
ಬೆಂಗಳೂರು, ಏಪ್ರಿಲ್ 19: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳ ತನಿಖೆ ವೇಳೆ ಹಲವು ಪ್ರಮುಖ ವಿಷಯಗಳು ಬೆಳಕಿಗೆ ಬಂದಿತ್ತೆಂಬ ವಿಚಾರವೀಗ ಬಯಲಾಗಿದೆ. ಎ1 ಬಸವರಾಜ್ ಮುತ್ತಗಿ ಜೊತೆಗೆ ಮಾತಾಡಲೆಂದು ವಿನಯ್ ಕುಲಕರ್ಣಿ ಪತ್ನಿ ಹೆಸರಿನಲ್ಲಿ ಸಿಮ್ ಖರೀದಿ ಮಾಡಿದ್ದರು. ಅದೇ ಸಿಮ್ ಕಾರ್ಡ್ ಬಳಸಿ 94 ಬಾರಿ ಮುತ್ತಗಿ ಜೊತೆಗೆ ವಿನಯ್ ಮಾತಾಡಿದ್ದರು. ಅಲ್ಲದೇ ಯೋಗಿಶ್ ಗೌಡ ಕೊಲೆಯಾದ ನಂತರ ಆರು ತಿಂಗಳಲ್ಲಿ ಬಸವರಾಜ್ ಮುತ್ತಗಿಯನ್ನು 57 ಬಾರಿ ವಿನಯ್ ಕುಲಕರ್ಣಿ ಸಂಪರ್ಕಿಸಿದ್ದರು. ಈ ಪೈಕಿ ಆರು ಬಾರಿ ಇಬ್ಬರೂ ಇಂದೇ ಪ್ರದೇಶದಲ್ಲಿ ಇರೋದು ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ
ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇ ಯೋಗಿಶ್ ಗೌಡ ಕೊಲೆಗೆ ಕಾರಣವಾಗಿದ್ದು, ಬಸವರಾಜ್ ಮುತ್ತಗಿ ಮತ್ತು ಆತನ ಬಾವ ಚಂದ್ರಶೇಖರ ಇಂಡಿಗೆ ವಿನಯ್ ಕುಲಕರ್ಣಿ ಸುಪಾರಿ ನೀಡಿದ್ದರು. ಆದರೆ ಬಸವರಾಜ್ ಮುತ್ತಗಿ ಮಾಫಿ ಸಾಕ್ಷ್ಯ ಆಗಿದ್ದೇ ಈಗ ವಿನಯ್ ಕುಲಕರ್ಣಿಗೆ ಕಂಟಕವಾಗಿದೆ. ಯೋಗಿಶ್ ಗೌಡ ಹತ್ಯೆ ವೇಳೆ ಎ7 ರಿಂದ ಎ14ರ ವರೆಗಿನ ಆರೋಪಿಗಳು ಆಯುಧ ಬಳಸಿ ಕೊಲೆ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆದರೆ ಪೊಲೀಸರು ಎ1 ರಿಂದ ಎ6 ಆರೋಪಿಗಳನ್ನು ಬಂಧಿಸಿ, ಆಯುಧಗಳು ವಶಕ್ಕೆ ಅಂತಾ ಉಲ್ಲೇಖಿಸಿದ್ದರು. ಬಸವರಾಜ್ ಮುತ್ತಗಿ ಮತ್ತು ಯೋಗಿಶ್ ಗೌಡ ನಡುವಿನ ಭೂ ವ್ಯಾಜ್ಯ ಕೊಲೆಗೆ ಕಾರಣ ಎಂದು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಆದರೆ ಧಾರವಾಡ ಪೊಲೀಸರ ತನಿಖೆಯ ತಪ್ಪುಗಳನ್ನು ಸಿಬಿಐ ಎಳೆ ಏಳೆಯಾಗಿ ಬಿಚ್ಚಿಟ್ಟಿದೆ.
ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್; ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ
ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿನಲ್ಲಿ ಒಬ್ಬರೇ ಕುಳಿತು ಚಿಂತೆಗೀಡಾಗಿದ್ದಾರೆ. ರಾತ್ರಿ ಇಡೀ ನಿದ್ದೆ ಮಾಡದೆ ಸಿಬ್ಬಂದಿ ನೀಡಿದ ಊಟವನ್ನೂ ತಿನ್ನದೆ ಅವರು ಹಾಗೇ ಇದ್ದಾರೆ ಎಂಬುದು ಗೊತ್ತಾಗಿದೆ. ಜೈಲಿನ ಮೆನುವಿನಂತೆ ಮುದ್ದೆ, ಚಪಾತಿ, ಅನ್ನ ಸಾಂಬರ್ ನೀಡಲಾಗಿತ್ತು. ಸಹಕೈದಿಗಳು ಹೇಳಿದರೂ ಸಹ ಊಟ ಮಾಡದ ವಿನಯ್ ಕುಲಕರ್ಣಿ, ಏಕಾಂಗಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನು ಸೆರೆವಾಸದಲ್ಲಿರುವ ವಿನಯ್ ಕುಲಕರ್ಣಿ, ವಿನಯ್ ಸೇರಿ 17 ಅಪರಾಧಿಗಳಿಗೆ ಜೈಲು ಸಿಬ್ಬಂದಿ ಸಜಾಕೈದಿ ನಂಬರ್ ನೀಡಿದ್ದಾರೆ. ವಿನಯ್ ಕುಲಕರ್ಣಿ ಸಜಾಬಂಧಿ ನಂಬರ್ 16110 ಆಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:59 am, Sun, 19 April 26