ಕರ್ನಾಟಕದಲ್ಲೂ ಮಹಾರಾಷ್ಟ್ರ ಮಾದರಿ ರೂಲ್ಸ್? ಕನ್ನಡ ಬಾರದ ಕ್ಯಾಬ್ ಚಾಲಕರ ಡಿಎಲ್ ರದ್ದುಪಡಿಸಲು ಹೆಚ್ಚಿದ ಒತ್ತಾಯ

ಮಹಾರಾಷ್ಟ್ರದಲ್ಲಿ ಮರಾಠಿ ಬಾರದ ಚಾಲಕರ ಡಿಎಲ್ ರದ್ದುಗೊಳಿಸುವ ನಿಯಮದ ಬೆನ್ನಲ್ಲೇ, ಕರ್ನಾಟಕದಲ್ಲೂ ಕನ್ನಡ ಬಾರದ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಪರವಾನಗಿ ನೀಡಬಾರದು ಎಂಬ ಆಗ್ರಹ ಕೇಳಿಬಂದಿದೆ. ಸಾರಿಗೆ ಸಂಘಟನೆಗಳ ಒಕ್ಕೂಟವು ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲು ಸಿದ್ಧತೆ ನಡೆಸಿದ್ದು, ಕನ್ನಡ ಕಡ್ಡಾಯದ ಚರ್ಚೆ ತೀವ್ರಗೊಂಡಿದೆ.

ಕರ್ನಾಟಕದಲ್ಲೂ ಮಹಾರಾಷ್ಟ್ರ ಮಾದರಿ ರೂಲ್ಸ್? ಕನ್ನಡ ಬಾರದ ಕ್ಯಾಬ್ ಚಾಲಕರ ಡಿಎಲ್ ರದ್ದುಪಡಿಸಲು ಹೆಚ್ಚಿದ ಒತ್ತಾಯ
ಸಾಂದರ್ಭಿಕ ಚಿತ್ರ
Image Credit source: News9live.com
Edited By:

Updated on: Apr 18, 2026 | 6:29 AM

ಬೆಂಗಳೂರು, ಏಪ್ರಿಲ್ 18: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಅನ್ಯಭಾಷಿಕ ಆಟೋ ಮತ್ತು ಕ್ಯಾಬ್ ಚಾಲಕರ ಸಂಖ್ಯೆ ಹೆಚ್ಚುತ್ತಿದ್ದು, ಭಾಷೆಯ ಸಮಸ್ಯೆಯಿಂದಾಗಿ ಪ್ರಯಾಣಿಕರು ಮತ್ತು ಚಾಲಕರ ನಡುವೆ ನಿತ್ಯ ಗಲಾಟೆಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲೇ ಕರ್ನಾಟಕದಲ್ಲೂ ಕನ್ನಡ ಬಾರದ ಚಾಲಕರ ಚಾಲನಾ ಪರವಾನಗಿ (DL) ರದ್ದುಪಡಿಸುವ ನಿಯಮ ಜಾರಿಗೆ ತರಬೇಕು ಎಂಬ ಬಲವಾದ ಆಗ್ರಹ ಕೇಳಿಬಂದಿದೆ.

ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ನಿಯಮ

ಮಹಾರಾಷ್ಟ್ರ ಸರ್ಕಾರವು ಮೇ 1ರ ‘ಮಹಾರಾಷ್ಟ್ರ ದಿನಾಚರಣೆ’ಯ ಅಂಗವಾಗಿ ಹೊಸ ನಿಯಮವೊಂದನ್ನು ಜಾರಿಗೆ ತರುತ್ತಿದೆ. ಅಲ್ಲಿನ ಸಾರಿಗೆ ಇಲಾಖೆಯು ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ಬಾರದ ಆಟೋ ಹಾಗೂ ಕ್ಯಾಬ್ ಚಾಲಕರ ಪರವಾನಗಿಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ನಾಡಿನ ಭಾಷೆ ತಿಳಿಯದವರಿಂದ ಪ್ರಯಾಣಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದೇ ಮಾದರಿಯನ್ನು ಈಗ ಕರ್ನಾಟಕದ ಖಾಸಗಿ ಸಾರಿಗೆ ಸಂಘಟನೆಗಳು ಒತ್ತಾಯಿಸುತ್ತಿವೆ.

ಕನ್ನಡ ಕಡ್ಡಾಯಕ್ಕೆ ಆಗ್ರಹ

ಕನ್ನಡ ಬಾರದ ವಲಸಿಗ ಚಾಲಕರು ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸುವುದು, ತಪ್ಪು ದಾರಿ ತೋರಿಸುವುದು ಮತ್ತು ಮೀಟರ್ ವ್ಯವಹಾರದಲ್ಲಿ ವಂಚನೆ ಮಾಡುವುದಕ್ಕೆ ಕಡಿವಾಣ ಹಾಕಲು ಈ ಕಾನೂನು ಅನಿವಾರ್ಯ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ ತಿಳಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಿಗೆ ಪತ್ರ ಬರೆಯಲು ಒಕ್ಕೂಟ ನಿರ್ಧರಿಸಿದೆ. ಪಕ್ಕದ ತಮಿಳುನಾಡಿನಲ್ಲೂ ಚಾಲನಾ ಪರವಾನಗಿ ನವೀಕರಿಸುವಾಗ ಸ್ಥಳೀಯ ಭಾಷೆಯ ಜ್ಞಾನವನ್ನು ಪರೀಕ್ಷಿಸಲಾಗುತ್ತಿದೆ ಎಂಬ ಅಂಶವನ್ನೂ ಇಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಶಿಕ್ಷಣ ಇಲಾಖೆ ಎಡವಟ್ಟಿನಿಂದ ಫಲಿತಾಂಶ ಕುಸಿತದ ಭೀತಿಯಲ್ಲಿ SSLC ವಿದ್ಯಾರ್ಥಿಗಳು! ಸರ್ಕಾರದ ವಿರುದ್ಧ ಪೋಷಕರ ಆಕ್ರೋಶ

ಒಟ್ಟಿನಲ್ಲಿ, ‘ಕನ್ನಡ ಗೊತ್ತಿದ್ದವರಿಗೆ ಮಾತ್ರ ಡ್ರೈವಿಂಗ್ ಲೈಸೆನ್ಸ್’ ಎಂಬ ಕೂಗು ರಾಜ್ಯಾದ್ಯಂತ ಕೇಳಿಬರುತ್ತಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us