ರಾಜ್ಯದಲ್ಲಿ ‘ಸೂಪರ್ ಎಲ್ ನಿನೊ’ ಎಫೆಕ್ಟ್: ಮಳೆಗಾಲದಲ್ಲೂ 37°C ಬಿಸಿಲು; ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ಹೈ ಅಲರ್ಟ್

ರಾಜ್ಯದಲ್ಲಿ ಹವಾಮಾನ ವೈಪರೀತ್ಯ ತೀವ್ರಗೊಂಡಿದ್ದು, 'ಸೂಪರ್ ಎಲ್ ನಿನೊ' ಪರಿಣಾಮದಿಂದ ತಾಪಮಾನ ಏರಿಕೆಯಾಗಿದೆ. ಇದು ನಿರ್ಜಲೀಕರಣ, ಹೀಟ್ ಸ್ಟ್ರೋಕ್, ಡೆಂಗ್ಯೂನಂತಹ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿದೆ. ಈ ಸವಾಲನ್ನು ಎದುರಿಸಲು ಆರೋಗ್ಯ ಇಲಾಖೆ ಆಸ್ಪತ್ರೆ ಸಿದ್ಧತೆ, ಲ್ಯಾಬ್ ತಪಾಸಣೆ ಮತ್ತು ಜಾಗೃತಿ ಮೂಡಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು ಸಹ ದಾಖಲೆ ತಾಪಮಾನ ಕಂಡಿದ್ದು, ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮನವಿ ಮಾಡಿದೆ.

ರಾಜ್ಯದಲ್ಲಿ ‘ಸೂಪರ್ ಎಲ್ ನಿನೊ’ ಎಫೆಕ್ಟ್: ಮಳೆಗಾಲದಲ್ಲೂ 37°C ಬಿಸಿಲು; ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ಹೈ ಅಲರ್ಟ್
ಸಾಂದರ್ಭಿಕ ಚಿತ್ರ
Edited By:

Updated on: Sep 11, 2026 | 10:09 AM

ಬೆಂಗಳೂರು, ಸೆ.11: ರಾಜ್ಯದಲ್ಲಿ ಹವಾಮಾನ ವೈಪರೀತ್ಯ ತೀವ್ರಗೊಂಡಿದ್ದು, ಒಂದೆಡೆ ಮಳೆ ಸುರಿಯುತ್ತಿದ್ದರೆ ಮತ್ತೊಂದೆಡೆ ಬಿಸಿಲಿನ ಝಳ ಜನರನ್ನು ಸುಡುತ್ತಿದೆ. ಪ್ರಸ್ತುತ ದಿನಗಳಲ್ಲಿ ವಾತಾವರಣವನ್ನು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಒಂದು ದಿನ ಮೈ ನಡುಗಿಸುವ ಚಳಿ, ಮತ್ತೊಂದು ದಿನ ಬೆವರು ಇಳಿಸುವ ಬಿಸಿಲು ಕಂಡುಬರುತ್ತಿದೆ. ಇದು ಆರೋಗ್ಯ ಇಲಾಖೆಗೆ ದೊಡ್ಡ ಎರಡು ಸವಾಲಾಗಿ ಪರಿಣಮಿಸಿದ್ದು, ಜಾಗತಿಕ ‘ಸೂಪರ್ ಎಲ್ ನಿನೊ’ ಎಫೆಕ್ಟ್‌ನಿಂದ ತಾಪಮಾನ ಇನ್ನಷ್ಟು ಏರಿಕೆಯಾಗುವ ಆತಂಕದ ಬೆನ್ನಲ್ಲೇ ಇಲಾಖೆ ಸಿದ್ಧತೆ ಶುರು ಮಾಡಿದೆ.

ಸಾಮಾನ್ಯ ಉಷ್ಣಾಂಶಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆಯಂತಹ ವಾತಾವರಣ ನಿರ್ಮಾಣವಾಗಿದೆ. ಕೊಪ್ಪಳದಲ್ಲಿ 37°C ಉಷ್ಣಾಂಶ ದಾಖಲು, ಕಲಬುರಗಿ, ಬಳ್ಳಾರಿ, ರಾಯಚೂರು 34°C ಉಷ್ಣಾಂಶ, ಕಾರವಾರ, ಬೀದರ್, ಮೈಸೂರು 33°C ಉಷ್ಣಾಂಶ, ಬೆಂಗಳೂರಿನಲ್ಲಿ ನಗರದಲ್ಲಿ 30.9°C ಉಷ್ಣಾಂಶ ದಾಖಲಾಗಿದ್ದು, ಇದು ಸಾಮಾನ್ಯ ತಾಪಮಾನಕ್ಕಿಂತ 2°C ಹೆಚ್ಚಾಗಿದೆ. “ಸಾಮಾನ್ಯ ಉಷ್ಣಾಂಶಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚುವರಿ ಉಷ್ಣಾಂಶ ರಾಜ್ಯಾದ್ಯಂತ ದಾಖಲಾಗುತ್ತಿದೆ.” ಎಂದು ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್. ಪಾಟೀಲ್ ಹೇಳಿದ್ದಾರೆ.

