
ಬೆಂಗಳೂರು, ಜೂನ್ 01: ನಗರದಲ್ಲಿ ದೀಪಕ್ ಕೇಬಲ್ ಇಂಡಿಯಾ ಲಿಮಿಡೆಟ್ನಿಂದ ವಿವಿಧ ಬ್ಯಾಂಕ್ಗಳಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ದಾಳಿ ವೇಳೆ ಕಂಪನಿಗೆ ಸಂಬಂಧಿಸಿದ 1.27 ಕೋಟಿ ರೂ ನಗದು ಮತ್ತು ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 18 ಕೋಟಿ ರೂ ಹಣವನ್ನೂ ಫ್ರೀಜ್ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಮಾಹಿತಿ ನೀಡಿದೆ.
ದೀಪಕ್ ಕೇಬಲ್ಸ್ ಇಂಡಿಯಾ ಲಿಮಿಟೆಡ್ ಕಂಪನಿ ಎಸ್ಬಿಐ ಸೇರಿದಂತೆ ವಿವಿಧ ಬ್ಯಾಂಕ್ಗಳಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಸಾಲ ಪಡೆದುಕೊಂಡಿತ್ತು. ಆದರೆ, ಆ ಸಾಲದ ಹಣವನ್ನು ಉದ್ದೇಶಿತ ಉದ್ದೇಶಕ್ಕೆ ಬಳಸದೆ, ಬೇರೆ ಕಡೆಗೆ ವರ್ಗಾವಣೆ ಮಾಡುವ ಮೂಲಕ ಒಟ್ಟು 899 ಕೋಟಿ ರೂ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ವಂಚನೆಗೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಎಫ್ಐಆರ್ ದಾಖಲಿಸಿತ್ತು. ಸಿಬಿಐ ದಾಖಲಿಸಿದ್ದ ಇದೇ ಪ್ರಕರಣದ ಆಧಾರದ ಮೇಲೆ ಇದೀಗ ಇಡಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: ‘ನಾನು ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ’: ಇಡಿ ದಾಳಿ ನಂತರ ನಲಪಾಡ್ ಸ್ಫೋಟಕ ಹೇಳಿಕೆ
ಬೆಂಗಳೂರಿನ ಇ.ಡಿ ಅಧಿಕಾರಿಗಳ ನೇತೃತ್ವದ ತಂಡವು ಇತ್ತೀಚೆಗೆ ಅಂದರೆ ಮೇ 21 ಹಾಗೂ ಮೇ 29ರಂದು ದೀಪಕ್ ಕೇಬಲ್ ಇಂಡಿಯಾ ಲಿಮಿಟೆಡ್ನ ನಿರ್ದೇಶಕ ಕೆ. ವೆಂಕಟೇಶ್ವರ್ ರಾವ್ ಮತ್ತು ಅಧುನಿಕ್ ಕಾರ್ಪೊರೇಷನ್ ಲಿಮಿಟೆಡ್ನ ನಿರ್ದೇಶಕ ಮಹೇಶ್ ಅಗರ್ವಾಲ್ ಅವರಿಗೆ ಸೇರಿದ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಡಿ ದಾಳಿ: ನೆರೆ ರಾಜ್ಯದ ಚುನಾವಣೆಗೆ ದೊಡ್ಡ ಮೊತ್ತದ ಹಣ ಹೋಗಿರೋ ಶಂಕೆ
ಇನ್ನು ದಾಳಿ ಸಂದರ್ಭದಲ್ಲಿ ವಂಚನೆಗೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸದ್ಯ ಜಪ್ತಿ ಮಾಡಲಾದ ನಗದು, ಚಿನ್ನಾಭರಣ ಹಾಗೂ ಫ್ರೀಜ್ ಮಾಡಲಾದ ಬ್ಯಾಂಕ್ ಖಾತೆಗಳ ವಿವರಗಳೊಂದಿಗೆ ಇಡಿ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.