ಮಧ್ಯರಾತ್ರಿ ಗುಂಡಿನ ಸದ್ದು: ಬೆಚ್ಚಿಬಿದ್ದ ಅಪಾರ್ಟ್ಮೆಂಟ್ ಜನರು; ನಡೆದಿದ್ದೇನು?
Anekal Air Gun Firing: ಕುಡಿದ ಅಮಲಿನಲ್ಲಿ ಸೆಕ್ಯೂರಿಟಿ ಗಾರ್ಡ್ಗಳ ಮೇಲೆ ಟೆಕ್ಕಿ ಫೈರಿಂಗ್ ಮಾಡಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬಂಡಾಪುರ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು
- ಕುಡಿದ ಅಮಲಿನಲ್ಲಿ ಸೆಕ್ಯೂರಿಟಿ ಗಾರ್ಡ್ಗಳ ಮೇಲೆ ಗುಂಡಿನ ದಾಳಿ
- ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬಂಡಾಪುರ ಗ್ರಾಮದಲ್ಲಿ ಘಟನೆ
- ಸುಮಾರು 45 ನಿಮಿಷ ಗುಂಡುಹಾರಿಸಿದ್ದ ಟೆಕ್ಕಿ
ಆನೇಕಲ್, ಆಗಸ್ಟ್ 06: ಕುಡಿದ ಅಮಲಿನಲ್ಲಿ ಓರ್ವ ಟೆಕ್ಕಿ ತನ್ನ ಪ್ಲಾಟ್ನ ಬಾಲ್ಕನಿಯಿಂದ ಸೆಕ್ಯುರಿಟಿ ಗಾರ್ಡ್ಗಳು ಹಾಗೂ ಕಾರುಗಳ ಮೇಲೆ ಏರ್ ಗನ್ನಿಂದ ಫೈರಿಂಗ್ (air gun firing) ಮಾಡಿರುವ ಘಟನೆ ಆನೇಕಲ್ ತಾಲೂಕಿನ ಬಂಡಾಪುರ ಸಮೀಪದ ಸಿಪಾನಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಕ್ನೋ ಮೂಲದ ಅನುರಾಗ್ ತಿವಾರಿ (40) ಫೈರಿಂಗ್ ಮಾಡಿದ ವ್ಯಕ್ತಿ. ಅನುರಾಗ್ ತಿವಾರಿ ಐಟಿ ಉದ್ಯೋಗಿ ಆಗಿದ್ದು, ಸದ್ಯ ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು?
ಅನುರಾಗ್ ತಿವಾರಿ ವೈಟ್ಫೀಲ್ಡ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎಂಟು ತಿಂಗಳಿನಿಂದ ಸಿಪಾನಿ ಅಪಾರ್ಟ್ಮೆಂಟ್ನ ಬ್ಲಿಸ್-1 ವಿಭಾಗದ B304 ಪ್ಲಾಟ್ನಲ್ಲಿ ವಾಸವಿದ್ದ. ಕಳೆದ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಅನುರಾಗ್, ತನ್ನ ಪ್ಲಾಟ್ ಒಳಗೆ ಫೋನ್ನಲ್ಲಿ ಮಾತನಾಡುತ್ತಾ ಜೋರಾಗಿ ಕೂಗಾಡುತ್ತಿದ್ದ.
ಇದನ್ನೂ ಓದಿ: ಬೆಳಗಾವಿ: ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ; ಮಗು ಸೇರಿ ಮೂವರು ಸಾವು
ಬಳಿಕ ಮಧ್ಯರಾತ್ರಿ ಸುಮಾರು 2:30ರ ಸುಮಾರಿಗೆ ಬಾಲ್ಕನಿಗೆ ಬಂದು ಏರ್ ಗನ್ನಿಂದ ಕೆಳಗಿದ್ದ ಕಾರುಗಳು ಹಾಗೂ ಪಾರ್ಕಿಂಗ್ ಶೇಡ್ ಮೇಲೆ ಶೂಟ್ ಮಾಡಲು ಪ್ರಾರಂಭಿಸಿದ್ದಾನೆ. ಫೈರಿಂಗ್ ಶಬ್ದ ಕೇಳುತ್ತಿದ್ದಂತೆ ಸ್ಥಳಕ್ಕೆ ಬಂದ ಸೆಕ್ಯುರಿಟಿ ಗಾರ್ಡ್ಗಳ ಮೇಲೆಯೂ ಈತ ಗನ್ನಿಂದ ಶೂಟ್ ಮಾಡಿದ್ದಾನೆ. ಸುಮಾರು 45 ನಿಮಿಷಗಳ ಕಾಲ ಈತ ಸತತವಾಗಿ ಫೈರಿಂಗ್ ನಡೆಸಿ ಆತಂಕ ಸೃಷ್ಟಿಸಿದ್ದ.
ಕಾರು ಮಾಲೀಕ ಬಿದ್ಯುತ್ ಹೇಳಿದ್ದಿಷ್ಟು
ಇನ್ನು ಘಟನೆ ಕುರಿತಾಗಿ ಕಾರು ಮಾಲೀಕ ಬಿದ್ಯುತ್ ಎಂಬುವವರು ಪ್ರತಿಕ್ರಿಯಿಸಿದ್ದು, ‘ಕಳೆದ ರಾತ್ರಿ ಕಾರಿನ ಮೇಲೆ ಏರ್ ಫೈರಿಂಗ್ ಆಗಿದೆ. ಮಧ್ಯರಾತ್ರಿ 2.30 ರ ಸುಮಾರಿಗೆ ಈ ಘಟನೆ ನಡೆದಿದೆ. ಸೆಕ್ಯುರಿಟಿ ಮೇಲೆ ಕೂಡ ಫೈರ್ ಮಾಡಿದ್ದಾರೆ. ಯಾರಿಗೂ ಏನು ಆಗಿಲ್ಲ. ಆದರೆ ಪಾರ್ಕಿಂಗ್ನಲ್ಲಿದ್ದ ಕಾರಿನ ಗ್ಲಾಸ್ ಪುಡಿಯಾಗಿವೆ. ಅವರು ಏಕೆ ಈ ರೀತಿ ಮಾಡಿದ್ದಾರೆ ಗೊತ್ತಿಲ್ಲ. ಅವರಿಗೂ ನಮಗೂ ಯಾವುದೇ ಪರಿಚಯವಿಲ್ಲ. ಕುಡಿದು ಈ ರೀತಿ ಮಾಡಿರಬೇಕು. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ’ ಎಂದರು.
ಸ್ಥಳಕ್ಕೆ ಸೋಕೋ ತಂಡ ಭೇಟಿ
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸೂರ್ಯನಗರ ಠಾಣೆ ಪೊಲೀಸರು ಆರೋಪಿ ಅನುರಾಗ್ ತಿವಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸೋಕೋ ತಂಡವು ಘಟನಾ ಸ್ಥಳ ಹಾಗೂ ಆರೋಪಿಯ ಪ್ಲಾಟ್ಗೆ ಭೇಟಿ ನೀಡಿ, ಕಾರಿನ ಬಳಿ ಸಿಕ್ಕ ಏರ್ ಗನ್ ಬಾಲ್ಸ್ಗಳನ್ನು ಒಳಗೊಂಡಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ. ಕೃತ್ಯಕ್ಕೆ ಬಳಸಿದ್ದ ಏರ್ ಗನ್ ಹಾಗೂ ಬಾಲ್ಸ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:45 pm, Thu, 6 August 26



