ಸರ್ಕಾರ ಸ್ಥಿಮಿತ ಕಳೆದುಕೊಂಡಿದೆ, ಸಿಎಂ ಹೇಡಿಯಂತೆ ವರ್ತಿಸಿದ್ದಾರೆ: ಮಾಜಿ ಐಪಿಎಸ್ ಭಾಸ್ಕರ ರಾವ್ ಟೀಕೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರನ್ನು ಅಮಾನತು ಮಾಡಿರುವುದಕ್ಕೆ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾವ್ ಅವರು ಸರ್ಕಾರದ ಈ ನಿರ್ಧಾರವನ್ನು ಅಸಹಾಯಕತೆ ಮತ್ತು ಹೇಡಿತನದ ಸಂಕೇತ ಎಂದು ಬಣ್ಣಿಸಿದ್ದಾರೆ. ಅವರು ಉಪಮುಖ್ಯಮಂತ್ರಿಗಳನ್ನು ಈ ಘಟನೆಗೆ ಪ್ರಮುಖವಾಗಿ ಹೊಣೆಗಾರರೆಂದು ಆರೋಪಿಸಿದ್ದಾರೆ.

ಸರ್ಕಾರ ಸ್ಥಿಮಿತ ಕಳೆದುಕೊಂಡಿದೆ, ಸಿಎಂ ಹೇಡಿಯಂತೆ ವರ್ತಿಸಿದ್ದಾರೆ: ಮಾಜಿ ಐಪಿಎಸ್ ಭಾಸ್ಕರ ರಾವ್ ಟೀಕೆ
ಭಾಸ್ಕರ ರಾವ್ ಹಾಗೂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

Updated on: Jun 06, 2025 | 9:56 AM

ಬೆಂಗಳೂರು, ಜೂನ್ 6: ಆರ್​​ಸಿಬಿ ಐಪಿಎಲ್ ವಿಜಯದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ (Chinnaswamy stampede) ಸಂಭವಿಸಿ 11 ಮಂದಿ ಮೃತಪಟ್ಟ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ (B Dayanand) ಅವರನ್ನು ಅಮಾನತುಗೊಳಿಸಿರುವ ನಡೆಯನ್ನು ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಭಾಸ್ಕರ್ ರಾವ್ (Bhaskar Rao) ಖಂಡಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಈ ಮಟ್ಟಕ್ಕೆ ಅಸಹಾಯಕರಾಗಿ, ಹೇಡಿಯಂತೆ ಮತ್ತು ಆತಂಕದಿಂದ ಈವರೆಗೆ ಯಾವ ಮುಖ್ಯಮಂತ್ರಿಯೂ ವರ್ತಿಸಿಲ್ಲ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರ ಅಮಾನತು ನಿರ್ಧಾರ ಕರ್ನಾಟಕದ ಪೊಲೀಸ್ ಇತಿಹಾಸದಲ್ಲಿ ಕರಾಳ ದಿನ ಎಂದು ಭಾಸ್ಕರ್ ರಾವ್ ಬಣ್ಣಿಸಿದ್ದಾರೆ.

ಇದನ್ನೂ ಓದಿ
RCB ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್​ ಸೋಸಲೆ ಸೇರಿ ನಾಲ್ವರ ಬಂಧನ
ಎಡಿಜಿಪಿ ದರ್ಜೆ ಅಧಿಕಾರಿ ಸಸ್ಪೆಂಡ್, ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲು
ಬೆಂಗಳೂರಿಗೆ ನೂತನ ಪೊಲೀಸ್​ ಕಮಿಷನರ್​ ಆಗಿ ಸೀಮಂತ್​ ಕುಮಾರ್ ಸಿಂಗ್ ನೇಮಕ
ಬೆಂಗಳೂರು ಕಾಲ್ತುಳಿತ ಕೇಸ್ ಸಿಐಡಿಗೆ, ಬೆಂಗಳೂರು ಕಮಿಷನರ್ ಅಮಾನತು..!

