AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕಿದ್ದರೂ ದಾಖಲೆಯಲ್ಲಿ ‘ಮೃತ’: ಅಧಿಕಾರಿಗಳ ಎಡವಟ್ಟಿಗೆ ಹಂಪಮ್ಮ ಪರದಾಟ; ಉಪ ಲೋಕಾಯುಕ್ತರು ಮಾಡಿದ್ದೇನೆ ನೋಡಿ

ಹೊಸಪೇಟೆ ತಾಲ್ಲೂಕಿನ ಎನ್. ಹಂಪಮ್ಮ ಅವರನ್ನು ದಾಖಲೆಗಳಲ್ಲಿ ಮೃತ ಎಂದು ನಮೂದಿಸಿ, ಸರ್ಕಾರಿ ಸವಲತ್ತುಗಳಿಂದ ವಂಚಿಸಲಾಗಿತ್ತು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಈ ದುರಾಡಳಿತದ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ತಹಶೀಲ್ದಾರ್, ಇಒ, ಪಿಡಿಒಗೆ ನೋಟಿಸ್ ನೀಡಲಾಗಿದ್ದು, ಹಂಪಮ್ಮ ಅವರ ಆಧಾರ್ ದೋಷ ಸರಿಪಡಿಸಿ, ಸವಲತ್ತು ನೀಡಲು ಸೂಚಿಸಲಾಗಿದೆ.

ಬದುಕಿದ್ದರೂ ದಾಖಲೆಯಲ್ಲಿ 'ಮೃತ': ಅಧಿಕಾರಿಗಳ ಎಡವಟ್ಟಿಗೆ ಹಂಪಮ್ಮ ಪರದಾಟ; ಉಪ ಲೋಕಾಯುಕ್ತರು ಮಾಡಿದ್ದೇನೆ ನೋಡಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Apr 03, 2026 | 9:22 AM

Share

ಹೊಸಪೇಟೆ, ಏ,3: ಜೀವಂತವಾಗಿದ್ದರೂ ಮಹಿಳೆಯೊಬ್ಬರನ್ನು ದಾಖಲೆಗಳಲ್ಲಿ ‘ಮೃತ’ ಎಂದು ತೋರಿಸಿ, ಸರ್ಕಾರದ ಸವಲತ್ತುಗಳಿಂದ ವಂಚಿತರನ್ನಾಗಿಸಿದ ಹೊಸಪೇಟೆ ತಾಲ್ಲೂಕಿನ ಕಂದಾಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೊಸಪೇಟೆ ತಾಲ್ಲೂಕಿನ ಧರ್ಮಸಾಗರ ಗ್ರಾಮದ ನಿವಾಸಿ ಎನ್. ಹಂಪಮ್ಮ ಅವರು ಈ ದುರಾಡಳಿತದ ಬಲಿಪಶು. ಅದೇ ಗ್ರಾಮದ ಎನ್. ತಿಮ್ಮಾರೆಡ್ಡಿ ಅವರ ಪತ್ನಿ ಹಂಪಮ್ಮ ಎಂಬುವವರು 2024 ರಲ್ಲಿ ನಿಧನರಾಗಿದ್ದರು. ಆದರೆ, ಅಧಿಕಾರಿಗಳು ಯಾವುದೇ ಪ್ರಾಥಮಿಕ ಪರಿಶೀಲನೆ ನಡೆಸದೆ, ದಾಖಲೆಗಳಲ್ಲಿ ಸಂತ್ರಸ್ತೆ ಎನ್. ಹಂಪಮ್ಮ ಅವರನ್ನೇ ಮೃತ ಎಂದು ನಮೂದಿಸಿದ್ದರು.

ತಾನು ಬದುಕಿದ್ದೇನೆ ಎಂದು ಸಾಬೀತುಪಡಿಸಲು ಹಂಪಮ್ಮ ಅವರು ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದಾರೆ. ಆಧಾರ್ ಕಾರ್ಡ್‌ನಲ್ಲಿನ ದೋಷ ಸರಿಪಡಿಸಿ, ತಮಗೆ ಸಿಗಬೇಕಾದ ಸರ್ಕಾರಿ ಯೋಜನೆಗಳ ಲಾಭ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸಿರಲಿಲ್ಲ. ಈ ಕುರಿತು ಏಪ್ರಿಲ್ 1 ರಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಗದಗ: ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಅನೈತಿಕ ಸಂಬಂಧವೇ ಮುಳುವಾಯ್ತು, ಮೂವರು ಅರೆಸ್ಟ್!

ಈ ಘಟನೆಯನ್ನು ‘ದುರಾಡಳಿತ’ ಮತ್ತು ‘ಕರ್ತವ್ಯ ಲೋಪ’ ಎಂದು ಪರಿಗಣಿಸಿರುವ ಉಪ ಲೋಕಾಯುಕ್ತರು ಕೆಲವೊಂದು ನಿರ್ದೇಶನಗಳನ್ನು ನೋಡಿದ್ದಾರೆ. ಹೊಸಪೇಟೆ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ (EO) ಮತ್ತು ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿಯ ಪಿಡಿಒ (PDO) ಅವರಿಗೆ ನೋಟಿಸ್ ನೀಡಲಾಗಿದ್ದು, ಮೇ 20, 2026 ರಂದು ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಲಾಗಿದೆ. ಹಂಪಮ್ಮ ಅವರ ಆಧಾರ್ ಕಾರ್ಡ್ ದೋಷಗಳನ್ನು ಕೂಡಲೇ ಸರಿಪಡಿಸಿ, ಅವರಿಗೆ ಸವಲತ್ತುಗಳು ಸಿಗುವಂತೆ ಮಾಡಲು ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಪ್ರಕರಣದ ಗಾಂಭೀರ್ಯತೆಯನ್ನು ಅರಿತು, ಆದೇಶದ ಪ್ರತಿಯನ್ನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಿಗೂ ರವಾನಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us