AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day: ಆರ್​ಎಸ್​ಎಸ್ ವಿಚಾರಧಾರೆಗೆ ತಲೆಬಾಗಿದ್ದೇನೆ, ಅದೇ ಆದರ್ಶದಲ್ಲಿ ದೇಶ ಕಟ್ಟುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ

CM Basavaraj Bommai: ಕೆಲವರ ಹೆಸರುಗಳನ್ನು ಇತಿಹಾಸದಲ್ಲಿ ಬರೆದಿಲ್ಲ. ಸ್ವಾತಂತ್ರ್ಯ ಬಂದ ದಿನವೇ ಭಾರತ ದೇಶದ ವಿಭಜನೆಯಾಗಿತ್ತು. ಇದಕ್ಕಿಂತ ದುರ್ದೈವ ಬೇರೆ ಇಲ್ಲ ಎಂದರು.

Independence Day: ಆರ್​ಎಸ್​ಎಸ್ ವಿಚಾರಧಾರೆಗೆ ತಲೆಬಾಗಿದ್ದೇನೆ, ಅದೇ ಆದರ್ಶದಲ್ಲಿ ದೇಶ ಕಟ್ಟುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Aug 15, 2022 | 3:27 PM

Share

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (Rashtriya Swayamsevaka Sangha – RSS) ವಿಚಾರಧಾರೆಗೆ ತಲೆಬಾಗಿದ್ದೇನೆ. ಆರ್​ಎಸ್​ಎಸ್​ ಬಗ್ಗೆ ನನಗೆ ತುಂಬಾ ಗೌರವವಿದೆ. ಆ ತತ್ವ ಸಿದ್ಧಾಂತದ ಆಧಾರದ ಮೇಲೆಯೇ ದೇಶ ಕಟ್ಟಲು ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ 75 ವರ್ಷವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಅಮೃತ ಭಾರತಿಗೆ ಕನ್ನಡದ ಆರತಿ, ಕರುನಾಡ ಜಾತ್ರೆ’ (Azadi Ka Amrit Mahotsav) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೀರ ಸಾವರ್ಕರ್ ದೇಶ ವಿಭಜನೆ ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇತಿಹಾಸ ಬಲ್ಲವರು, ಇತಿಹಾಸ ಬರೆಯಬಲ್ಲರು. ಸ್ವಾತಂತ್ರ್ಯ ಹೋರಾಟದ ಇತಿಹಾಸ ಎಂದಿಗೂ ಬದಲಾಗುವುದಿಲ್ಲ ಎಂದರು. ನಾವು ಕೊಟ್ಟ ಜಾಹೀರಾತಿನಲ್ಲಿ ನೆಹರು ಫೋಟೊ ಹಾಕದಿದ್ದಕ್ಕೆ ಕಾಂಗ್ರೆಸ್​ನವರಿಗೆ ಬೇಸರವಾಗಿದೆ. ಜವಾಹರ್​​ ಲಾಲ್​​​ ನೆಹರೂ ಅವರ ಬಗ್ಗೆ ನಮಗೂ ಗೌರವ ಇದೆ. ಅವರನ್ನು ನಾವು ಮರೆತಿಲ್ಲ, ಅವರ ಕೆಲಸವನ್ನೂ ಮರೆತಿಲ್ಲ. ನೆಹರು ಅವರಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಗೌರವ ಕೊಟ್ಟಿದ್ದಾರೆ. ನೆಹರು ಅವರಿಂದ ಹಿಡಿದು ವಾಜಪೇಯಿ ಅವರವರೆಗೂ ಹಲವು ಪ್ರಧಾನಿಗಳು ತಮ್ಮ ಕಾಲಘಟ್ಟದಲ್ಲಿ ಕೊಟ್ಟ ಕೊಡುಗೆಗಳ ಪ್ರದರ್ಶನ ದೆಹಲಿಯಲ್ಲಿ ನಡೆದಿದೆ ಎಂದರು.

ಈಗ ಸತ್ಯವನ್ನು ಹೇಳುವ ಕಾಲ ಬಂದಿದೆ. ಕೆಲವರು ಸತ್ಯ ಮರೆಮಾಚುವ ಕೆಲಸ ಮಾಡಿದರು. ಕೆಲವರ ಹೆಸರುಗಳನ್ನು ಇತಿಹಾಸದಲ್ಲಿ ಬರೆದಿಲ್ಲ. ಸ್ವಾತಂತ್ರ್ಯ ಬಂದ ದಿನವೇ ಭಾರತ ದೇಶದ ವಿಭಜನೆಯಾಗಿತ್ತು. ಇದಕ್ಕಿಂತ ದುರ್ದೈವ ಬೇರೆ ಇಲ್ಲ ಎಂದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪಕ್ಷದ ವತಿಯಿಂದ ರಾಷ್ಟ್ರ ಧ್ವಜಾರೋಹಣ ನಡೆಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಸಚಿವರಾದ ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ, ಸಂಸದರಾದ ಪಿ.ಸಿ.ಮೋಹನ್, ಲೆಹರ್ ಸಿಂಗ್ ಉಪಸ್ಥಿತರಿದ್ದರು. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಂದ ಜಾಥಾದ ಮೂಲಕ ಬಿಜೆಪಿ ಕಾರ್ಯಕರ್ತರು ಕ್ರೀಡಾಂಗಣಕ್ಕೆ ಆಗಮಿಸಿದರು.

ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಬೆಂಗಳೂರಿನ ಮೆಜೆಸ್ಟಿಕ್​​ನಲ್ಲಿರುವ ರಾಯಣ್ಣ ಪ್ರತಿಮೆಗೆ ಸಿಎಂ ಬೊಮ್ಮಾಯಿಗೆ ಕಂಬಳಿ ಹೊದಿಸಿ, ಮಾಲಾರ್ಪಣೆ ಮಾಡಿದರು.