜನೆಗಳ ಘೋಷಣೆಗೆ ಡಿಕೆಶಿ ಸರ್ಕಾರ ಚಿಂತನೆ, ಎಚ್ಚರಿಕೆ ಕೊಟ್ಟ ಆರ್ಥಿಕ ತಜ್ಞರು!
ಕರ್ನಾಟದಲ್ಲಿಈಗಾಗಲೇ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ಸುಮಾರು 52,000 ಕೋಟಿ ರೂಪಾಯಿ ನೀಡುತ್ತಿದೆ. ಈ ಮಧ್ಯೆ ನೂತನ ಸಿಎಂ ಡಿಕೆ ಶಿಕುಮಾರ್ ಸರ್ಕಾರ ಮತ್ತಷ್ಟು 25 ರಿಂದ 30 ಹೊಸ ಯೋಜನೆಗಳ ಚಿಂತನೆ ನಡೆಸುತಿದೆ. ಚುನಾವಣಾ ವರ್ಷ ಸಮೀಪಿಸುತ್ತಿರುವ ಸಂದರ್ಭದಲ್ಲಿ ಹೊಸ ಜನಪ್ರಿಯ ಯೋಜನೆಗಳ ಘೋಷಣೆ ರಾಜ್ಯದ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆಯೇ ಅಥವಾ ಆರ್ಥಿಕ ಶಿಸ್ತಿಗೆ ಸವಾಲಾಗುತ್ತದೆಯೇ ಎಂಬ ಪ್ರಶ್ನೆ ಶುರುವಾಗಿದೆ.

ಬೆಂಗಳೂರು, (ಜೂನ್ 22): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Karnataka Congress Governmnet) ಈಗಾಗಲೇ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಹಾಗೂ ಗೃಹಜ್ಯೋತಿ ಸೇರಿದಂತೆ ಐದು ಪ್ರಮುಖ ಗ್ಯಾರಂಟಿಗಳಿಗೆ ವರ್ಷಕ್ಕೆ 52,000 ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿದೆ. ಇದರ ಮೇಲೆ ಈಗ ಮತ್ತಷ್ಟು ಹೊಸ ಯೋಜನೆಗಳನ್ನ ಕೈಗತ್ತಿಕೊಳ್ಳಲು ಮುಂದಾಗಿದ್ದು, 10,000 ರಿಂದ 20,000 ಕೋಟಿ ರೂಪಾಯಿ ವೆಚ್ಚದ 25ರಿಂದ 30 ಹೊಸ ಯೋಜನೆಗಳನ್ನು (New schemes) ಜಾರಿಗೊಳಿಸಲು ಮುಂದಾಗಿದೆ. ಇದರಿಂದ ರಾಜ್ಯದ ಆದಾಯ-ವೆಚ್ಚ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ಅಲ್ಲದೇ ಈ ಬಗ್ಗೆ ಆರ್ಥಿಕ ತಜ್ಞರು ಸಹ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಆರ್ಥಿಕ ದಿವಾಳಿತನದ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.
ಮುಖ್ಯಾಂಶಗಳು
- 25 ರಿಂದ 30 ಹೊಸ ಜನಪ್ರಿಯ ಯೋಜನೆಗಳ ಘೋಷಣೆಗೆ ಡಿಕೆಶಿ ಸರ್ಕಾರ ಚಿಂತನೆ
- ಹೊಸ ಯೋಜನೆಗಳಿಗೆ ಆರ್ಥಿಕತೆಯೇ ದೊಡ್ಡ ಸವಾಲು
- ಹೊಸ ಹೊಸ ಯೋಜನೆಗಳ ಘೋಷಣೆಗೆ ಎಚ್ಚರಿಕೆ ಕೊಟ್ಟ ಆರ್ಥಿಕ ತಜ್ಞರು
ಆರ್ಥಿಕ ತಜ್ಞರು ಹೇಳುವುದೇನು?
