
ಬೆಂಗಳೂರು, ಮಾರ್ಚ್ 30: ಮಧ್ಯಪ್ರಾಚ್ಯದಲ್ಲಿ ಯುದ್ಧ ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಮರ್ಷಿಯಲ್ ಸಿಲಿಂಡರ್ಗಳ ಅಭಾವದಿಂದಾಗಿ ಕರ್ನಾಟಕವೂ ಸೇರಿ ನಾನಾ ರಾಜ್ಯಗಳು ಹೆಚ್ಚಿನ ಪ್ರಮಾಣದ ತೊಂದರೆಯನ್ನು ಅನುಭವಿಸುತ್ತಿವೆ. ಇದರ ನೇರ ಎಫೆಕ್ಟ್ ಹೋಟೆಲ್ ಉದ್ಯಮಕ್ಕೆ ಆಗಿದ್ದು, ರಾಜ್ಯದ ಬಹುತೇಕ ಹೋಟೆಲ್ಗಳ ಮಾಲಕರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಕೆಲವರು ಹೋಟೆಲ್ಗಳ ಬಾಗಿಲು ಕ್ಲೋಸ್ ಮಾಡಿದ್ದರೆ, ಇನ್ನು ಕೆಲವರು ಕೆಲ ಸಮಯ ಅಥವಾ ಮೆನು ಕಡಿತ ಮಾಡಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ. ಸಿಲಿಂಡರ್ ಸಮಸ್ಯೆ ಬಗೆಯರಿಯಬಹುದೆಂಬ ನಿರೀಕ್ಷೆ ಸದ್ಯಕ್ಕೆ ಬಹುತೇಕ ಹುಸಿಯಾಗಿರುವ ಕಾರಣ, ಕೆಲ ಮಾಲಕರು ಅನ್ನ ನೀಡುತ್ತಿದ್ದ ಹೋಟೆಲ್ಗಳನ್ನೇ ಮಾರಲು ಮುಂದಾಗಿದ್ದಾರೆ.
ಎಲ್ಪಿಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನೆಲೆ ಹೋಟೆಲ್ ನಡೆಸಲು ಸಾಧ್ಯವಾಗದ ಕಾರಣ ಬೆಂಗಳೂರಿನ 20ರಿಂದ 25 ಹೋಟೆಲ್ಗಳ ಮಾಲೀಕರು ಅವುಗಳನ್ನು ಮಾರಲು ಮುಂದಾಗಿದ್ದಾರೆ ಎಂದು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ಹೋಟೆಲ್ ಮಾಲೀಕರಿಗೆ ಭಾರಿ ಸಂಕಷ್ಟಕ್ಕೆ ಸಿಲುಕಿದ್ದು, ಬೆಂಗಳೂರಲ್ಲೇ ಶೇ.25ರಷ್ಟು ಹೋಟೆಲ್ಗಳ ಮಾರಾಟಕ್ಕೆ ಚಿಂತನೆ ನಡೆದಿದೆ. ಸಿಲಿಂಡರ್ ಸಿಗದೆ ಹೋಟೆಲ್ ಮಾಲೀಕರು ಮೆನು ಕಡಿತಗೊಳಿಸಿದ ಕಾರಣಕ್ಕೆ ಗ್ರಾಹಕರ ಸಂಖ್ಯೆ ಇಳಿಕೆಯಾಗಿದೆ. ದೋಸೆ ಕೌಂಟರ್ ಕೂಡ ಬಂದ್ ಆಗಿದ್ದರಿಂದ ಗ್ರಾಹಕರು ಬರ್ತಿಲ್ಲ. ಮತ್ತೊಂದೆಡೆ ಹೋಟೆಲ್ ಉದ್ಯಮ ಕುಸಿತ ಹಾಗೂ ಕೆಲಸ ಕಡಿಮೆ ಇರುವ ಹಿನ್ನೆಲೆ ಸಿಬ್ಬಂದಿಯೂ ತಮ್ಮ ಊರುಗಳಿಗೆ ತೆರಳಿದ್ದಾರೆ. ಈ ಎಲ್ಲ ಕಾರಣಗಳಿಂದ ಕೆಲವರು ಹೋಟೆಲ್ ಮುಚ್ಚುವ ನಿರ್ಧಾರ ಮಾಡರೋದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್; ಏರಿಕೆಯಾಗುತ್ತಾ ನಂದಿನಿ ಉತ್ಪನ್ನಗಳ ಬೆಲೆ?
ಸಿಲಿಂಡರ್ಗಳ ಅಭಾವದಿಂದಾಗಿ ಕಲಬುರಗಿಯಲ್ಲಿ ಹೋಟೆಲ್ ನಡೆಸೋದು ಕಷ್ಟ ಎಂಬ ಸ್ಥಿತಿ ಉದ್ಭವಿಸಿದೆ. ಹೀಗಿದ್ದರೂ ಗ್ಯಾಸ್ ಏಜೆನ್ಸಿಗಳು ದುಬಾರಿ ಹಣ ಪಡೆದುಕೊಂಡು ಕಾಳ ಸಂತೆಯಲ್ಲಿ ಅವುಗಳನ್ನು ಮಾರುತ್ತಿದ್ದಾರೆ ಎಂದು ಹೋಟೆಲ್, ಬೇಕರಿ ಮತ್ತು ವಸತಿಗೃಹ ಮಾಲೀಕರ ಸಂಘ ಅಲವತ್ತುಕೊಂಡಿದೆ. ಹೋಟೆಲ್ಗಳಿಗೆ ಮೀಸಲಿಟ್ಟ ಸಿಲಿಂಡರ್ಗಳನ್ನು ಈ ರೀತಿ ಮಾರಾಟ ಮಾಡಿದರೆ ನಮ್ಮ ಕತೆ ಏನು ಎಂದು ಪ್ರಶ್ನಿಸಿರುವ ಸಂಘ, ಜಿಲ್ಲಾಡಳಿತ ಕೂಡಲೇ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.