‘ಶ್ರಮ ಪಟ್ಟಿದ್ದಕ್ಕೆ ಮತ್ತು ಸತ್ಯ ಹೇಳಿದ್ದಕ್ಕೆ ಸಿಕ್ಕ ಫಲ’

ಬೆಂಗಳೂರನ್ನು ಸುರಕ್ಷಿತವಾಗಿ ಇಡುವುದಕ್ಕೆ ಪೊಲೀಸ್ ಆಯುಕ್ತರು ಮತ್ತು ಅವರ ತಂಡ ರಾತ್ರಿ ಇಡೀ ಶ್ರಮಿಸಿದೆ. ಇದಕ್ಕೆ ಮತ್ತು ಸತ್ಯ ಹೇಳಿದ್ದಕ್ಕೆ ಪೊಲೀಸ್ ಆಯುಕ್ತರಿಗೆ ದೊರೆತ ಬಹುಮಾನ ‘ಅಮಾನತು’ ಆಗಿದೆ ಎಂದು ಭಾಸ್ಕರ್ ರಾವ್ ಕಿಡಿ ಕಾರಿದ್ದಾರೆ.

ಅವಘಡಕ್ಕೆ ಉಪ ಮುಖ್ಯಮಂತ್ರಿಯೇ ಕಾರಣ: ಭಾಸ್ಕರ್ ರಾವ್

ಅನಿಯಂತ್ರಿತ ಉಪಮುಖ್ಯಮಂತ್ರಿಗಳೇ ಈ ಡೆತ್ ಮಾರ್ಚ್ ಅನ್ನು ಆಯೋಜಿಸಿದ್ದಾರೆ ಮತ್ತು ಅವರೇ ಪ್ರಮುಖ ತಪ್ಪಿತಸ್ಥ ಎಂಬುದು ಕರ್ನಾಟಕದ ಪ್ರತಿಯೊಬ್ಬರಿಗೂ ತಿಳಿದಿದೆ. ಈವರೆಗೆ ಯಾವೊಬ್ಬ ಮುಖ್ಯಮಂತ್ರಿ ಕೂಡ ಈ ಮಟ್ಟಕ್ಕೆ ಅಸಹಾಯಕರಾಗಿ, ಹೇಡಿಯಂತೆ ಮತ್ತು ಆತಂಕದಿಂದ ವರ್ತಿಸಿಲ್ಲ ಎಂದು ಭಾಸ್ಕರ್ ರಾವ್ ಟೀಕಿಸಿದ್ದಾರೆ.

ಭಾಸ್ಕರ್ ರಾವ್ ಎಕ್ಸ್ ಸಂದೇಶ


ಸರ್ಕಾರದ ಕೈಗಳಿಗೆ ರಕ್ತದ ಕಲೆ ಅಂಟಿಕೊಂಡಿದೆ. ಅಷ್ಟೇ ಅಲ್ಲದೆ ಈಗ ಸರ್ಕಾರ ಸ್ಥಿಮಿತ ಕಳೆದುಕೊಂಡಿದೆ. ಸರ್ಕಾರವೇ ಈಗ ವಿಪತ್ತಾಗಿ ಪರಿಣಮಿಸಿದೆ ಎಂದು ಭಾಸ್ಕರ ರಾವ್ ಹೇಳಿದ್ದಾರೆ.

ಬೆಂಗಳೂರು ಕಾಲ್ತುಳಿತ ಘಟನೆ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಗುರುವಾರ ರಾತ್ರಿ ನಿರ್ಧಾರ ಪ್ರಕಟಿಸಿತ್ತು. ಅವರ ಜಾಗಕ್ಕೆ ಐಪಿಎಸ್ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಿತ್ತು. ನೂತನ ಆಯುಕ್ತರು ಗುರುವಾರ ರಾತ್ರಿಯೇ ಅಧಿಕಾರ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್​ ಸೋಸಲೆ ಸೇರಿ ನಾಲ್ವರ ಬಂಧನ

ಏತನ್ಮಧ್ಯೆ, ಕಾಲ್ತುಳಿತ ಘಟನೆ ಸಂಬಂಧ ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್​ ಸೋಸಲೆ ಸೇರಿದಂತೆ ನಾಲ್ವರನ್ನು ಶುಕ್ರವಾರ ಬೆಳಗ್ಗೆ ಬಂಧಿಸಲಾಗಿದೆ. ಸಿಸಿಬಿ ಪೊಲೀಸರು ಹಾಗೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us