ವನ್ಯಜೀವಿ ಪ್ರಿಯರಿಗೆ ಗುಡ್​​ನ್ಯೂಸ್​​: ಬಂಡೀಪುರ, ನಾಗರಹೊಳೆ ಸಫಾರಿ ಪೂರ್ಣ ಪ್ರಮಾಣದಲ್ಲಿ ಪುನರಾರಂಭ

Jungle Safari: ವನ್ಯಜೀವಿ ಪ್ರಿಯರಿಗೆ ಬಿಗ್ ನ್ಯೂಸ್ ಸಿಕ್ಕಿದ್ದು, ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ತಾಂತ್ರಿಕ ಸಮಿತಿಯ ವರದಿ ಆಧರಿಸಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಪುನರಾರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಾರಣದಿಂದಾಗಿ ಜಂಗಲ್​​ ಸಫಾರಿಯನ್ನು 2025ರ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ 2026ರ ಫೆಬ್ರವರಿ 19ರಿಂದ ಶೇ.50ರ ಸಾಮರ್ಥ್ಯದಲ್ಲಿ ಮತ್ತು ಕಡಿಮೆ ಅವಧಿಯೊಂದಿಗೆ ಸಫಾರಿ ಪುನರಾರಂಭಕ್ಕೆ ಸರ್ಕಾರ ಅವಕಾಶ ನೀಡಿತ್ತು.

ವನ್ಯಜೀವಿ ಪ್ರಿಯರಿಗೆ ಗುಡ್​​ನ್ಯೂಸ್​​: ಬಂಡೀಪುರ, ನಾಗರಹೊಳೆ ಸಫಾರಿ ಪೂರ್ಣ ಪ್ರಮಾಣದಲ್ಲಿ ಪುನರಾರಂಭ
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Jun 26, 2026 | 2:21 PM

ಮುಖ್ಯಾಂಶಗಳು

  • ಬಂಡೀಪುರ, ನಾಗರಹೊಳೆಯಲ್ಲಿ ಪೂರ್ಣ ಪ್ರಮಾಣದ ಸಫಾರಿ ಪುನರಾರಂಭ
  • ತಜ್ಞರು ಮತ್ತು ಅಧಿಕಾರಿಗಳ ತಾಂತ್ರಿಕ ಸಮಿತಿ ವರದಿ ಅನ್ವಯ ಮಹತ್ವದ ಕ್ರಮ
  • ಸಮಿತಿ ಶಿಫಾರಸಿನ ಪ್ರಕಾರ ನಿಯಂತ್ರಿತ ರೀತಿಯಲ್ಲಿ ಸಫಾರಿ ನಡೆಸಲು ಸೂಚನೆ

ಬೆಂಗಳೂರು, ಜೂನ್​​ 26: ವನ್ಯಜೀವಿ ಪ್ರಿಯರಿಗೆ ಗುಡ್​​ನ್ಯೂಸ್​​ ಸಿಕ್ಕಿದ್ದು, ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಪೂರ್ಣ ಪ್ರಮಾಣದ ಸಫಾರಿ ಪುನರಾರಂಭಕ್ಕೆ ಸರ್ಕಾರ ನಿರ್ಧರಿಸಿದೆ. ತಜ್ಞರು, ಅಧಿಕಾರಿಗಳ ತಾಂತ್ರಿಕ ಸಮಿತಿ ವರದಿ ಅನ್ವಯ ಕ್ರಮ ಕೈಗೊಳ್ಳಲಾಗಿದ್ದು, ವೈಜ್ಞಾನಿಕ ಮೌಲ್ಯಮಾಪನ ಮತ್ತು ಸಾಗಣೆ ಸಾಮರ್ಥ್ಯ ಆಧರಿಸಿ ಹಸಿರು ನಿಶಾನೆ ನೀಡಲಾಗಿದೆ. ಈ ನಿರ್ಧಾರಿಂದ ಸ್ಥಳೀಯ ಉದ್ಯೋಗ, ಆರ್ಥಿಕತೆ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಸಮಿತಿಯ ಶಿಫಾರಸಿನ ಪ್ರಕಾರ ನಿಯಂತ್ರಿತ ರೀತಿಯಲ್ಲಿ ಜಂಗಲ್ ಸಫಾರಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.

 2025ರ ನವೆಂಬರ್​​ನಲ್ಲಿ ತಾತ್ಕಾಲಿಕ ಸ್ಥಗಿತಗೊಂಡಿದ್ದ ಸಫಾರಿ

ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಾರಣದಿಂದಾಗಿ ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು 2025ರ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ 2026ರ ಫೆಬ್ರವರಿ 19ರಿಂದ ಶೇ.50ರ ಸಾಮರ್ಥ್ಯದಲ್ಲಿ ಮತ್ತು ಕಡಿಮೆ ಅವಧಿಯೊಂದಿಗೆ ಸಫಾರಿ ಪುನರಾರಂಭಕ್ಕೆ ಸರ್ಕಾರ ಅವಕಾಶ ನೀಡಿತ್ತು. ಸಫಾರಿ ತಾತ್ಕಾಲಿಕ ಸ್ಥಗಿತವಾದ ನಂತರ ರಚನೆ ಮಾಡಲಾಗಿದ್ದ ತಾಂತ್ರಿಕ ಸಮಿತಿ ಮಧ್ಯಂತರ ವರದಿ ನೀಡಿದ್ದು, ಈ ಸಂಬಂಧ ಜನವರಿ 2ರಂದು ಸಿಎಂ ನೇತೃತ್ವದ ಸಭೆ ನಡೆಸಿ ಚರ್ಚೆ ಮಾಡಲಾಗಿತ್ತು. ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇರುವ ಕಾರಣ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ. ಪೂರ್ತಿ ವರದಿ ಬಂದ ಬಳಿಕ ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಅಂದಿನ ಅರಣ್ಯ ಸಚಿವ ಈಶ್ವರ್​​ ಖಂಡ್ರೆ ತಿಳಿಸಿದ್ದರು.

ಇದನ್ನೂ ಓದಿ: ನಾಳೆಯಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ ಪುನರಾರಂಭ; ಗುಡ್​​ನ್ಯೂಸ್​​ ಕೊಟ್ಟ ಅರಣ್ಯ ಸಚಿವರು

ಈ ಮೊದಲು ಬಳಕೆ ಮಾಡ್ತಿದ್ದ ಶೇ.50ರಷ್ಟು ವಾಹನಗಳ ಬಳಕೆಗೆ ಮಾತ್ರ ಅವಕಾಶ ನೀಡುವ ಜೊತೆಗೆ, ಬಂಡೀಪುರದಲ್ಲಿ ಸಫಾರಿ ಅವಧಿಯನ್ನು 8 ಗಂಟೆಯಿಂದ 5ಕ್ಕೆ ಅವಧಿ ಇಳಿಕೆ ಮಾಡಲಾಗಿತ್ತಾದರೆ, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿತ್ತು. ಆದರೀಗ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು ಮೊದಲಿನಂತೆ ಪೂರ್ಣ ಪ್ರಮಾಣದ ಸಫಾರಿಗೆ ಅವಕಾಶ ನೀಡಿರೋದು ವನ್ಯಜೀವಿ ಪ್ರಿಯರಿಗೆ ಹರ್ಷ ತಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us