
ಬೆಂಗಳೂರು, ಜುಲೈ 17: ಮೂವತ್ತು ಲಕ್ಷ, 60 ಲಕ್ಷ, ಕೊನೆಗೆ 1 ಕೋಟಿ ರೂ. ಹೀಗೆ ಲಕ್ಷ ಕೋಟಿ ರೂ. ಲೆಕ್ಕದಷ್ಟು ತೆರಿಗೆ ಪಾವತಿ (Tax Payment) ಮಾಡಿ ಎಂದು ಬೇಕರಿ, ಚಹಾ ಅಂಗಡಿ, ಕಾಂಡಿಮೆಂಟ್ಸ್ಗಳಿಗೆ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ (Karnataka Commercial Tax Department) ನೋಟಿಸ್ ನೀಡಲಾಗಿದ್ದೇ ತಡ ಮಾಲೀಕರು ಗಾಬರಿಯಾಗಿದ್ದಾರೆ. ಅಲ್ಲದೇ ಜುಲೈ 21 ರೊಳಗೆ ಪಾವತಿ ಮಾಡದೇ ಇದ್ದರೆ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನು ತೆರಿಗೆ ಇಲಾಖೆ ನೀಡಿದೆ. ಈ ತೆರಿಗೆಯನ್ನು ಮನ್ನಾ ಮಾಡುವಂತೆ ಸರ್ಕಾರ ಹಾಗೂ ತೆರಿಗೆ ಇಲಾಖೆಗೆ ಈಗಾಗಲೇ ವರ್ತಕರು ಮನವಿ ಸಲ್ಲಿಕೆ ಮಾಡಿದ್ದು, ಹತ್ತು ದಿನಗಳ ಗಡುವು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಡಿಮೆಂಟ್ಸ್ ಮಾಲೀಕ ಚಿಕ್ಕಯ್ಯ, ಸರ್ಕಾರ ಈ ತೆರಿಗೆ ಮನ್ನಾ ಮಾಡದಿದ್ದರೆ ವಿಷ ತಗೊಂಡು ಸಾಯುವುದಷ್ಟೇ ನಮಗೆ ದಾರಿ. ನಮ್ದು ಸಣ್ಣದಾದ ಕಾಂಡಿಮೆಂಟ್ಸ್ ಇದೆ. ಟೀ,ಕಾಫಿ, ಬ್ರೇಡ್, ಪೇಪರ್ ಮಾರಾಟ ಮಾಡುತ್ತೇವೆ. ನಮಗೆ ಈ ಜಿಎಸ್ಟಿ ಅಂದರೆ ಏನು ಎಂದು ಗೊತ್ತಿಲ್ಲ. ಏಕಾಏಕಿ 23 ಲಕ್ಷ ರೂ. ತೆರಿಗೆ ಪಾವತಿಸಿ ಎಂದರೆ ಹೇಗೆ? ನಾವು ಮಾಡಿರುವ ಸಾಲವನ್ನು ಪಾವತಿಸಲು ಆಗುತ್ತಿಲ್ಲ. ಜುಲೈ 25 ರಂದು ನಮ್ಮ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಧರಣಿ ಮಾಡುತ್ತೇವೆ. ನಾವು ಸಾಯಲು ಸಿದ್ದರಾಗಿದ್ದೇವೆ ಎಂದರು.
ಬೇಕರಿ ಮಾಲೀಕ ದಿನೇಶ್ ಆರ್.ಕೆ. ಪ್ರತಿಕ್ರಿಯಿಸಿ, ನಮಗೆ ನಾಲ್ಕು ವರ್ಷದ ವ್ಯಾಪಾರ ವಹಿವಾಟಿನ ಮೇಲೆ 62 ಲಕ್ಷ ರೂ. ಟ್ಯಾಕ್ಸ್ ನೋಟಿಸ್ ಕೊಟ್ಟಿದ್ದಾರೆ. 62 ಲಕ್ಷ ರೂ. ಹಣವನ್ನು ನೋಡಿಯೇ ಇಲ್ಲ ನಾನು. ವ್ಯಾಪಾರ ಮಾಡುವುದೆಲ್ಲ ಅಲ್ಲಿಗೆ ಸರಿ ಆಗುತ್ತದೆ. 62 ಲಕ್ಷ ರುಪಾಯಿ ಕಟ್ಟಲು ಆಗುವುದಿಲ್ಲ. ಇನ್ಮುಂದೆ ಆಗುವ ವ್ಯಾಪಾರ ವಹಿವಾಟಿಗೆ ಟ್ಯಾಕ್ಸ್ ಪಾವತಿ ಮಾಡುತ್ತೇನೆ. 23 ರಿಂದ ಹಾಲು, ಮೊಸರು, ಬ್ರೆಡ್ ಎಲ್ಲಾ ವ್ಯಾಪಾರ ನಿಲ್ಲಿಸುತ್ತೇವೆ. 25ಕ್ಕೆ ನಮ್ಮ ಅಂಗಡಿ ಬಂದ್ ಮಾಡಿ ಕುಟುಂಬದ ಜೊತೆಯಲ್ಲಿ, ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡುತ್ತೇವೆ. ಈ ಬಾರಿ ತೆರಿಗೆ ಮನ್ನಾ ಮಾಡಿಕೊಡಿ. ಮುಂದಿನ ದಿನಗಳಲ್ಲಿ ಪಾವತಿ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ವಾಣಿಜ್ಯ ಇಲಾಖೆ
ಒಟ್ಟಿನಲ್ಲಿ ಫೋನ್ ಪೇ, ಗೂಗಲ್ ಪೇ ಸಂಸ್ಥೆಯೇ ಖುದ್ದಾಗಿ ಮಾಲೀಕರ ಹಣಕಾಸು ವಹಿವಾಟಿನ ವಿವರ ನೀಡಿವೆ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರಂತೆ. ಟ್ಯಾಕ್ಸ್ ಜಟಾಪಟಿ ಯಾವ ಹಂತವನ್ನು ಮುಟ್ಟುತ್ತದೆಯೋ ಕಾದು ನೋಡಬೇಕು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:42 am, Thu, 17 July 25