ಆರ್ಥಿಕ ತಜ್ಞರ ಪ್ರಕಾರ, ಎರಡು ವರ್ಷಗಳಲ್ಲಿ 25 ರಿಂದ 30 ಹೊಸ ಯೋಜನೆಗಳನ್ನು ಜಾರಿಗೊಳಿಸುವುದು ಆಡಳಿತಾತ್ಮಕವಾಗಿ ದೊಡ್ಡ ಸವಾಲಿನ ಕೆಲಸ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದಿನ ಸಿಎಂ ಸಿದ್ದರಾಮಯ್ಯ 2026-27ನೇ ಸಾಲಿನ 4 ಲಕ್ಷದ 48ಸಾವಿರ ಕೋಟಿಯ ಬಜೆಟ್ ಮಂಡಿಸಿದ್ದರು. ಇದಕ್ಕೆ ಒಂದು ಲಕ್ಷದ 32 ಸಾವಿರ ಕೋಟಿಯನ್ನ ಸಾಲವನ್ನ ಅಂದಾಜಿಸಲಾಗಿತ್ತು. ಇನ್ನು ಬಜೆಟ್ ನಲ್ಲಿ ಶೇ.20ರಷ್ಟು ಸಂಬಳ 10ರಷ್ಟು ಪೆನ್ಷನ್ಗೆ ಖರ್ಚಾಗುತ್ತೆ. ಇದರ ಜೊತೆಗೆ ಈಗಾಗಲೇ ಇರುವ ಸಾಲಕ್ಕೆ ಬಡ್ಡಿ ಕಟ್ಟಬೇಕು. 57.53% ವೇತನ ಪೆನ್ಷನ್ಗೆ ಸಾಲಕ್ಕೆ ವೆಚ್ಚವಾದ್ರೆ ಉಳಿದ ಯೋಜನೆಗಳಿಗೆ ಅನುದಾನ ಕಡಿತ ಸಾಧ್ಯವಿಲ್.ಲ ಹೀಗಾಗಿ ಯೋಜನೆ ಅನಷ್ಠಾನ ಮಾಡಿ ಸಮರ್ಪಕ ಹಣ ಒದಗಿಸದೆ ಇದ್ರೆ ಇದರಿಂದ ದುಷ್ಪರಿಣಾಮ ಹೆಚ್ಚಾಗುತ್ತೆ ಅಂತಿದ್ದಾರೆ ತಜ್ಞರು.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಕೇಂದ್ರದ ಮಾದರಿಯಂತೆ ರಾಜ್ಯದಲ್ಲೂ ಆರೋಗ್ಯ ಭಾಗ್ಯ
ಭವಿಷ್ಯದ ಹಣಕಾಸಿನ ಸ್ಥಿರತೆಗೆ ಸವಾಲು
ಇನ್ನು ಯೋಜನೆಗಳನ್ನು ಘೋಷಿಸಿ ಅನುಷ್ಠಾನಗೊಳಿಸದಿದ್ದರೆ ಸರ್ಕಾರದ ವಿಶ್ವಾಸಾರ್ಹತೆಗೂ ಧಕ್ಕೆಯಾಗಬಹುದು .ಚುನಾವಣಾ ಭರವಸೆಗಳು ಕೇವಲ ಘೋಷಣೆಯಾಗಿಯೇ ಉಳಿದರೆ ಸಾರ್ವಜನಿಕರಲ್ಲಿ ನಿರಾಸೆ ಉಂಟಾಗುವ ಸಾಧ್ಯತೆ ಇದೆ. ಹಾಗಿದ್ರೆ ಹೊಸ ಯೋಜನೆಗಳಿಗೆ ಹಣ ಎಲ್ಲಿಂದ ಬರಲಿದೆ ಎಂಬ ಪ್ರಶ್ನೆಯೂ ಎದುರಾಗಿದ್ದು, ಸರ್ಕಾರ ತೆರಿಗೆ ಸಂಗ್ರಹ ಹೆಚ್ಚಿಸುವುದು, ಸಾಲ ಪಡೆಯುವುದು, ಅನುದಾನ ಮರುಹಂಚಿಕೆ ಅಥವಾ ಕೇಂದ್ರ ನೆರವಿನ ಮೇಲೆ ಅವಲಂಬಿಸುವ ಸಾಧ್ಯತೆ ಇದೆ. ಆದರೆ ನಿರಂತರ ಸಾಲದ ಅವಲಂಬನೆ ಭವಿಷ್ಯದ ಹಣಕಾಸಿನ ಸ್ಥಿರತೆಗೆ ಸವಾಲಾಗಬಹುದು ಎನ್ನುವುದು ತಜ್ಞರ ಅಭಿಪ್ರಾಯ.
