
ಬೆಂಗಳೂರು, ಫೆಬ್ರವರಿ 08: ನಮ್ಮ ಮೆಟ್ರೋ ಬೆಲೆ ಏರಿಕೆ ವಿಚಾರವಾಗಿ ಪ್ರಯಾಣಿಕರ ಆಕ್ರೋಶ ಒಂದೆಡೆಯಾದ್ರೆ ರಾಜಕೀಯ ಕೆಸರೆರೆಚಾಟಗಳು ಮತ್ತೊಂದೆಡೆ ನಡೆಯುತ್ತಿವೆ. ಈ ನಡುವೆ ಬಿಎಂಆರ್ಸಿಎಲ್ ಮಾತ್ರ ನಾಳೆಯಿಂದಲೇ ದರ ಏರಿಕೆ ಆಗೋದು ಫಿಕ್ಸ್ ಎಂದಿದೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ BMRCL ಎಂಡಿ ರವಿಶಂಕರ್, ಕೇಂದ್ರ ಸರ್ಕಾರದಿಂದ ಅಧಿಸೂಚನೆ ಬಾರದ ಕಾರಣ ಮೆಟ್ರೋ ದರ ಏರಿಕೆಗೆ ಸದ್ಯ ತಡೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ತುರ್ತಾಗಿ ದರ ಏರಿಕೆ ನಿಲ್ಲಿಸುವಂತೆ ಆದೇಶ ಬಂದರೆ ಮಾತ್ರ ಈ ನಿರ್ಧಾರಕ್ಕೆ ಬ್ರೇಕ್ ಬೀಳಲಿದೆ ಎಂದು ತಿಳಿಸಿದ್ದಾರೆ.
ಸೋಮವಾರದಿಂದ ನಮ್ಮ ಮೆಟ್ರೋ ರೈಲುಗಳ ಟಿಕೆಟ್ ದರ ಹೆಚ್ಚಳ ಆಗೋದಿಲ್ಲ. ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಕಟ್ಟರ್ ಇದಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ ಎಂದು ಸಂಸದ ತೇಜಸ್ವಿಸೂರ್ಯ ಹೇಳಿದ್ದರು. ಆದರೆ ಇತ್ತ BMRCL ಅಧಿಕಾರಿಗಳು ಮಾತ್ರ, ನಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಅಲ್ಲಿಯವರೆಗೆ ನಮ್ಮ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಮಾಹಿತಿ ಬಂದ ನಂತರ ಟಿಕೆಟ್ ದರ ಇಳಿಕೆ ಬಗ್ಗೆ ತೀರ್ಮಾನ ಮಾಡುತ್ತೇವೆ ಅಂತಿದ್ದಾರೆ.
ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಸಮರ; ಯುದ್ಧ ಪೂರ್ತಿ ಗೆದ್ದಿಲ್ಲ ಎಂದ ಸಂಸದ
ಇನ್ನು ನಾಳೆಯಿಂದ ಟಿಕೆಟ್ ದರ ಏರಿಕೆಗೆ ಒಂದೊಮ್ಮೆ ಬ್ರೇಕ್ ಬಿದ್ದರೂ ಅದು ಕೇವಲ ತಾತ್ಕಾಲಿಕ ಅವಧಿಗೆ ಮಾತ್ರ. ಮುಂದೆ ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ರೇಟ್ ಹೆಚ್ಚಳ ಆಗೋದು ಪಕ್ಕಾ ಎನ್ನುವ ಮಾಹಿತಿ ಕೂಡ ಇದೆ. ಈ ವರ್ಷ ಫೆಬ್ರವರಿಯಲ್ಲಿ ಟಿಕೆಟ್ ದರ ವಾರ್ಷಿಕವಾಗಿ ಶೇ.5ರಷ್ಟು ಹೆಚ್ಚಳ ಮಾಡದಿದ್ದರೆ ಮುಂದಿನ ವರ್ಷ ಶೇ.10ರಷ್ಟು ಏರಿಕೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎನ್ನುವ ಬಗ್ಗೆ ಮಾಹಿತಿಯನ್ನು BMRCL ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೀಡಿದ್ದಾರಂತೆ.
ಮತ್ತೊಂದೆಡೆ ಫೆಬ್ರವರಿ 9ರಿಂದ (ನಾಳೆ) ಟಿಕೆಟ್ ದರ ಏರಿಕೆ ಹಿನ್ನೆಲೆ ಬೆಂಗಳೂರಿನ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಕೋರಿ ಪೊಲೀಸರಿಗೆ ಪತ್ರ ಬರೆಯಲಾಗಿದೆ. ದರ ಏರಿಕೆ ವಿರೋಧಿಸಿ ಆಗಬಹುದಾದ ಅಹಿತಕರ ಘಟನೆ ತಪ್ಪಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗ್ತಿದ್ದು, ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಭದ್ರತೆ ಕೋರಿ ಶಂಕರಪುರಂ ಠಾಣೆಗೆ ಮನವಿ ನೀಡಲಾಗಿದೆ. ಫೆಬ್ರವರಿ 9ರಿಂದ 11ರ ವರೆಗೂ ಮೆಟ್ರೋ ನಿಲ್ದಾಣದ ಒಳಗೆ ಹಾಗೂ ಹೊರಗೆ ಭದ್ರತೆಗೆ ಆಗ್ರಹಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:38 pm, Sun, 8 February 26