ಶಾಲಾ ಮಕ್ಕಳ ನೆಚ್ಚಿನ ಜಂಕ್ ಫುಡ್ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣು: ನೂರಕ್ಕೂ ಹೆಚ್ಚು ಕಡೆ ಭರ್ಜರಿ ರೇಡ್!

ಶಾಲಾ-ಕಾಲೇಜು ಮಕ್ಕಳಲ್ಲಿ ಸ್ಥೂಲಕಾಯ (Obesity) ಮತ್ತು ಫ್ಯಾಟಿ ಲಿವರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ ಕೈಗೊಂಡಿದೆ. ವಿದ್ಯಾರ್ಥಿ ನಿಲಯ ಹಾಗೂ ಶಾಲೆಗಳ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಜಂಕ್ ಫುಡ್ ಮಳಿಗೆಗಳ ಮೇಲೆ ದಾಳಿ ನಡೆಸಿ ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ಹಾನಿಕಾರಕ ಅಂಶಗಳು ಪತ್ತೆಯಾದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಶಾಲಾ ಮಕ್ಕಳ ನೆಚ್ಚಿನ ಜಂಕ್ ಫುಡ್ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣು: ನೂರಕ್ಕೂ ಹೆಚ್ಚು ಕಡೆ ಭರ್ಜರಿ ರೇಡ್!
ಸಾಂದರ್ಭಿಕ ಚಿತ್ರ
Image Credit source: gettyimages.com
Edited By:

Updated on: Jul 14, 2026 | 12:25 PM

ಮುಖ್ಯಾಂಶಗಳು

  • ಮಕ್ಕಳಲ್ಲಿ ಓಬೆಸಿಟಿ ಮತ್ತು ಫ್ಯಾಟಿ ಲಿವರ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.
  • ಶಾಲಾ-ಕಾಲೇಜುಗಳ ಸುತ್ತಮುತ್ತಲಿನ ಜಂಕ್ ಫುಡ್ ಮಳಿಗೆಗಳ ಮೇಲೆ ಆಹಾರ ಇಲಾಖೆ ದಾಳಿ ನಡೆಸಿದೆ.
  • ಹಾನಿಕಾರಕ ಆಹಾರ ಪತ್ತೆಯಾದರೆ ಮಳಿಗೆಗಳ ಲೈಸೆನ್ಸ್ ರದ್ದುಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಬೆಂಗಳೂರು, ಜುಲೈ 14: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸ್ಥೂಲಕಾಯ (Obesity) ಮತ್ತು ಫ್ಯಾಟಿ ಲಿವರ್​ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಅನಾರೋಗ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಶಾಲಾ-ಕಾಲೇಜು ಮಕ್ಕಳ ಫೇವರೆಟ್ ಕುರುಕಲು ತಿಂಡಿಗಳಾದ ಚಿಪ್ಸ್, ಬಜ್ಜಿ, ಬೋಂಡಾ, ಬೋಟಿ ಸೇರಿದಂತೆ ವಿವಿಧ ಜಂಕ್ ಫುಡ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ.

ಶಾಲಾ-ಕಾಲೇಜು, ಹಾಸ್ಟೆಲ್‌ಗಳ ಸುತ್ತಮುತ್ತ ಮೆಗಾ ಡ್ರೈವ್!

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಎಚ್ಚೆತ್ತಿರುವ ಆಹಾರ ಸುರಕ್ಷತಾ ಇಲಾಖೆಯು ರಾಜ್ಯಾದ್ಯಂತ ವಿಶೇಷ ಡ್ರೈವ್ ಆರಂಭಿಸಿದೆ. ಶಾಲಾ-ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಅಂಗಡಿ, ಬೇಕರಿ ಹಾಗೂ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಆಹಾರದ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.

ಅವಧಿ ಮೀರಿದ, ಹೆಚ್ಚು ಕರಿದ ಎಣ್ಣೆ ತಿಂಡಿಗಳ ಪರೀಕ್ಷೆ

ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಅವಧಿ ಮುಗಿದ ಆಹಾರ ಪದಾರ್ಥಗಳು ಹಾಗೂ ಪದೇ ಪದೆ ಕರಿದ ಎಣ್ಣೆಯಲ್ಲಿ ತಯಾರಿಸಿದ ಬಜ್ಜಿ-ಬೋಂಡಾಗಳ ಸ್ಯಾಂಪಲ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಾರೆ. ಈ ತಿನಿಸುಗಳಲ್ಲಿ ಬಳಸಿರುವ ಬಣ್ಣ ಹಾಗೂ ರಾಸಾಯನಿಕಗಳು ಮಕ್ಕಳ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಲ್ಯಾಬ್‌ನಲ್ಲಿ ವೈಜ್ಞಾನಿಕ ಪರೀಕ್ಷೆ ನಡೆಸಲಾಗುತ್ತದೆ.

ಹಾನಿಕಾರಕ ಅಂಶಗಳು ಕಂಡುಬಂದರೆ ಕೂಡಲೆ ಲೈಸನ್ಸ್ ರದ್ದು

ಸಂಗ್ರಹಿಸಲಾದ ಆಹಾರದ ಮಾದರಿಗಳ ಪರೀಕ್ಷಾ ವರದಿಯಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶಗಳು ಅಥವಾ ‘ಅನ್ ಸೇಫ್’ (Unsafe) ಎಂದು ಸಾಬೀತಾದರೆ, ಅಂತಹ ಮಳಿಗೆ ಹಾಗೂ ತಯಾರಕರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಕಾರ್ಯಾಚರಣೆಯು ಪೋಷಕರಲ್ಲಿ ಕೊಂಚ ನಿರಾಳತೆ ತಂದಿದೆ.

ಇದನ್ನೂ ಓದಿ ಮಕ್ಕಳಲ್ಲಿ ಹೆಚ್ಚಿದ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ

ಈ ಹಿಂದೆ ಬೆಂಗಳೂರಿನ ಹೋಟೆಲ್‌ಗಳು ಹಾಗೂ ಆಹಾರ ಮಳಿಗೆಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಶೀಟ್‌ಗಳನ್ನು ಬಳಸುವುದನ್ನು ಮಾಜಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂಪೂರ್ಣವಾಗಿ ನಿಷೇಧಿಸಿದ್ದರು. ಜೊತೆಗೆ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣವನ್ನು ಬಳಸುವುದನ್ನೂ ನಿಷೇಧಿಸಲಾಗಿತ್ತು. ಇದೀಗ ಮಕ್ಕಳ ಆರೋಗ್ಯ ದೃಷ್ಟಿಯಿಂದ ಜಂಕ್ ಫುಡ್​ಗಳನ್ನು ಮಾರುವ ಬೇಕರಿ, ಹೋಟೆಲ್​ಗಳಲ್ಲಿಯೂ ದಾಳಿ ನಡೆಸಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us