ಕರ್ನಾಟಕ ಸರ್ಕಾರದ ಆಹ್ವಾನವಿದ್ದರೂ ಭಾರತಕ್ಕೆ ನನ್ನನ್ನು ಪ್ರವೇಶಿಸಲು ಬಿಡಲಿಲ್ಲ, ಲಂಡನ್ ಲೇಖಕಿ ನಿತಾಶಾ ಕೌಲ್ ಗಂಭೀರ ಆರೋಪ

ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಪ್ರಾಧ್ಯಾಪಕಿ ಹಾಗೂ ಲೇಖಕಿ ಆಗಿರುವ ನಿತಾಶಾ ಕೌಲ್ ಅವರನ್ನು ಕಾಂಗ್ರೆಸ್ ಸರ್ಕಾರ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತೆ ಸಮ್ಮೇಳನಕ್ಕೆ ಆಹ್ವಾನ ನೀಡಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿತಾಶಾ ಅವರು ಬೆಂಗಳೂರಿಗೆ ಬಂದಿಳಿದಿದ್ದು ಅಧಿಕಾರಿಗಳು ಅವರನ್ನು ತಡೆದು ವಿಚಾರಣೆ ನಡೆಸಿ ಲಂಡನ್​ಗೆ ವಾಪಸ್ ಕಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಆಹ್ವಾನವಿದ್ದರೂ ಭಾರತಕ್ಕೆ ನನ್ನನ್ನು ಪ್ರವೇಶಿಸಲು ಬಿಡಲಿಲ್ಲ, ಲಂಡನ್ ಲೇಖಕಿ ನಿತಾಶಾ ಕೌಲ್ ಗಂಭೀರ ಆರೋಪ
ಲಂಡನ್ ಲೇಖಕಿ ನಿತಾಶಾ ಕೌಲ್
Follow us
|

Updated on:Feb 26, 2024 | 2:33 PM

ಬೆಂಗಳೂರು, ಫೆ.26: “ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳ” ಕುರಿತು ಶನಿವಾರ ಮತ್ತು ಭಾನುವಾರ ಕರ್ನಾಟಕ ಸರಕಾರವು ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತೆ ಸಮ್ಮೇಳನಕ್ಕೆ ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಪ್ರಾಧ್ಯಾಪಕಿ ಹಾಗೂ ಲೇಖಕಿ ನಿತಾಶಾ ಕೌಲ್ (Nitasha Kaul) ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅಧಿಕಾರಿಗಳು ವಾಪಸ್ ಕಳಿಸಿದ್ದಾರೆ.

ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳ ಕುರಿತು ಮಾತನಾಡಿದ್ದಕ್ಕೆ ನನಗೆ ಭಾರತಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ನನ್ನನ್ನು ವಾಪಸ್‌ ಕಳುಹಿಸಲಾಯಿತು ಎಂದು ಭಾರತೀಯ ಮೂಲದ, ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಪ್ರಾಧ್ಯಾಪಕಿ ಹಾಗೂ ಲೇಖಕಿ ಆಗಿರುವ ನಿತಾಶಾ ಕೌಲ್ ಗಂಭೀರವಾಗಿ ಆರೋಪಿಸಿದ್ದಾರೆ.

ನಿತಾಶಾ ಕೌಲ್ ಅವರನ್ನು ಫೆಬ್ರವರಿ 24 ಮತ್ತು 25 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ’ದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಕಾಂಗ್ರೆಸ್ ಸರ್ಕಾರ ಆಹ್ವಾನಿಸಿತ್ತು. ಈ ಬಗ್ಗೆ ಕೌಲ್ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಅವರು ಕಳುಹಿಸಿದ ಆಹ್ವಾನದ ಪ್ರತಿ ಮತ್ತು ನೋಂದಣಿ ವಿವರಗಳನ್ನು ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.

ನಿತಾಶಾ ಕೌಲ್ ಟ್ವೀಟ್ ಹೀಗಿದೆ

ಕಾಶ್ಮೀರಿ ಪಂಡಿತೆಯಾಗಿರುವ ನಿತಾಶಾ ಕೌಲ್, ಆರೆಸ್ಸೆಸ್ ನ ಕಟು ಟೀಕಾಕಾರರಾಗಿದ್ದಾರೆ. ಕೌಲ್ ಭಾರತೀಯ ಪ್ರಜೆಯೂ ಆಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ಕೌಲ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್ ಕಳಿಸಲಾಗಿದೆ. ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕೌಲ್, “ನಾವು ಏನೂ ಮಾಡಲು ಸಾಧ್ಯವಿಲ್ಲ. ದಿಲ್ಲಿಯಿಂದ ಆದೇಶ ಬಂದಿದೆ ಎಂಬ ಮಾತು ಹೊರತುಪಡಿಸಿ ಬೇರಾವ ಕಾರಣವನ್ನೂ ಅಧಿಕಾರಿಗಳು ನನಗೆ ನೀಡಲಿಲ್ಲ. ನಾನು ಭಾರತ ಪ್ರವೇಶಿಸಲು ಸಾಧ್ಯವಿಲ್ಲ ಎಂಬ ಯಾವುದೇ ಪೂರ್ವಭಾವಿ ಮಾಹಿತಿ ಅಥವಾ ನೋಟಿಸ್ ಅನ್ನು ನನಗೆ ನೀಡಲಾಗಿರಲಿಲ್ಲ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rajya Sabha Election: ನಾಳೆ ರಾಜ್ಯಸಭೆ ಚುನಾವಣೆ: ಅಡ್ಡ ಮತದಾನ ಭೀತಿ, ಶಾಸಕರ ಹಿಡಿದಿಡಲು ಕಾಂಗ್ರೆಸ್ ಕಸರತ್ತು

ನಾನು ಬೆಂಗಳೂರಿಗೆ ಬಂದಿಳಿದ 24 ಗಂಟೆಯ ನಂತರ ಬ್ರಿಟಿಷ್ ಏರ್‌ವೇಸ್ ವಿಮಾನದ ಮೂಲಕ ನನ್ನನ್ನು ಲಂಡನ್‌ಗೆ ವಾಪಸ್‌ ಕಳುಹಿಸಿದರು. ನಾನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ 12 ಗಂಟೆಗಳನ್ನು ಕಳೆದಿದ್ದೇನೆ. ಹಲವಾರು ಗಂಟೆಗಳ ಕಾಲ ನನ್ನನ್ನು ವಿಚಾರಣೆ ನಡೆಸಿದರು ಮತ್ತು 24 ಗಂಟೆಗಳ ನಂತರ ವಾಪಸ್ ಕಳುಹಿಸಿದರು ಎಂದು ಕೌಲ್ ಆರೋಪಿಸಿದ್ದಾರೆ.

ಬಿಜೆಪಿ ಟ್ವೀಟ್

ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ, ಕೌಲ್ ಅವರನ್ನು “ಭಾರತ ವಿರೋಧಿ ಅಂಶ” ಎಂದು ಲೇಬಲ್ ಮಾಡಲು ಮತ್ತು ಅದನ್ನು ‘ಬ್ರೇಕ್ ಇಂಡಿಯಾ ಬ್ರಿಗೇಡ್’ ಎಂದು ಕರೆದಿದೆ. ಕೌಲ್ ಅವರಿಗೆ ಆಹ್ವಾನ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರವು “ಭಾರತದ ಏಕತೆ ಮತ್ತು ಸಮಗ್ರತೆಗೆ ಬೆದರಿಕೆ ಹಾಕುತ್ತಿದೆ” ಎಂದು ಬಿಜೆಪಿ ಆರೋಪಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:36 am, Mon, 26 February 24