ಆರೋಗ್ಯದ ಮೇಲೆ ಗಂಭೀರ ಪರಿಣಾಮ: ಹೆಚ್ಚುತ್ತಿರುವ ರೋಗಗಳು

ಹವಾಮಾನದ ಈ ದಿಢೀರ್ ಬದಲಾವಣೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದೆ. ದೇಹದಲ್ಲಿ ನೀರಿನ ಕೊರತೆ (Dehydration), ತೀವ್ರ ಸುಸ್ತು, ತಲೆನೋವು ಹಾಗೂ ಹೀಟ್ ಸ್ಟ್ರೋಕ್ (Heat Stroke) ಅಪಾಯ ಹೆಚ್ಚಿದೆ. ಮಳೆ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಿ ಡೆಂಗ್ಯೂ, ಚಿಕೂನ್‌ಗುನ್ಯಾ ಹಾಗೂ ಮಲೇರಿಯಾ ಹರಡುವ ಆತಂಕವಿದೆ. ವಾತಾವರಣ ವೈಪರೀತ್ಯದಿಂದ ವೈರಲ್ ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟದ ತೊಂದರೆಗಳು ಸಾರ್ವಜನಿಕರಲ್ಲಿ ಕಂಡುಬರುತ್ತಿವೆ.

ಆರೋಗ್ಯ ಇಲಾಖೆಯಿಂದ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳು

ಈ ಆರೋಗ್ಯ ಬಿಕ್ಕಟ್ಟನ್ನು ತಡೆಯಲು ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಮಾರ್ಗದರ್ಶನದಲ್ಲಿ ಇಲಾಖೆಯು ಕೆಲವು ಕ್ರಮಗಳಿಗೆ ಮುಂದಾಗಿದೆ.

ಆಸ್ಪತ್ರೆಗಳ ಸಿದ್ಧತೆ: ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಜೀವ ರಕ್ಷಕ ಔಷಧಿಗಳು, ORS ಪ್ಯಾಕೆಟ್‌ಗಳು, ಪರೀಕ್ಷಾ ಕಿಟ್‌ಗಳು ಹಾಗೂ ಬೆಡ್ ಸೌಲಭ್ಯಗಳನ್ನು ಕಾಯ್ದಿರಿಸಲು ಆದೇಶಿಸಲಾಗಿದೆ.

ಲ್ಯಾಬ್ ತಪಾಸಣೆ: ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ತಪಾಸಣೆಗೆ ಸರ್ಕಾರಿ ಲ್ಯಾಬ್‌ಗಳಲ್ಲಿ ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಫೀಲ್ಡ್ ಮಟ್ಟದ ನಿಗಾ: ಆರಂಭಿಕ ಹಂತದಲ್ಲೇ ರೋಗ ಲಕ್ಷಣಗಳನ್ನು ಗುರುತಿಸಲು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಮನೆ ಮನೆ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ.

ಅಧಿಕಾರಿಗಳ ಸಭೆ: ಬೆಂಗಳೂರು ಸೇರಿದಂತೆ ರಾಜ್ಯದ ಹವಾಮಾನ ಬದಲಾವಣೆ ಗಮನಿಸಿ ಮುಂದಿನ ಯೋಜನೆಯ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದೆ.

ಸಾರ್ವಜನಿಕರು ಬಿಸಿಲಿನಿಂದ ರಕ್ಷಣೆ ಪಡೆಯಲು ಹೆಚ್ಚು ನೀರು ಸೇವಿಸುವುದು ಹಾಗೂ ಸಾಂಕ್ರಾಮಿಕ ರೋಗಗಳ ತಡೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ: ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ಉಷ್ಣಾಂಶ

ಮೂರು ವರ್ಷಗಳಲ್ಲೇ ಸಾರ್ವಕಾಲಿಕ ದಾಖಲೆ ತಾಪಮಾನ:

ಸಾಮಾನ್ಯ ಸಂದರ್ಭಗಳಲ್ಲಿ ತಂಪಾದ ಹವೆ ಹಾಗೂ ಜಿಟಿಜಿಟಿ ಮಳೆಯಿಂದ ಕೂಡಿರುತ್ತಿದ್ದ ಸೆಪ್ಟೆಂಬರ್ ತಿಂಗಳಿನಲ್ಲಿ, ರಾಜಧಾನಿ ಬೆಂಗಳೂರು ಇದೀಗ ಅಸಾಮಾನ್ಯ ಹಾಗೂ ತೀವ್ರ ಸ್ವರೂಪದ ಬಿಸಿಲಿನ ತಾಪಕ್ಕೆ ಸಿಲುಕಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಗರಿಷ್ಠ 31.22°C ತಾಪಮಾನ ದಾಖಲಾಗಿದ್ದು, ಇದು ಸೆಪ್ಟೆಂಬರ್ ತಿಂಗಳಿನಲ್ಲಿ ಕಳೆದ ಮೂರು ವರ್ಷಗಳಲ್ಲೇ ಅತಿ ಹೆಚ್ಚಿನ ಉಷ್ಣಾಂಶವೆಂದು ಗುರುತಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿದ ಮಾಹಿತಿಯಂತೆ, ಪ್ರಸ್ತುತ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32°C ನಿಂದ 33°C ಆಸುಪಾಸಿನಲ್ಲಿದ್ದು, ಇದು ವಾಡಿಕೆ ಉಷ್ಣಾಂಶಕ್ಕಿಂತ ಬೊಬ್ಬರಿ 4°C ಅಧಿಕವಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ 33°C ಗಡಿ ದಾಟುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us