ಹನೂರು ಎನ್ ಕೌಂಟರ್ ಬೆನ್ನಲ್ಲೇ ಬಯಲಾಯ್ತು ಅಂತರರಾಷ್ಟ್ರೀಯ ಜಾಲ: ಚಾಮರಾಜನಗರದಿಂದ ಚೀನಾ, ಮಲೇಷಿಯಾಗೆ ಚಿಪ್ಪುಹಂದಿ ಸ್ಮಗ್ಲಿಂಗ್
ಚಾಮರಾಜನಗರದಲ್ಲಿ ಅಂತರರಾಷ್ಟ್ರೀಯ ಚಿಪ್ಪುಹಂದಿ ಕಳ್ಳಸಾಗಣೆ ಜಾಲ ಬಯಲಾಗಿದೆ. ಹನೂರು ಅರಣ್ಯದ ಬೇಟೆಗಾರರ ಎನ್ಕೌಂಟರ್ನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಕಿಂಗ್ಪಿನ್ ಮುನಿಯಾಂಡಿ ನೇತೃತ್ವದಲ್ಲಿ ಚೀನಾ, ಮಲೇಷ್ಯಾ ಸೇರಿದಂತೆ ವಿದೇಶಗಳಿಗೆ ಚಿಪ್ಪುಹಂದಿ ಚಿಪ್ಪು ಸಾಗಿಸಲಾಗುತ್ತಿತ್ತು. ರಾಬರ್ಟ್ ಪಿಂಟೋ ಎಂಬಾತನೂ ಇದರಲ್ಲಿ ಭಾಗಿಯಾಗಿದ್ದಾನೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿಪ್ಪುಹಂದಿಗೆ ಭಾರಿ ಬೇಡಿಕೆ ಇರುವುದರಿಂದ ಈ ಕಳ್ಳಸಾಗಣೆ ನಡೆಯುತ್ತಿದೆ.

ಚಾಮರಾಜನಗರ, ಆ.27: ಹನೂರು ಅರಣ್ಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಮೂವರು ಬೇಟೆಗಾರರ ಎನ್ ಕೌಂಟರ್ ಪ್ರಕರಣ ದಿನಕ್ಕೊಂದು ಸ್ಪೋಟಕ ತಿರುವು ಪಡೆದುಕೊಳ್ಳುತ್ತಿದೆ. ಘಟನೆ ನಡೆದ ದಿನಗಳು ಕಳೆದಂತೆ ಚಾಮರಾಜನಗರ ಜಿಲ್ಲೆಯನ್ನೇ ತಮ್ಮ ಆವಾಸಸ್ಥಾನ ಮಾಡಿಕೊಂಡಿದ್ದ ಅಂತರರಾಷ್ಟ್ರೀಯ ಕಾಡುಗಳ್ಳರ ಕರಾಳ ಜಾಲ ಒಂದೊಂದಾಗಿ ಬಯಲಾಗುತ್ತಿದೆ.
ಚಾಮರಾಜನಗರ ಹಾಗೂ ತಮಿಳುನಾಡು ಗಡಿ ಭಾಗದಿಂದ ಚೀನಾ, ಮಲೇಷಿಯಾ ಸೇರಿದಂತೆ ವಿದೇಶಗಳಿಗೆ ಅಪರೂಪದ ‘ಚಿಪ್ಪುಹಂದಿ’ ಸ್ಮಗ್ಲಿಂಗ್ ಮಾಡುತ್ತಿದ್ದ ಅತಿ ದೊಡ್ಡ ನೆಟ್ವರ್ಕ್ ಇದೀಗ ಬೆಳಕಿಗೆ ಬಂದಿದೆ. ಈ ಅಂತರರಾಷ್ಟ್ರೀಯ ಸ್ಮಗ್ಲಿಂಗ್ ಜಾಲದ ಮುಖ್ಯ ಕಿಂಗ್ ಪಿನ್ ‘ಮುನಿಯಾಂಡಿ’ ಎನ್ನಲಾಗಿದ್ದು, ಆತ ತನ್ನ ಸಹಚರರನ್ನು ಬಳಸಿಕೊಂಡು ಬೃಹತ್ ಕಾಡುಗಳ್ಳರ ನೆಟ್ವರ್ಕ್ ಸೃಷ್ಟಿಸಿದ್ದಾನೆ.
