ಕರ್ನಾಟಕದಲ್ಲಿ ಮಳೆ ಕೊರತೆ ಪರಿಣಾಮ: ದಿನಸಿ ಬೆಲೆ ಗಗನಕ್ಕೇರಿಕೆ, ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ
Grocery Prices Hike: ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯ ಪರಿಣಾಮ ಕೃಷಿ ಕ್ಷೇತ್ರದ ಮೇಲೆ ಮಾತ್ರವಲ್ಲ, ಜನರ ದೈನಂದಿನ ಜೀವನದ ಮೇಲೂ ಕಾಣಿಸಿಕೊಳ್ಳತೊಡಗಿದೆ. ಭತ್ತ, ಕಬ್ಬು, ಉದ್ದು ಸೇರಿದಂತೆ ಪ್ರಮುಖ ಬೆಳೆಗಳ ಉತ್ಪಾದನೆ ಕುಸಿಯುವ ಆತಂಕದ ನಡುವೆ ಅಕ್ಕಿ, ಬೇಳೆ, ಜೀರಿಗೆ ಸೇರಿದಂತೆ ಹಲವು ಅಗತ್ಯ ದಿನಸಿ ವಸ್ತುಗಳ ಬೆಲೆ ಏರಿಕೆಯಾಗಿದೆ.

ಮುಖ್ಯಾಂಶಗಳು
- ಕರ್ನಾಟಕ ರಾಜ್ಯದಲ್ಲಿ ಮುಂಗಾರು ಕೊರತೆ, ದಿನಸಿ ದರ ಗಗನಕ್ಕೆ
- ರೈತ-ಗ್ರಾಹಕರಿಗೆ ಹೆಚ್ಚಿದ ಆರ್ಥಿಕ ಹೊರೆ
- ಅಕ್ಕಿ, ಬೇಳೆ ಬೆಲೆಯಲ್ಲಿ ನಿರಂತರ ಏರಿಕೆ
ಬೆಂಗಳೂರು, ಜುಲೈ 15: ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ (Monsoon Rain) ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವುದು ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ನೀಡಿದೆ. ಮಳೆ ಅಭಾವದಿಂದ ಭತ್ತ, ಕಬ್ಬು, ಉದ್ದು ಸೇರಿದಂತೆ ಹಲವು ಪ್ರಮುಖ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಉತ್ಪಾದನೆ ಇಳಿಕೆಯಾಗುವ ಆತಂಕ ಎದುರಾಗಿದೆ. ಬೆಳೆ ಪ್ರಮಾಣ ಕಡಿಮೆಯಾದಂತೆ ಮಾರುಕಟ್ಟೆಯಲ್ಲಿ ಪೂರೈಕೆಯ ಮೇಲೂ ಪರಿಣಾಮ ಬೀಳುತ್ತಿದ್ದು, ದಿನಸಿ ವಸ್ತುಗಳ ಬೆಲೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ.
ವ್ಯಾಪಾರಿಗಳ ಪ್ರಕಾರ, ಈಗಾಗಲೇ ಹಲವಾರು ಆಹಾರ ಧಾನ್ಯಗಳ ಬೆಲೆ ಏರಿಕೆಯಾಗಿದೆ. ಮಳೆ ಇದೇ ರೀತಿ ಕೊರತೆಯಾಗಿದ್ದರೆ ಮುಂದಿನ ದಿನಗಳಲ್ಲಿ ಅಕ್ಕಿ, ಬೇಳೆ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಉತ್ಪಾದನೆ ಕುಸಿದಂತೆ ಮಾರುಕಟ್ಟೆಯಲ್ಲಿ ಲಭ್ಯತೆ ಕಡಿಮೆಯಾಗುವುದು ಸಹಜವಾಗಿದ್ದು, ಅದರ ನೇರ ಪರಿಣಾಮ ಗ್ರಾಹಕರ ಖರೀದಿ ವೆಚ್ಚದ ಮೇಲೆ ಬೀಳಲಿದೆ.
ಏರಿಕೆಯಾಗಿರುವ ದಿನಸಿ ದರ (ಪ್ರತಿ ಕೆ.ಜಿ.ಗೆ ರೂಪಾಯಿಗಳಲ್ಲಿ)
| ವಸ್ತು | ಹಳೆಯ ದರ | ಹೊಸ ದರ | ಚಿಲ್ಲರೆ ದರ |
| ಸ್ಟೀಮ್ ಅಕ್ಕಿ | 45 | 60 | 70 |
| ಕೊಲಂ ರೈಸ್ | 66 | 80 | 90 |
| ರಾ ರೈಸ್ | 70 | 83 | 93 |
| ಜೀರಿಗೆ | 110 | 215 | 250 |
| ತೊಗರಿ ಬೇಳೆ | 115 | 125 | 140 |
| ಉದ್ದಿನ ಬೇಳೆ | 132 | 150 | 170 |
| ಹೆಸರು ಬೇಳೆ | 94 | 105 | 116 |
| ಶೇಂಗಾ | 145 | 160 | 185 |
ವ್ಯಾಪಾರಿಗಳು ತಿಳಿಸಿರುವಂತೆ, ಕೃಷಿ ಉತ್ಪಾದನೆ ಕುಸಿತದ ಭೀತಿ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ್ದು, ಬೆಲೆ ಏರಿಕೆಯ ಪ್ರವೃತ್ತಿ ಮುಂದುವರಿಯುತ್ತಿದೆ. ಉತ್ಪಾದನೆ ಹೆಚ್ಚಾದರೆ ಮಾತ್ರ ಬೆಲೆ ನಿಯಂತ್ರಣ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಆಷಾಢ ಆರಂಭದಲ್ಲೇ ಮಾಂಸಪ್ರಿಯರಿಗೆ ಶಾಕ್: ಚಿಕನ್, ಮೊಟ್ಟೆ ಬೆಲೆಯಲ್ಲಿ ದಾಖಲೆಯ ಏರಿಕೆ
ಮಳೆ ಕೊರತೆಯಿಂದ ರೈತರು ಬೆಳೆ ನಷ್ಟದ ಆತಂಕ ಎದುರಿಸುತ್ತಿದ್ದರೆ, ಮತ್ತೊಂದೆಡೆ ಗ್ರಾಹಕರು ದಿನೇ ದಿನೇ ಏರುತ್ತಿರುವ ಆಹಾರ ಧಾನ್ಯಗಳ ಬೆಲೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮನೆಯ ಅಡುಗೆ ಬಜೆಟ್ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕೃಷಿ ಮತ್ತು ಮಾರುಕಟ್ಟೆ ಎರಡರ ಮೇಲೂ ಮುಂಗಾರು ಮಳೆಯ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಉತ್ತಮ ಮಳೆಯೇ ಈ ಪರಿಸ್ಥಿತಿಗೆ ಪರಿಹಾರ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




