ಗಣೇಶ ಚತುರ್ಥಿ ಹಬ್ಬದ ವಿಶೇಷ: ಯಶವಂತಪುರ ಹಾಗೂ ಬೀದರ್ ನಡುವೆ ವಿಶೇಷ ರೈಲು ಸಂಚಾರ

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಬೀದರ್ ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ. 18 ಬೋಗಿಗಳನ್ನು ಹೊಂದಿರುವ ಈ ರೈಲು ಯಲಹಂಕ, ಧರ್ಮಾವರಂ, ರಾಯಚೂರು, ಕಲಬುರಗಿ ಮಾರ್ಗವಾಗಿ ಸಂಚರಿಸಲಿದೆ. ಅದೇ ಸಮಯದಲ್ಲಿ ತಿಪಟೂರು ಕಾಮಗಾರಿ ಕಾರಣದಿಂದ ಕೆಲವು ರೈಲು ಸಂಚಾರ ವಿಳಂಬವಾಗಲಿದೆ.

ಗಣೇಶ ಚತುರ್ಥಿ ಹಬ್ಬದ ವಿಶೇಷ: ಯಶವಂತಪುರ ಹಾಗೂ ಬೀದರ್ ನಡುವೆ ವಿಶೇಷ ರೈಲು ಸಂಚಾರ
ಸಾಂದರ್ಭಿಕ ಚಿತ್ರ
Image Credit source: gettyimages.com

Updated on: Sep 11, 2026 | 12:20 PM

ಮುಖ್ಯಾಂಶಗಳು

  • ಗಣೇಶ ಚತುರ್ಥಿಗೆ ಯಶವಂತಪುರ ಹಾಗೂ ಬೀದರ್ ನಡುವೆ ವಿಶೇಷ ರೈಲು ಸೇವೆ ಪ್ರಾರಂಭ.
  • ಹಬ್ಬದ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು 18 ಬೋಗಿಗಳ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು.
  • ಅಭಿವೃದ್ಧಿ ಕಾಮಗಾರಿ ಹಿನ್ನೆಲೆ ಸೆಪ್ಟೆಂಬರ್ 10-12ರವರೆಗೆ ಹಲವು ರೈಲುಗಳ ಸಂಚಾರ ವಿಳಂಬ.

ಬೆಂಗಳೂರು, ಸೆಪ್ಟೆಂಬರ್ 11: ಮುಂಬರುವ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ರಶ್ ನಿಯಂತ್ರಿಸಲು ಹಾಗೂ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲು ನೈಋತ್ಯ ರೈಲ್ವೆಯು (SWR) ಯಶವಂತಪುರ ಮತ್ತು ಬೀದರ್ ನಡುವೆ ವಿಶೇಷ ರೈಲು ಸೇವೆಯನ್ನು ಕಾರ್ಯಾಚರಣೆಗೊಳಿಸಲು ನಿರ್ಧರಿಸಿದೆ.

ವೇಳಾಪಟ್ಟಿ ಇಲ್ಲಿದೆ

ರೈಲ್ವೆ ಇಲಾಖೆಯ ಮಾಹಿತಿಯಂತೆ, ರೈಲು ಸಂಖ್ಯೆ 06589 ‘ಯಶವಂತಪುರ–ಬೀದರ್ ಎಕ್ಸ್‌ಪ್ರೆಸ್ ಸ್ಪೆಷಲ್’ ರೈಲು ಸೆಪ್ಟೆಂಬರ್ 11ರ ಶುಕ್ರವಾರ ರಾತ್ರಿ 11:15ಕ್ಕೆ ಯಶವಂತಪುರದಿಂದ ಹೊರಟು, ಸೆಪ್ಟೆಂಬರ್ 12ರ ಶನಿವಾರ ಮಧ್ಯಾಹ್ನ 2:15ಕ್ಕೆ ಬೀದರ್ ತಲುಪಲಿದೆ. ಮರುಪ್ರಯಾಣದ ಮಾರ್ಗದಲ್ಲಿ ರೈಲು ಸಂಖ್ಯೆ 06590 ‘ಬೀದರ್–ಯಶವಂತಪುರ ಎಕ್ಸ್‌ಪ್ರೆಸ್ ಸ್ಪೆಷಲ್’ ಸೆಪ್ಟೆಂಬರ್ 12ರ ಸಂಜೆ 4:00 ಗಂಟೆಗೆ ಬೀದರ್‌ನಿಂದ ನಿರ್ಗಮಿಸಿ, ಸೆಪ್ಟೆಂಬರ್ 13ರ ಭಾನುವಾರ ಬೆಳಿಗ್ಗೆ 5:30ಕ್ಕೆ ಯಶವಂತಪುರ ತಲುಪಲಿದೆ.

ಈ ವಿಶೇಷ ರೈಲು ಎರಡೂ ಕಡೆಗಳಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು, ಕೃಷ್ಣ, ಯಾದಗಿರಿ, ಶಹಾಬಾದ್, ಕಲಬುರಗಿ ಮತ್ತು ಹುಮ್ನಾಬಾದ್ ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ರೈಲು ಒಟ್ಟು 18 ಬೋಗಿಗಳನ್ನು ಒಳಗೊಂಡಿರಲಿದ್ದು, ಇದರಲ್ಲಿ 9 ಸ್ಲೀಪರ್ ಕ್ಲಾಸ್, 7 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಸೆಕೆಂಡ್ ಕ್ಲಾಸ್ ಲಗೇಜ್ ಮತ್ತು ದಿವ್ಯಾಂಗಜನ ಬೋಗಿಗಳು ಇರಲಿವೆ.

ಕೆಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ

ಇದೇ ವೇಳೆ ತಿಪಟೂರು ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಸೆಪ್ಟೆಂಬರ್ 10ರಿಂದ 12ರವರೆಗೆ ಕೆಎಸ್‌ಆರ್ ಬೆಂಗಳೂರು–ಎಸ್‍ಎಸ್‌ಎಸ್ ಹುಬ್ಬಳ್ಳಿ (20688), ಯಶವಂತಪುರ–ಸಿಂಧನೂರು (16545), ಕೆಎಸ್‌ಆರ್ ಬೆಂಗಳೂರು–ಬೆಳಗಾವಿ (20653), ಯಶವಂತಪುರ–ವಿಜಯಪುರ (16547) ಸೇರಿದಂತೆ ಪ್ರಮುಖ ರೈಲುಗಳ ಸಂಚಾರದ ಸಮಯದಲ್ಲಿ 15 ರಿಂದ 90 ನಿಮಿಷಗಳ ಕಾಲ ಮಾರ್ಗಮಧ್ಯೆ ವಿಳಂಬ/ನಿಯಂತ್ರಣ ‘ ಇರಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us