ಬೆಂಗಳೂರು: ರಸ್ತೆಗಳು ಆರು ತಿಂಗಳೂ ಬಾಳಲ್ಲ! ಆನೇಕಲ್ ರಸ್ತೆ ಅವ್ಯವಸ್ಥೆ ಬಗ್ಗೆ ಕಿರಣ್ ಮಜುಂದಾರ್ ಶಾ ಆಕ್ಷೇಪ

ಆನೇಕಲ್​ನ ರಸ್ತೆ ಗುಣಮಟ್ಟದ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಶಾ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ದುರಸ್ತಿ ಮಾಡಿದ ಆರು ತಿಂಗಳಲ್ಲೇ ರಸ್ತೆಗಳು ಹದಗೆಡುತ್ತಿವೆ ಎಂದು ಆರೋಪಿಸಿರುವ ಅವರು, ರಸ್ತೆ ದುರಸ್ತಿಗೆ ಕೈಗಾರಿಕೆಗಳ CSR (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಹಣ ಬಳಸುವ ಸಲಹೆಯನ್ನು ತಿರಸ್ಕರಿಸಿದ್ದಾರೆ.

ಬೆಂಗಳೂರು: ರಸ್ತೆಗಳು ಆರು ತಿಂಗಳೂ ಬಾಳಲ್ಲ! ಆನೇಕಲ್ ರಸ್ತೆ ಅವ್ಯವಸ್ಥೆ ಬಗ್ಗೆ ಕಿರಣ್ ಮಜುಂದಾರ್ ಶಾ ಆಕ್ಷೇಪ
ಕಿರಣ್ ಮಜುಂದಾರ್ ಶಾ ಹಾಗೂ ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ, ಆನೇಕಲ್ ರಸ್ತೆಯ ಚಿತ್ರ
Image Credit source: @kiranshaw

Updated on: Aug 27, 2026 | 7:58 AM

ಮುಖ್ಯಾಂಶಗಳು

  • ಆನೇಕಲ್ ರಸ್ತೆ ಗುಣಮಟ್ಟ ಪ್ರಶ್ನಿಸಿದ ಕಿರಣ್ ಮಜುಂದಾರ್ ಶಾ
  • ಆರು ತಿಂಗಳಲ್ಲೇ ರಸ್ತೆಗಳು ಹದಗೆಡುತ್ತಿವೆ ಎಂದು ಆಕ್ಷೇಪ
  • CSR ಹಣ ಬಳಸಿ ಮೂಲಸೌಕರ್ಯ ನಿರ್ಮಾಣ ಸಲಹೆಗೆ ತಿರುಗೇಟು

ಬೆಂಗಳೂರು, ಆಗಸ್ಟ್ 27: ಆನೇಕಲ್​ನ ಕೆಲ ಭಾಗಗಳಲ್ಲಿನ ರಸ್ತೆಗಳು ದುರಸ್ತಿ ಮಾಡಿದ ಆರು ತಿಂಗಳಲ್ಲೇ ಹದಗೆಡುತ್ತಿವೆ ಎಂದು ಉದ್ಯಮಿ, ಬಯೋಕಾನ್ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ (Kiran Mazumdar-Shaw) ಟೀಕಿಸಿದ್ದಾರೆ. ಅಲ್ಲದೆ, ಸರ್ಕಾರದ ಮೂಲಸೌಕರ್ಯ ನಿರ್ವಹಣೆಯ ಕಾಳಜಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ರಸ್ತೆ ದುರಸ್ತಿಗೆ ಕೈಗಾರಿಕೆಗಳು ಸಿಎಸ್‌ಆರ್‌ (CSR) ನಿಧಿ ನೀಡಬೇಕು ಎಂಬ ಆನೇಕಲ್ ಕಾಂಗ್ರೆಸ್ ಶಾಸಕರ ಸಲಹೆಯನ್ನೂ ಅವರು ತಿರಸ್ಕರಿಸಿದ್ದಾರೆ.

‘ರಸ್ತೆ ದುರಸ್ತಿಗೆ CSR ಹಣ ಏಕೆ?’