ಮುನಿಯಾಂಡಿ ಜೊತೆ ನಿಕಟ ಸಂಪರ್ಕ ಹೊಂದಿದ್ದ ಪ್ರಮುಖ ಆರೋಪಿ ರಾಬರ್ಟ್ ಪಿಂಟೋ ಪೆರಿಯನಾಯಗನ್. ಈತ ಎಂಎಸ್ಸಿ (M.Sc) ಪದವೀಧರನಾಗಿದ್ದು, ವಿದ್ಯಾಭ್ಯಾಸದ ಹಿನ್ನೆಲೆಯನ್ನು ಅಕ್ರಮ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದ. ಮುನಿಯಾಂಡಿಯ ಆದೇಶದ ಮೇರೆಗೆ ರಾಬರ್ಟ್ ಪಿಂಟೋ, ಬೇಟೆಯಾಡಿದ ಚಿಪ್ಪುಹಂದಿಯ ಅವಶೇಷಗಳನ್ನು ತನ್ನ ಮನೆಯ ನೀರಿನ ಸಂಪಿನಲ್ಲಿ (Water Sump) ರಹಸ್ಯವಾಗಿ ಅಡಗಿಸಿಡುತ್ತಿದ್ದನು. ನಂತರ ಅಲ್ಲಿಂದ ಬೇರೆ ಬೇರೆ ರಹಸ್ಯ ಸ್ಥಳಗಳಿಗೆ ಹಾಗೂ ವಿದೇಶಿ ಜಾಲಕ್ಕೆ ರವಾನಿಸುತ್ತಿದ್ದ.
ರಾಬರ್ಟ್ ಪಿಂಟೋ ವಿರುದ್ಧ 2017ರಲ್ಲೇ ತಮಿಳುನಾಡಿನ ಸತ್ಯಮಂಗಲ ಟೈಗರ್ ರಿಸರ್ವ್ (Sathyamangalam Tiger Reserve) ಫಾರೆಸ್ಟ್ನಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಅರಣ್ಯ ಸಿಬ್ಬಂದಿಯಿಂದ ಮೂವರು ಬೇಟೆಗಾರರ ಎನ್ಕೌಂಟರ್ ನಡೆದ ತಕ್ಷಣ, ಹನೂರು ಪೊಲೀಸ್ ಠಾಣೆಯ ಮುಂದೆ ಸಾರ್ವಜನಿಕರನ್ನು ಎತ್ತಿಕಟ್ಟಿ ಭಾರಿ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಆರೋಪಿ ರಾಬರ್ಟ್ ಪಿಂಟೋ ಮುಂಚೂಣಿಯಲ್ಲಿದ್ದು, ಘಟನೆಯನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿದ್ದ ಎಂಬ ಸ್ಪೋಟಕ ಮಾಹಿತಿ ಈಗ ಲಭ್ಯವಾಗಿದೆ.
ಇದನ್ನೂ ಓದಿ: ಚನ್ನಪಟ್ಟಣದ ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು ಪ್ರತ್ಯಕ್ಷ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿಪ್ಪುಹಂದಿಗೆ ಭಾರಿ ಡಿಮ್ಯಾಂಡ್
ಚಿಪ್ಪುಹಂದಿಯ ಮೈಮೇಲಿರುವ ಚಿಪ್ಪಿಗೆ ಚೀನಾ ಸೇರಿದಂತೆ ಪೂರ್ವ ಏಷ್ಯಾದ ದೇಶಗಳಲ್ಲಿ ಸಾಂಪ್ರದಾಯಿಕ ಔಷಧ ತಯಾರಿಕೆಗೆ ಭಾರಿ ಬೇಡಿಕೆಯಿದೆ. ಅಂತರರಾಷ್ಟ್ರೀಯ ಕಪ್ಪು ಮಾರುಕಟ್ಟೆಯಲ್ಲಿಇದರ ಚಿಪ್ಪು ಹಾಗೂ ಮಾಂಸಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯವಿದ್ದು, ಈ ಕಾರಣಕ್ಕಾಗಿ ಕಾಡುಗಳ್ಳರು ನಿರಂತರವಾಗಿ ಚಿಪ್ಪುಹಂದಿಗಳ ಬೇಟೆಯಲ್ಲಿ ತೊಡಗಿದ್ದರು. ಎನ್ಕೌಂಟರ್ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಕಾಡುಗಳ್ಳರ ನೆಟ್ವರ್ಕ್ನ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆಯಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



