ಪರಪ್ಪನ ಅಗ್ರಹಾರದಲ್ಲಿ ‘ನೋ ಮೊಬೈಲ್, ನೋ ಆತಿಥ್ಯ’: ಕೈದಿಗಳ ಹೈಟೆಕ್ ಆಟಕ್ಕೆ ಬ್ರೇಕ್ ಹಾಕಲು ಡಿಜಿಪಿ ಅಲೋಕ್ ಕುಮಾರ್ ಮಾಸ್ಟರ್ ಪ್ಲಾನ್!
ರಾಜ್ಯದ ಬಂದೀಖಾನೆ ಇಲಾಖೆಯಲ್ಲಿ ಡಿಜಿಪಿ ಅಲೋಕ್ ಕುಮಾರ್ ಮಹತ್ವದ ಸುಧಾರಣೆಗಳನ್ನು ತಂದಿದ್ದಾರೆ. ಜೈಲುಗಳಲ್ಲಿ ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಮೊಬೈಲ್ ಸೇವಾ ಪೂರೈಕೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಕೈದಿಗಳ ಸುಧಾರಣೆಗಾಗಿ ಆಂಧ್ರಪ್ರದೇಶ ಮಾದರಿಯಲ್ಲಿ ಪೆಟ್ರೋಲ್ ಬಂಕ್ಗಳು ಮತ್ತು ಬೇಕರಿ ಔಟ್ಲೆಟ್ಗಳನ್ನು ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದು ಕೈದಿಗಳಿಗೆ ಉದ್ಯೋಗ ನೀಡಿ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಸಹಾಯ ಮಾಡುತ್ತದೆ.

ಬೆಂಗಳೂರು, ಏ.11: ರಾಜ್ಯದ ಬಂದೀಖಾನೆ ಮತ್ತು ಸುಧಾರಣಾ ಇಲಾಖೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಡಿಜಿಪಿ ಅಲೋಕ್ ಕುಮಾರ್ ಅವರು ಮುಂದಾಗಿದ್ದಾರೆ. ಪರಪ್ಪನ ಅಗ್ರಹಾರದಂತಹ ಕೇಂದ್ರ ಕಾರಾಗೃಹಗಳಲ್ಲಿ ಪದೇ ಪದೇ ಮೊಬೈಲ್ ಫೋನ್ಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ಬಾರಿ ಕೇವಲ ಕೈದಿಗಳಷ್ಟೇ ಅಲ್ಲದೆ ಮೊಬೈಲ್ ಸರ್ವೀಸ್ ಪ್ರೊವೈಡರ್ಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಜೈಲುಗಳಲ್ಲಿ ಜಾಮರ್ ಅಳವಡಿಸಿದ್ದರೂ ಮೊಬೈಲ್ ಸಂಪರ್ಕ ಹೇಗೆ ಲಭ್ಯವಾಗುತ್ತಿದೆ ಎಂಬ ಬಗ್ಗೆ ಗಂಭೀರ ತನಿಖೆ ನಡೆಸಲಾಗುತ್ತಿದೆ. ತಪಾಸಣೆಯ ವೇಳೆ ಮಾತ್ರ ಸಿಗ್ನಲ್ ರೇಂಜ್ ಕಡಿತಗೊಳಿಸಿ, ನಂತರ ನೆಟ್ವರ್ಕ್ ನೀಡಲಾಗುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಒಂದು ವೇಳೆ ಜಾಮರ್ ನಿರ್ವಹಣೆಯಲ್ಲಿ ಸರ್ವೀಸ್ ಪ್ರೊವೈಡರ್ಗಳು ವಿಫಲರಾದರೆ ಅಥವಾ ಅಸಹಕಾರ ತೋರಿದರೆ ಅವರ ವಿರುದ್ಧವೇ ಕಾನೂನು ಕ್ರಮ ಜರುಗಿಸಲು ಇಲಾಖೆ ಚಿಂತನೆ ನಡೆಸಿದೆ.
ಬಂದೀಖಾನೆ ಇಲಾಖೆಯನ್ನು ಕೇವಲ ಶಿಕ್ಷಿಸುವ ಕೇಂದ್ರವನ್ನಾಗಿ ಮಾಡದೆ, ಸುಧಾರಣಾ ಕೇಂದ್ರವನ್ನಾಗಿ ಮಾಡಲು ಮುಂದಾಗಿರುವ ಇಲಾಖೆ, ಆಂಧ್ರಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲೂ ಪೆಟ್ರೋಲ್ ಬಂಕ್ಗಳನ್ನು ನಿರ್ವಹಿಸಲು ಪ್ರಸ್ತಾವನೆ ಸಲ್ಲಿಸಿದೆ. ಶಿಕ್ಷೆ ಮುಗಿಸಿ ಹೊರಬರುವ ಕೈದಿಗಳಿಗೆ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಡಲು ಈ ಬಂಕ್ಗಳಲ್ಲಿ ಅವರಿಗೆ ಉದ್ಯೋಗಾವಕಾಶ ನೀಡಲಾಗುವುದು.
ಇದನ್ನೂ ಓದಿ: ಕೊಪ್ಪಳದಲ್ಲೂ ಲವ್ ಜಿಹಾದ್: ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ; ಸಿಡಿದೆದ್ದ ಹಿಂದೂ ಯುವಕರು
ಜೈಲಿನೊಳಗೆ ಕೈದಿಗಳು ತಯಾರಿಸುವ ಗುಣಮಟ್ಟದ ಬೇಕರಿ ಪದಾರ್ಥಗಳನ್ನು ಸಾರ್ವಜನಿಕರಿಗೆ ತಲುಪಿಸಲು ಪ್ರತ್ಯೇಕ ಔಟ್ಲೆಟ್ಗಳನ್ನು ಆರಂಭಿಸುವ ಯೋಜನೆಯೂ ಸಿದ್ಧವಾಗಿದೆ. ಈ ಸಂಬಂಧ ಗೃಹ ಸಚಿವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವೇ ಅನುಷ್ಠಾನಕ್ಕೆ ಬರುವ ನಿರೀಕ್ಷೆಯಿದೆ ಎಂದು ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