ಆನೇಕಲ್ ಕ್ಷೇತ್ರದ ಮೂಲಸೌಕರ್ಯ ಸುಧಾರಣೆಗೆ ಕೈಗಾರಿಕೆಗಳು ಹೆಚ್ಚಿನ ಕೊಡುಗೆ ನೀಡಬೇಕು ಎಂದು ಶಾಸಕ ಬಿ. ಶಿವಣ್ಣ ಇತ್ತೀಚೆಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್ ಮಜುಂದಾರ್ ಶಾ, ಇದು ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುವುದರ ಸುಳಿವು ಎಂದು ಟೀಕಿಸಿದ್ದಾರೆ.

ಸರ್ಕಾರದ ಅನುದಾನದಿಂದ ನಿರ್ಮಿಸಲಾದ ರಸ್ತೆಗಳು ಆರು ತಿಂಗಳೂ ಬಾಳಿಕೆ ಬರುತ್ತಿಲ್ಲ. ಕೈಗಾರಿಕೆಗಳು ಈಗಾಗಲೇ ಮೂಲಸೌಕರ್ಯ ಸುಧಾರಣೆಗೆ ತಮ್ಮ ಪಾಲಿನ ಕೊಡುಗೆಯನ್ನು ನೀಡಿವೆ ಎಂದು ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಿರಣ್ ಮಜುಂದಾರ್ ಶಾ ಎಕ್ಸ್ ಸಂದೇಶ


ಇದಕ್ಕೂ ಒಂದು ದಿನ ಮೊದಲು ಆನೇಕಲ್​ನ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಅವರು ಧ್ವನಿ ಎತ್ತಿದ್ದರು. ಹಲವು ವರ್ಷಗಳಿಂದ ಈ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದ್ದರೂ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಆರೋಪಿಸಿದ್ದರು. ಶಾಂತಿಪುರ ಮತ್ತು ಹುಸ್ಕೂರು ಭಾಗಗಳಲ್ಲಿನ ರಸ್ತೆಗಳ ದುಸ್ಥಿತಿಯನ್ನೂ ಅವರು ಪ್ರಸ್ತಾಪಿಸಿದ್ದರು.

ಕಾಂಗ್ರೆಸ್ ಶಾಸಕರು ಹೇಳಿದ್ದೇನು?

ಆದರೆ ಕಿರಣ್ ಮಜುಂದಾರ್ ಶಾ ಆರೋಪವನ್ನು ಕಾಂಗ್ರೆಸ್ ಶಾಸಕ ಬಿ. ಶಿವಣ್ಣ ತಳ್ಳಿಹಾಕಿದ್ದಾರೆ. ಆನೇಕಲ್​ನ ಬಹುತೇಕ ರಸ್ತೆಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕರು ದೂರು ನೀಡಿದಾಗ ತಾವು ಸ್ಪಂದಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಬಿಲಿಯನೇರ್‌ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಅದಕ್ಕೆ ಹೆಚ್ಚಿನ ಪ್ರಚಾರ ನೀಡುವ ಅಗತ್ಯವಿಲ್ಲ ಎಂದೂ ಶಿವಣ್ಣ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.

ಆನೇಕಲ್​ ಸೇರಿದಂತೆ ಬೆಂಗಳೂರಿನ ಹೊರವಲಯದ ಪ್ರದೇಶಗಳಲ್ಲಿನ ಕಳಪೆ ಮೂಲಸೌಕರ್ಯ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಗುಂಡಿಗಳಿಂದ ಕೂಡಿದ ರಸ್ತೆಗಳು, ಅಪೂರ್ಣ ಮರು ಡಾಂಬರೀಕರಣ ಹಾಗೂ ದುರಸ್ತಿ ಮಾಡಿದ ಬಳಿಕವೂ ಮತ್ತೆ ಹದಗೆಡುವ ರಸ್ತೆಗಳು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿವೆ.

ಇತ್ತೀಚೆಗೆ ಆನೇಕಲ್​ನಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು 32 ವರ್ಷದ ಮಹಿಳೆಯೊಬ್ಬರು ವಾಹನಕ್ಕೆ ಸಿಲುಕಿ ಮೃತಪಟ್ಟ ಘಟನೆ ಬಳಿಕವೂ ಅಲ್ಲಿನ ರಸ್ತೆ ಗುಣಮಟ್ಟದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us