ಬೆಂಗಳೂರು ಹೊರಗಿನ ನಗರಗಳಿಗೆ ಹೊಸ ಮಾದರಿಯ ಅಭಿವೃದ್ಧಿ ಯೋಜನೆಗಳ ಚಿಂತನೆ ಸ್ವಾಗತಾರ್ಹವಾದರೂ, ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯ, ಭೂ ಲಭ್ಯತೆ ಮತ್ತು ಹಣಕಾಸಿನ ನಿರ್ವಹಣೆ ಪ್ರಮುಖ ಅಂಶಗಳಾಗಿವೆ. ಸಮರ್ಪಕ ಯೋಜನೆ ಇಲ್ಲದಿದ್ದರೆ ನಿರೀಕ್ಷಿತ ಫಲಿತಾಂಶ ದೊರೆಯದ ಅಪಾಯವಿದೆ. ಗೃಹಲಕ್ಷ್ಮಿ ಸೇರಿದಂತೆ ಕೆಲವು ಯೋಜನೆಗಳಲ್ಲಿ ಅರ್ಹತೆ, ಫಲಾನುಭವಿಗಳ ಆಯ್ಕೆ ಹಾಗೂ ಪಾವತಿ ಸಂಬಂಧಿತ ದೂರುಗಳು ಕೇಳಿಬಂದಿವೆ. ಇದೇ ಪರಿಸ್ಥಿತಿಯಲ್ಲಿ ಮತ್ತಷ್ಟು 30 ಯೋಜನೆಗಳನ್ನು ಸೇರಿಸಿದರೆ ಆರ್ಥಿಕ ಸೋರಿಕೆ, ನಕಲಿ ಫಲಾನುಭವಿಗಳು ಮತ್ತು ಭ್ರಷ್ಟಾಚಾರದ ಅಪಾಯ ಹೆಚ್ಚುವ ಸಾಧ್ಯತೆ ಇದೆ. ಇದಕ್ಕಾಗಿ ಡಿಜಿಟಲ್ ಆಡಿಟ್, ಸಾಮಾಜಿಕ ಲೆಕ್ಕಪರಿಶೋಧನೆ ಮತ್ತು ಪಾರದರ್ಶಕ ಡೇಟಾಬೇಸ್ ಅಗತ್ಯ ಇದೆ .
ಆರ್ಥಿಕ ದಿವಾಳಿತನದ ಎಚ್ಚರಿಕೆ
ಮಧ್ಯಂತರ ಬಜೆಟ್ ಅವಶ್ಯಕತೆ ಏನು ಇಲ್ಲ. ಆದ್ರೆ ಗ್ಯಾರಂಟಿ ಯೋಜನೆಗಳಲ್ಲಿ ಈಗ ಬಳಕೆಯಾಗುತ್ತಿರುವ 52 ಸಾವಿರ ಕೋಟಿಯಲ್ಲಿ ಕನಿಷ್ಠ 10 ರಿಂದ 15 ಸಾವಿರ ಕೋಟಿ ಉಳಿತಾಯ ಮಾಡಿದ್ರೆ ಮಾತ್ರ ಈ ಹೊಸ ಯೋಜನೆ ಜಾರಿ ಸಾಧ್ಯತೆ ಇದೆ. ಇಲ್ಲವದ್ರೆ ತುಂಬ ಕಷ್ಟ. ಅತಿ ಹೆಚ್ಚು ಹಣ ಬಳಕೆಯಾಗುತ್ತಿರುವ ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗಳ ಪರಿಷ್ಕರಣೆಯಿಂದ ಅನಗತ್ಯ ಸೋರಿಕೆಯ ಹಣ ಕಡಿಮೆ ಮಾಡಿದ್ರೆ ಈ ಮೂಲಕಭೂತ ಯೋಜನೆಗಳಿಗೆ ಬಳಕೆ ಮಾಡಬಹುದು ಎನ್ನುವುದು ತಜ್ಞರ ಅಭಿಪ್ರಾಯ.
ಗ್ಯಾರಂಟಿ ಯೋಜನೆಯ 52 ಸಾವಿರ ಕೋಟಿ ಜೊತೆ ಹೊಸ ಯೋಜನೆಗೆ 20 ಸಾವಿರ ಕೋಟಿ ಖರ್ಚು ಮಾಡಿದ್ರೆ ಇದು ಸಾಧ್ಯವೇ ಇಲ್ಲ. ಆರ್ಥಿಕ ಶಿಸ್ತು ಕಡಿಮೆಯಾಗಿ ಬಿಹಾರ್ ಇತರ ರಾಜ್ಯಗಳಂತೆ ಆರ್ಥಿಕ ದಿವಾಳಿತನಕ್ಕೆ ಸಿಲುಕಬಹುದು ಎಂದು ಎಚ್ಚರಿಸಿದ್ದಾರೆ.
ಒಟ್ನಲ್ಲಿ ಜನರಿಗೆ ನೇರ ನೆರವು ನೀಡುವ ಯೋಜನೆಗಳು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಜನಪ್ರಿಯವಾಗುತ್ತಿವೆ. ಮತ್ತೊಂದೆಡೆ ಅಭಿವೃದ್ಧಿ ಕಾಮಗಾರಿಗಳು, ಮೂಲಸೌಕರ್ಯ ಹೂಡಿಕೆ ಮತ್ತು ಹಣಕಾಸಿನ ಶಿಸ್ತು ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹೊಸ 30 ಯೋಜನೆಗಳು ಕರ್ನಾಟಕದ ಅಭಿವೃದ್ಧಿಗೆ ಹೊಸ ದಿಕ್ಕು ನೀಡುತ್ತವೆಯೋ ಅಥವಾ ಆರ್ಥಿಕ ಒತ್ತಡ ಹೆಚ್ಚಿಸುತ್ತವೆಯೋ ಎಂಬುದು ಕಾದು ನೋಡಬೇಕಿದೆ.




