
ಬೆಂಗಳೂರು, ಆಗಸ್ಟ್ 27: ಆನೇಕಲ್ನ ಕೆಲ ಭಾಗಗಳಲ್ಲಿನ ರಸ್ತೆಗಳು ದುರಸ್ತಿ ಮಾಡಿದ ಆರು ತಿಂಗಳಲ್ಲೇ ಹದಗೆಡುತ್ತಿವೆ ಎಂದು ಉದ್ಯಮಿ, ಬಯೋಕಾನ್ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ (Kiran Mazumdar-Shaw) ಟೀಕಿಸಿದ್ದಾರೆ. ಅಲ್ಲದೆ, ಸರ್ಕಾರದ ಮೂಲಸೌಕರ್ಯ ನಿರ್ವಹಣೆಯ ಕಾಳಜಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ರಸ್ತೆ ದುರಸ್ತಿಗೆ ಕೈಗಾರಿಕೆಗಳು ಸಿಎಸ್ಆರ್ (CSR) ನಿಧಿ ನೀಡಬೇಕು ಎಂಬ ಆನೇಕಲ್ ಕಾಂಗ್ರೆಸ್ ಶಾಸಕರ ಸಲಹೆಯನ್ನೂ ಅವರು ತಿರಸ್ಕರಿಸಿದ್ದಾರೆ.
ಆನೇಕಲ್ ಕ್ಷೇತ್ರದ ಮೂಲಸೌಕರ್ಯ ಸುಧಾರಣೆಗೆ ಕೈಗಾರಿಕೆಗಳು ಹೆಚ್ಚಿನ ಕೊಡುಗೆ ನೀಡಬೇಕು ಎಂದು ಶಾಸಕ ಬಿ. ಶಿವಣ್ಣ ಇತ್ತೀಚೆಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್ ಮಜುಂದಾರ್ ಶಾ, ಇದು ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುವುದರ ಸುಳಿವು ಎಂದು ಟೀಕಿಸಿದ್ದಾರೆ.
ಸರ್ಕಾರದ ಅನುದಾನದಿಂದ ನಿರ್ಮಿಸಲಾದ ರಸ್ತೆಗಳು ಆರು ತಿಂಗಳೂ ಬಾಳಿಕೆ ಬರುತ್ತಿಲ್ಲ. ಕೈಗಾರಿಕೆಗಳು ಈಗಾಗಲೇ ಮೂಲಸೌಕರ್ಯ ಸುಧಾರಣೆಗೆ ತಮ್ಮ ಪಾಲಿನ ಕೊಡುಗೆಯನ್ನು ನೀಡಿವೆ ಎಂದು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Karnataka Congress MLA seeks CSR funds for road repair after Biocon’s Shaw flags crumbling infra. This is abdication of responsibilities. Industry has done more than its share of improving infra but roads built from govt funds have not even lasted 6 months https://t.co/AVwynV1MZQ
— Kiran Mazumdar-Shaw (@kiranshaw) August 26, 2026
ಇದಕ್ಕೂ ಒಂದು ದಿನ ಮೊದಲು ಆನೇಕಲ್ನ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಅವರು ಧ್ವನಿ ಎತ್ತಿದ್ದರು. ಹಲವು ವರ್ಷಗಳಿಂದ ಈ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದ್ದರೂ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಆರೋಪಿಸಿದ್ದರು. ಶಾಂತಿಪುರ ಮತ್ತು ಹುಸ್ಕೂರು ಭಾಗಗಳಲ್ಲಿನ ರಸ್ತೆಗಳ ದುಸ್ಥಿತಿಯನ್ನೂ ಅವರು ಪ್ರಸ್ತಾಪಿಸಿದ್ದರು.
ಆದರೆ ಕಿರಣ್ ಮಜುಂದಾರ್ ಶಾ ಆರೋಪವನ್ನು ಕಾಂಗ್ರೆಸ್ ಶಾಸಕ ಬಿ. ಶಿವಣ್ಣ ತಳ್ಳಿಹಾಕಿದ್ದಾರೆ. ಆನೇಕಲ್ನ ಬಹುತೇಕ ರಸ್ತೆಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕರು ದೂರು ನೀಡಿದಾಗ ತಾವು ಸ್ಪಂದಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಬಿಲಿಯನೇರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಅದಕ್ಕೆ ಹೆಚ್ಚಿನ ಪ್ರಚಾರ ನೀಡುವ ಅಗತ್ಯವಿಲ್ಲ ಎಂದೂ ಶಿವಣ್ಣ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.
ಆನೇಕಲ್ ಸೇರಿದಂತೆ ಬೆಂಗಳೂರಿನ ಹೊರವಲಯದ ಪ್ರದೇಶಗಳಲ್ಲಿನ ಕಳಪೆ ಮೂಲಸೌಕರ್ಯ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಗುಂಡಿಗಳಿಂದ ಕೂಡಿದ ರಸ್ತೆಗಳು, ಅಪೂರ್ಣ ಮರು ಡಾಂಬರೀಕರಣ ಹಾಗೂ ದುರಸ್ತಿ ಮಾಡಿದ ಬಳಿಕವೂ ಮತ್ತೆ ಹದಗೆಡುವ ರಸ್ತೆಗಳು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿವೆ.
ಇತ್ತೀಚೆಗೆ ಆನೇಕಲ್ನಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು 32 ವರ್ಷದ ಮಹಿಳೆಯೊಬ್ಬರು ವಾಹನಕ್ಕೆ ಸಿಲುಕಿ ಮೃತಪಟ್ಟ ಘಟನೆ ಬಳಿಕವೂ ಅಲ್ಲಿನ ರಸ್ತೆ ಗುಣಮಟ್ಟದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