
ಬೆಂಗಳೂರು, ಜೂನ್ 03: ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಾಗುವುದು ಪಕ್ಕಾ ಆದ ಹಿನ್ನೆಲೆ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ (U. T. Khader) ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಲೋಕಭವನದಲ್ಲೇ ಡೆಪ್ಯುಟಿ ಸ್ಪೀಕರ್ಗೆ ಖಾದರ್ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಬರುವಂತೆ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ಕರೆ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.
ಸ್ಪೀಕರ್ ಆಗಿ ಮೂರು ವರ್ಷಗಳ ಅವಧಿಯಲ್ಲಿ ಸಹಕಾರ ನೀಡಿದ್ದಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ಗೆ ಯು.ಟಿ. ಖಾದರ್ ಧನ್ಯವಾದ ತಿಳಿಸಿದ್ದಾರೆ. ಲೋಕಭವನಕ್ಕೆ ತೆರಳಿ ಗವರ್ನರ್ ಭೇಟಿಯಾಗಿರುವ ಅವರು, ರಾಜ್ಯಪಾಲರಿಗೆ ರಾಜೀನಾಮೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಹಿಂದೆ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಖಾದರ್ಗೆ ಡಿಕೆಶಿ ಸರ್ಕಾರದಲ್ಲೂ ಅದೇ ಖಾತೆ ಸಿಗಬಹುದೆಂಬ ನಿರೀಕ್ಷೆ ಇದೆ.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ? ಬಿ.ಕೆ. ಹರಿಪ್ರಸಾದ್ಗೆ ಒಲಿದ ಅದೃಷ್ಟ?
ಇನ್ನು ಸಚಿವ ಸ್ಥಾನದ ವಿಚಾರವಾಗಿ ಪ್ರತಿಕ್ರಿಯಿಸಿರುವ ಯು.ಟಿ. ಖಾದರ್, ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ. ಆದರೆ ಆರೋಗ್ಯ ಖಾತೆ ಅಥವಾ ವಸತಿ ಖಾತೆ ಸಿಕ್ಕರೆ ಒಳಿತೆಂಬ ಬಯಕೆ ಇದೆ. ನಾಯಕರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಉಪಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸಲು ತಾನು ಸಿದ್ಧ. ಯಾವ ಬಾಲ್ ಬಂದರೂ ಬ್ಯಾಟಿಂಗ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಯು.ಟಿ. ಖಾದರ್ ಸಚಿವರಾಗುವುದು ಖಚಿತವಾಗಿರುವ ಹಿನ್ನೆಲೆ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆದಿದೆ. ಬೆಂಗಳೂರಿನ ಗಾಲ್ಫ್ ಗ್ರೌಂಡ್ ಬಳಿ ಇರುವ ಖಾದರ್ ನಿವಾಸಕ್ಕೆ ಆಗಮಿಸಿ ಹಲವರು ಶುಭ ಕೋರುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:16 pm, Wed, 3 June 26